ಮುಖ್ಯಮಂತ್ರಿ ಬಗ್ಗೆ ಕೀಳು ಮಟ್ಟದ ಟೀಕೆಗೆ ಸಚಿವರಿಂದ ಖಂಡನೆ
ಮಂಗಳೂರು, ನ. 10: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕೀಳು ಮಟ್ಟದ ಪದ ಬಳಕೆ ಮಾಡಿರುವುದನ್ನು ಅರಣ್ಯ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಆಹಾರ ಮತ್ತು ನಾಗರಿಕೆ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಬ್ಬರು ಸಚಿವರು, ರಾಜ್ಯದ ಮುಖ್ಯಮಂತ್ರಿಯವರ ಬಗ್ಗೆ ಯಡಿಯೂರಪ್ಪನವರು ಕ್ಷುಲ್ಲಕವಾಗಿ ಮಾತನಾಡಿರುವುದಕ್ಕೆ ಜಿಲ್ಲಾ ಕಾಂಗ್ರೆಸ್ ತೀವ್ರ ವ್ಯಕ್ತಪಡಿಸುತ್ತದೆ ಎಂದರು.
ಬಿಜೆಪಿಯ ಪರಿವರ್ತನಾ ಯಾತ್ರೆಗೆ ಆರಂಭದಲ್ಲೇ ಜನರಿಲ್ಲದೆ ನೊಂದಿರುವ ಯಡಿಯೂರಪ್ಪ ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ. ಕಳೆದ ನಾಲ್ಕುವರ್ಷಗಳಲ್ಲಿ ಮುಖ್ಯಮಂತ್ರಿಯವರ ಸಾಧನೆಯಿಂದ ಕಂಗಾಲಾಗಿರುವ ಬಿಜೆಪಿಗರು ಮನಬಂದಂತೆ ಮಾತನಾಡಲು ಆರಂಭಿಸಿದ್ದಾರೆ. ಹಗರಣದಲ್ಲಿ ಜೈಲಿಗೆ ಹೋದ ಬಿಜೆಪಿಗರಿಗೆ ಮುಖ್ಯಮಂತ್ರಿಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ರಮಾನಾಥ ರೈ ಹೇಳಿದರು.
ಸಚಿವ ಯು.ಟಿ.ಖಾದರ್ ಮಾತನಾಡಿ, ಯಡಿಯೂರಪ್ಪವರು ಮುಖ್ಯಮಂತ್ರಿಯವರ ಬಗ್ಗೆ ಲಘುವಾಗಿ ಮಾತನಾಡಿರುವುದು ಖಂಡನೀಯ. ಬಿಜೆಪಿಯ ಪರಿವರ್ತನಾ ರ್ಯಾಲಿ ವಿಫಲವಾಗಿದೆ. ಇದರಿಂದ ಹತಾಶೆಗೊಂಡು ಹೇಳಿಕೆ ನೀಡಿದ್ದಾರೆ. ಯಾತ್ರೆಯ ವೈಫಲ್ಯದ ಬಗ್ಗೆ ಪಕ್ಷದ ವರಿಷ್ಠರು ಬೈದಿರುವುದಕ್ಕೆ ಕಾಂಗ್ರೆಸ್ನ ಮೇಲೆ ಹರಿಹಾಯುವುದು ಸರಿಯಲ್ಲ ಎಂದರು.
ವೇಣುಗೋಪಾಲ್ರನ್ನು ಕರೆಸುತ್ತೇವೆ
ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುತ್ತಿರುವುದನ್ನು ಸಹಿಸಲಾರದೆ ಬಿಜೆಪಿಗರು ಅವರ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ. ಅವರನ್ನು ಜಿಲ್ಲೆಗೆ ಕರೆಸುತ್ತೇವೆ ಎಂದು ರಮಾನಾಥ ರೈ ಹೇಳಿದರು.
ಆರೋಪಕ್ಕೆ ಸಂಬಂಧಿಸಿ ವೇಣುಗೋಪಾಲ್ ಅವರೇ ಉತ್ತರಿಸಲಿದ್ದಾರೆ. ಬಿಜೆಪಿಗರನ್ನು ಕೇಳಿ ನಾವು ವೇಣುಗೋಪಾಲ್ರನ್ನು ಜಿಲ್ಲೆಗೆ ಕರೆಸಬೇಕೇ? ವೇಣುಗೋಪಾಲ್ರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ. ಅವರನ್ನು ಹೇಗೆ ಜಿಲ್ಲೆಗೆ ಕರೆಸಬೇಕು ಎಂಬುದು ನಮಗೆ ಗೊತ್ತು ಎಂದು ರೈ ಖಾರವಾಗಿ ಹೇಳಿದರು.
ಕಂಬಳದ ಮಸೂದೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇನ್ನು ಈ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾಗುವುದು. ಕಂಬಳ ನಡೆಸಲು ನನ್ನ ಬೆಂಬಲ ಇದೆ ಎಂದು ಈಗಾಗಲೇ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಸಚಿವ ರಮಾನಾಥ ರೈ ತಿಳಿಸಿದರು.
ಪಕ್ಷದಿಂದ ಹೊರಗೆ ಹೋದರೆ ಭವಿಷ್ಯವಿಲ್ಲ. ಸಂಘ ಪರಿವಾರ ಹಾಗೂ ಮತೀಯವಾದಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡುವುದಿಲ್ಲ. ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಹೋಗುತ್ತಾರೆ ಎಂಬುದು ಸುಳ್ಳು. ಅವರು ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಯಾಕೆ ಹಾಜರಾಗಿಲ್ಲ ಎಂಬುದು ಗೊತ್ತಿಲ್ಲ ಎಂದು ರೈ ಹೇಳಿದರು.
ಸರಕಾರಿ ಜಾಗವನ್ನು ಕಬಳಿಸಿದ್ದಾಗಿ ಹರಿಕೃಷ್ಣ ಬಂಟ್ವಾಳ ಅವರು ಮಾಡಿದ ಆರೋಪಕ್ಕೆ ಉತ್ತರಿಸಿದ ಸಚಿವ ರಮಾನಾಥ ರೈ ಅವರು, ಈ ಬಗ್ಗೆ ಸೂಕ್ತ ದಾಖಲೆಯನ್ನು ಒದಗಿಸಿ ಉತ್ತರ ನೀಡುವುದಾಗಿ ಹೇಳಿದರು. ಶಾಸಕ ಮೊಯ್ದಿನ್ ಬಾವಾ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಪಿ.ವಿ. ಮೋಹನ್, ಅಬ್ದುಲ್ ಖಾದರ್ ಉಪಸ್ಥಿತರಿದ್ದರು.







