ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಸರಕಾರದ ಖಜಾನೆ ಲೂಟಿ: ಯಡಿಯೂರಪ್ಪ
"ಟಿಪ್ಪು ಜಯಂತಿ ಮೂಲಕ ಸರಕಾರ ವಿಷಬೀಜ ಬಿತ್ತುತ್ತಿದೆ"

ಪೊಲೀಸರು ಕಾನೂನಿನಂತೆ ನಡೆದುಕೊಳ್ಳಿ, ಇಲ್ಲದಿದ್ದರೆ ನಮ್ಮ ಹುಡುಗರೇ ನಿಮಗೆ ಉತ್ತರಿಸುತ್ತಾರೆ ಎಂದ ಶೋಭಾ ಕರಂದ್ಲಾಜೆ
ಪುತ್ತೂರು, ನ. 10: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರದ ಖಜಾನೆಯನ್ನು ಲೂಟಿ ಮಾಡಿದ್ದಾರೆ. ರಾಜ್ಯದಲ್ಲಿ ಕಮಿಷನ್ ಪಡೆದುಕೊಂಡು ಟೆಂಡರ್ ನೀಡುವ ಕೆಲಸ ನಡೆಯುತ್ತಿದೆ. ಬೆಂಗಳೂರಿನ ಬಿಬಿಎಂಪಿ ಸೈಟುಗಳನ್ನು ಒತ್ತೆ ಇಟ್ಟು ಸಾಲ ಪಡೆಯುವ ದುಸ್ಥಿತಿ ಮುಖ್ಯಮಂತ್ರಿಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ಮಹಾನ್ ಸುಳ್ಳುಗಾರ. ವಿಧಾನಸೌಧವನ್ನು ಮಾರಿಯಾದರೂ, ಒತ್ತೆ ಇಟ್ಟಾದರೂ ಅಧಿಕಾರ ಚಲಾಯಿಸುತ್ತೇನೆ ಎನ್ನುವ ಮುಖ್ಯಮಂತ್ರಿ ರಾಜ್ಯದಲ್ಲಿರುವುದು ನಮ್ಮ ದೌರ್ಭಾಗ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದರು.
ಅವರು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದ ಪರಿವರ್ತನಾ ಯಾತ್ರೆ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿ ಸಾಬೀತಾಗಿರುವ ವೇಣುಗೋಪಾಲ್ ಅವರನ್ನು ಲೋಕಸಭಾ ಸದಸ್ಯರಾಗಿ ಮತ್ತು ಕರ್ನಾಟಕ ರಾಜ್ಯದ ಉಸ್ತುವಾರಿಯಾಗಿ ಮುಂದುವರಿಸುತ್ತೀರಾ ಎಂಬ ನಮ್ಮ ಪ್ರಶ್ನೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಉತ್ತರ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾನ, ಮರ್ಯಾದೆಯಿದ್ದಲ್ಲಿ ವೇಣುಗೋಪಾಲ್ ಅವರನ್ನು ತಕ್ಷಣ ಬಂಧಿಸಿ ಜೈಲಿಗೆ ಕಳುಹಿಸಲು ಕ್ರಮಕೈಗೊಳ್ಳಲಿ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅತ್ಯಂತ ಹದಗೆಟ್ಟಿದೆ. 2,534 ಮಹಿಳೆಯರ ಸಹಿತ 6,521 ಕೊಲೆ ಪ್ರಕರಣಗಳು, 3,102 ಅತ್ಯಾಚಾರ ಪ್ರಕರಣಗಳು ರಾಜ್ಯದಲ್ಲಿ ನಡೆದಿವೆ. ಕಾಂಗ್ರೆಸ್ ಸರಕಾರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡುವ ಯೋಗ್ಯತೆ ಇಲ್ಲವಾಗಿದೆ. ರಾಜ್ಯದ ಅಭಿವೃದ್ಧಿ ಕಾರ್ಯವನ್ನು ನಿರ್ಲಕ್ಷಿಸಿ, ಯಾರೊಬ್ಬ ಮುಸಲ್ಮಾನರು ಟಿಪ್ಪು ಜಯಂತಿ ಮಾಡಿ ಎಂದು ಹೇಳದಿದ್ದರೂ ಕೊಲೆಗಡುಕ, ದೇವಾಲಯಗಳ ನೆಲಸಮ ಮಾಡಿದ, ಹಿಂದೂಗಳ ಮತಾಂತರ ಮಾಡಿದ, ಚರ್ಚ್ ಮೇಲೆ ದಾಳಿ ನಡೆಸಿದ ಮತಾಂಧ, ಕೋಮುವಾದಿ ಟಿಪ್ಪುವಿನ ಜಯಂತಿ ಆಚರಿಸುವ ಮೂಲಕ ಸಿದ್ದರಾಮಯ್ಯ ಸರಕಾರ ಜಾತಿಯ ವಿಷಬೀಜ ಬಿತ್ತುತ್ತಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನ್ನು ವಿಸರ್ಜನೆ ಮಾಡಿ ಎಂದು ಹೇಳಿದ್ದ ಗಾಂಧಿ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತವನ್ನಾಗಿಸಿ ದೇಶದಲ್ಲಿ ಬದಲಾವಣೆ ಮತ್ತು ಪರಿವರ್ತನೆ ತರುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಸಮಾನತೆಯಿಂದ ಬದುಕಬೇಕು, ರೈತಾಪಿ ವರ್ಗ ನೆಮ್ಮದಿಯ ಜೀವನ ನಡೆಸಬೇಕು ಎಂಬ ಆಶಯದೊಂದಿಗೆ ರಾಜ್ಯವನ್ನು ಕಾಂಗ್ರೆಸ್ ಮುಕ್ತಗೊಳಿಸಲು 150 ಸ್ಥಾನಗಳ ಗುರಿ ನೀಡಿದ್ದಾರೆ. ಈ ಕೆಲಸವನ್ನು ನಾವು ಪರಿವರ್ತನಾ ಯಾತ್ರೆ ಮೂಲಕ ಮಾಡುತ್ತಿದ್ದೇವೆ. ಬಿಜೆಪಿ ಪರಿವರ್ತನಾ ಯಾತ್ರೆ ಬಗ್ಗೆ ಏನೇನೋ ಮಾತನಾಡಲು ಆರಂಭಿಸಿರುವ ಸಿದ್ದರಾಮಯ್ಯ ಅವರು ನಮ್ಮ ಯಾತ್ರೆಯನ್ನು ಹಿಂಬಾಲಿಸಿ ಸರಕಾರಿ ಪ್ರವಾಸ ಕೈಗೊಳ್ಳಲು ಹೊರಟಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ್ ಅವರು ಈ ಸರಕಾರಿ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂಬುವುದು ಜಗಜ್ಜಾಹೀರಾಗಿದೆ ಎಂದ ಅವರು, ನನ್ನನ್ನು ಕಂಡರೆ ಪ್ರಧಾನಿ ಮೋದಿ ಹೆದರಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ನಗೆಪಾಟಲು ಹೇಳಿಕೆ ನೀಡಲಾರಂಭಿಸಿದ್ದಾರೆ. ಇದು ಅವರ ಬಚ್ಚಾತನವೆಂದು ಯಡಿಯೂರಪ್ಪ ಹೇಳಿದರು.
ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನ ಕೊನೆಯ ದಿನಗಳು ಆರಂಭವಾಗಿದೆ. ಇದಕ್ಕೆ ಸಿದ್ದರಾಮಯ್ಯ ಅವರೇ ಸಮಾರೋಪ ಭಾಷಣ ಮಾಡಲು ಹೊರಟಿದ್ದಾರೆ. ರಾಜ್ಯದೆಲ್ಲೆಡೆ ಬಿಜೆಪಿ ಅಲೆ ಎದ್ದಿದ್ದು "ಯಡಿಯೂರಪ್ಪ ಬೇಕು, ಸಿದ್ದರಾಮಯ್ಯ ಸಾಕು" ಎಂಬ ಭಾವನೆ ಜನತೆಯಲ್ಲಿ ಮನೆ ಮಾಡಿದೆ. ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ 2018ರಲ್ಲಿ ರಾಜ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಸರಕಾರಕ್ಕೆ ಕೊನೆಯ ಮೊಳೆ ಹಾಕಬೇಕು ಎಂದು ಹೇಳಿದರು.
ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಪೊಲೀಸರು ಈಗ ರಾಜ್ಯ ಸರಕಾರದ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ. ಪೊಲೀಸರು ಸರಕಾರ ಶಾಶ್ವತವಲ್ಲ. ನಾವು ಶಾಶ್ವತ ಎಂದು ತಿಳಿದುಕೊಂಡು ಕಾನೂನಿನಂತೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಹುಡುಗರೇ ನಿಮಗೆ ಉತ್ತರ ಕೊಡುತ್ತಾರೆ. ಇಲ್ಲದಿದ್ದರೆ ಕೊಡಬೇಕಾಗುತ್ತದೆ ಎಂದು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವರಾದ ಶ್ರೀರಾಮುಲು ಮತ್ತು ಕುಮಾರ ಬಂಗಾರಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್, ರಾಜ್ಯ ಬಿಜೆಪಿ ವಕ್ತಾರೆ ತೇಜಸ್ವಿನಿ ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿದರು.
ಜಯಕರ್ನಾಟಕ ಸಂಘಟನೆಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಹಜ್ ರೈ ಮತ್ತು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ಮುಖಂಡ ಚಂದ್ರ ಇದ್ಪಾಡಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ರಾಜ್ಯ ಮಹಿಳಾಮೋರ್ಚಾ ಅಧ್ಯಕ್ಷೆ ಭಾರತೀ ಶೆಟ್ಟಿ, ಶಾಸಕ ಎಸ್.ಅಂಗಾರ, ವಿಧಾನ ಪರಿಷತ್ ಸದಸ್ಯರಾದ ಕ್ಯಾ.ಗಣೇಶ್ ಕಾರ್ಣಿಕ್ ಮತ್ತು ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ, ಪಕ್ಷದ ಪ್ರಮುಖರಾದ ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ ಭಟ್, ಉಮಾನಾಥ ಕೋಟ್ಯಾನ್, ಕೃಷ್ಣ ಶೆಟ್ಟಿ ಕಡಬ, ಸತ್ಯಜಿತ್ ಸುರತ್ಕಲ್, ಉದಯಕುಮಾರ್ ಶೆಟ್ಟಿ ಉಡುಪಿ, ಕಿಶೋರ್ ಕುಮಾರ್ ರೈ, ಸುದರ್ಶನ ಮೂಡುಬಿದಿರೆ, ಕ್ಯಾ.ಬ್ರಿಜೇಶ್ ಚೌಟ, ವಿಶ್ವನಾಥ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿದರು. ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್ ವಂದಿಸಿದರು. ರಾಜೇಶ್ ಬನ್ನೂರು, ಚಂದ್ರಶೇಖರ್ ರಾವ್ ಬಪ್ಪಳಿಗೆ ಮತ್ತು ಗೌರಿ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.







