ಮಗು ಮೃತ್ಯು: ವೈದ್ಯರ ವಿರುದ್ಧ ದೂರು
ನಮ್ಮಿಂದ ತಪ್ಪಾಗಿಲ್ಲ-ವೈದ್ಯರ ಸ್ಪಷ್ಟನೆ
ಪುತ್ತೂರು, ನ. 12: ಹೆರಿಗೆ ವೇಳೆ ಅನಾರೋಗ್ಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆಗೆ ಸಂಬಂಧಿಸಿ ಆಸ್ಪತ್ರೆಯ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆಯ ಮುಂಭಾಗದಲ್ಲಿ ಜನರು ಜಮಾಯಿಸಿ ಬಳಿಕ ಪೊಲೀಸರಿಗೆ ದೂರು ನೀಡಿದ ಘಟನೆ ರವಿವಾರ ರಾತ್ರಿ ಪುತ್ತೂರಿನಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಕಡೇಶಿವಾಲ್ಯ ಗ್ರಾಮದ ಕಮ್ಮಾನ ಎಂಬಲ್ಲಿನ ಮಹಮ್ಮದ್ ಆಶ್ರಫ್ ಎಂಬವರ ಪತ್ನಿ ಫಾತಿಮತ್ ಝೊಹರಾ ನ.8ರಂದು ರಾತ್ರಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದರು. ಅವರಿಗೆ ನ.9ರಂದು ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರು ಹೆರಿಗೆ ಮಾಡಿಸಿದ್ದರು. ಈ ಸಂದರ್ಭದಲ್ಲಿ ಮಗುವಿಗೆ ಅನಾರೋಗ್ಯ ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಮಗುವನ್ನು ತಕ್ಷಣವೇ ದಾಖಲಿಸುವಂತೆ ವೈದ್ಯರು ಸೂಚಿಸಿದ ಮೇರೆಗೆ ಮಂಗಳೂರಿನ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ರವಿವಾರ ಬೆಳಗ್ಗೆ ಮೃತಪಟ್ಟಿತ್ತು.
ಬಾಣಂತಿ ಪುತ್ತೂರಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ರವಿವಾರ ರಾತ್ರಿ ಈ ವಿಚಾರಕ್ಕೆ ಸಂಬಂಧಿಸಿ ಪುತ್ತೂರಿನ ಆಸ್ಪತ್ರೆಗೆ ಆಗಮಿಸಿದ ಮೃತ ಮಗುವಿನ ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯದಿಂದಾಗಿ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತ ಪಡಿಸಿದರು. ಆಸ್ಪತ್ರೆಯಲ್ಲಿ ಜನ ಜಮಾಯಿಸಿದ ಕಾರಣ ನಗರ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಆಸ್ಪತ್ರೆಯಲ್ಲಿ ಪತ್ರಿಕೆಗೆ ಈ ಬಗ್ಗೆ ಮಾಹಿತಿ ನೀಡಿದ ಫಾತಿಮತ್ ಝೊಹರಾ ಕುಟುಂಬಸ್ಥರು ನಾವು ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಫಾತಿಮತ್ ಝೊಹರಾ ಅವರನ್ನು ಹೆರಿಗೆ ಕೊಠಡಿಗೆ ಕರೆದುಕೊಂಡು ಹೋಗಿದ್ದರು. ಮದ್ಯಾಹ್ನದ ತನಕ ಸಹಜ ಹೆರಿಗೆಯಾಗಲಿದೆ ಎಂದು ತಿಳಿಸಿದ ವೈದ್ಯರು ಬಳಿಕ ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂದು ಹೇಳಿದರು. ಆದರೆ ಮೊದಲಿಗೆ ಹೆದರಿ ಒಪ್ಪಿಗೆ ನೀಡದ ನಾವು ಬಳಿಕ ಒಪ್ಪಿಕೊಂಡೆವು. ರಾತ್ರಿ 7 ಗಂಟೆಗೆ ಶಸ್ತ್ರ ಚಿಕಿತ್ಸೆ ಮಾಡಿದರು. ಬಳಿಕ ಮಗುವಿಗೆ ಅನಾರೋಗ್ಯವಿದೆ ತಕ್ಷಣವೇ ಮಂಗಳೂರಿನ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಹೇಳಿದರು. ಮಂಗಳೂರಿನಲ್ಲಿ ಮಗು ಇಂದು ಮೃತಪಟ್ಟಿದೆ. ಈ ನಡುವೆ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ತನ್ನ ಫೀಸು ಬೇಡ. ಔಷಧಿಯ ವೆಚ್ಚವನ್ನು ಮಾತ್ರ ಪಾವತಿಸಿ ಎಂಬುದಾಗಿ ತಿಳಿಸುತ್ತಾರೆ. ಮಗುವಿಗೆ ಹೀಗಾಗಲು ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.
ನಮ್ಮಿಂದ ತಪ್ಪಾಗಿಲ್ಲ- ವೈದ್ಯರ ಸ್ಪಷ್ಟನೆ
ಯಾವುದೇ ಹೆರಿಗೆ ಸಂದರ್ಭದಲ್ಲಿ ನಾರ್ಮಲ್ ಡೆಲಿವರಿಗೆ ಪ್ರಯತ್ನ ನಡೆಸಲಾಗುತ್ತದೆ. ಬಳಿಕ ಅನಿವಾರ್ಯವಾದಾಗ ಮಾತ್ರ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಬುಧವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಫಾತಿಮತ್ ಝೊಹರಾ ಅವರನ್ನು ಎಡ್ಮಿಟ್ ಮಾಡಲಾಗಿದೆ. ಗುರುವಾರ ಮದ್ಯಾಹ್ನ 12 ಗಂಟೆಯ ವೇಳೆಗೆ ಹೆರಿಗೆ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಆದರೆ ನಾರ್ಮಲ್ ಡೆಲಿವರಿ ಸಾಧ್ಯವಿಲ್ಲ ಎಂಬುದು ಗೊತ್ತಾದಾಗ ಪೇಷಂಟ್ ಮತ್ತು ಕುಟುಂಬಸ್ಥರ ಒಪ್ಪಿಗೆ ಪಡೆದು ಅವರು ಸಹಿ ಮಾಡಿದ ಬಳಿಕ 6 ಗಂಟೆಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. 7.30ಕ್ಕೆ ಶಸ್ತ್ರ ಚಿಕತ್ಸೆ ಪೂರ್ಣವಾಗಿದ್ದು, ಮಗುವಿನಲ್ಲಿ ಅನಾರೋಗ್ಯ ಕಂಡು ಬಂದ ಕಾರಣ ನಮ್ಮದೇ ಅಂಬುಲೆನ್ಸ್ನಲ್ಲಿ ಆಕ್ಷಿಜನ್ ಸಹಿತ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಅಲ್ಲಿ ಮಗು ಮೃತಪಟ್ಟಿದೆ. ಹೆರಿಗೆ ವಿಚಾರದಲ್ಲಿ ನಮ್ಮಿಂದ ಯಾವುದೇ ತಪ್ಪುಗಳಾಗಿಲ್ಲ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಭಾಸ್ಕರ್ ಪತ್ರಿಕೆಗೆ ಸ್ಪಷ್ಟನೆ ನೀಡಿದ್ದಾರೆ.







