ಜಾರ್ಜ್ ರಾಜೀನಾಮೆ ನೀಡುವ ಅಗತ್ಯವಿಲ್ಲ: ಸಿಎಂ ಸಿದ್ದರಾಮಯ್ಯ
ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ
.jpg)
ಬೆಂಗಳೂರು, ನ.13: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಸುಪ್ರೀಂಕೋರ್ಟ್ ಆದೇಶದಂತೆ ಸಿಬಿಐ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ವಿಚಾರಕ್ಕೆ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ವಿಧಾನಪರಿಷತ್ತಿನಲ್ಲಿ ಭೋಜನ ವಿರಾಮದ ಬಳಿಕ ಸದನ ಸೇರುತ್ತಿದ್ದಂತೆ ಬಿಜೆಪಿ ಸದಸ್ಯರು ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ತಮ್ಮ ಧರಣಿಯನ್ನು ಮುಂದುವರೆಸಿದ್ದ ವೇಳೆ ಮಾತನಾಡಿದ ಅವರು, ವಿಪಕ್ಷ ನಾಯಕ ಈಶ್ವರಪ್ಪ ಮಂಡಿಸಿರುವ ನಿಲುವಳಿ ಸೂಚನೆಯು ಚರ್ಚೆಗೆ ಯೋಗ್ಯವಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದರು.
2016ರ ಜು.7ರಂದು ಗಣಪತಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬಂತು. ಜು.8ರಂದೇ ನಾನು ಸಿಐಡಿ ತನಿಖೆಗೆ ಆದೇಶಿಸಿದೆ. ಜು.10ರಂದು ಗಣಪತಿ ಅವರ ಪುತ್ರ ನಿಹಾಲ್ ಜೆಎಂಎಫ್ಸಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು ಎಂದು ಹೇಳಿದರು.
ಈ ಪ್ರಕರಣ ನಡೆದಾಗ ಜಾರ್ಜ್ ಗೃಹ ಸಚಿವರಾಗಿರಲಿಲ್ಲ. ಆದರೂ, ಸಾರ್ವಜನಿಕವಾಗಿ ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕಾಗಿ ಅವರು ನನ್ನ ವಿರೋಧದ ನಡುವೆಯೂ ರಾಜೀನಾಮೆ ನೀಡಿದರು. ಸಿಐಡಿ ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿದೆ. ಅಲ್ಲದೆ, ಸಿಬಿಐ ತನಿಖೆಗೆ ಆಗ್ರಹಿಸಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಹಾಗೂ ದ್ವಿ ಸದಸ್ಯ ಪೀಠ ತಿರಸ್ಕರಿಸಿದೆ ಎಂದರು.
ಸಿಐಡಿ ಬಿ ರಿಪೋರ್ಟ್ ರನ್ನು ಗಣಪತಿ ಅವರ ಪುತ್ರ ಪ್ರಶ್ನೆ ಮಾಡಿಲ್ಲ. ಆದರೆ, ಗಣಪತಿ ಅವರ ತಂದೆ ಕುಶಾಲಪ್ಪ ಸುಪ್ರೀಂಕೋರ್ಟ್ ಮೊರೆ ಹೋದರು. ಅದರಂತೆ, ಮೂರು ತಿಂಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸುಪ್ರೀಂಕೋರ್ಟ್ ಆದೇಶ ಮಾಡಿದೆ. ತನ್ನ ಆದೇಶದಲ್ಲಿ ಜಾರ್ಜ್ ಆಗಲಿ ಅಥವಾ ಇನ್ನಿಬ್ಬರು ಆಪಾದಿತ ಅಧಿಕಾರಿಗಳ ವಿರುದ್ಧ ಏನನ್ನು ಹೇಳಿಲ್ಲ. ಸಿಐಡಿ ತನಿಖಾ ವರದಿಯ ಬಗ್ಗೆಯೂ ಯಾವುದೇ ಟೀಕೆ ಮಾಡದಿರುವುದನ್ನು ಗಮನಿಸಬೇಕು ಎಂದು ತಿಳಿಸಿದರು.
ರಾಜಕೀಯಕ್ಕಾಗಿ ಬಿಜೆಪಿಯವರು ಈ ವಿಷಯವನ್ನು ಬೆಳೆಸುತ್ತಿದ್ದಾರೆ. ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಈ ನೆಲದ ಕಾನೂನು, ಸಂವಿಧಾನಕ್ಕೆ ನಾವು ತಲೆಬಾಗುತ್ತೇವೆ. ಇವರು ಆರೋಪಿಸುವಂತೆ ದಾಖಲೆಗಳನ್ನು ತಿದ್ದುವುದು, ನಾಶಮಾಡುವ ಅಗತ್ಯ ನಮಗಿಲ್ಲ. ಇವರು ಮಾಡುವ ವಾದವನ್ನು ಯಾರೊಬ್ಬರೂ ಒಪ್ಪಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿಯವರಿಗೆ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ರಾಜಕಾರಣಕ್ಕಾಗಿ ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಇವರು ಚುನಾವಣೆಯಲ್ಲಿ ಲಾಭ ಪಡೆಯಲು ಇದನ್ನೆಲ್ಲ ಮಾಡುತ್ತಿದ್ದಾರೆ. ಆದರೆ, ಏನು ಆಗುವುದಿಲ್ಲ. ಬನ್ನಿ ಮೈದಾನಕ್ಕೆ ನಿಮ್ಮನ್ನು ಎದುರಿಸಲು ಸಿದ್ಧವಾಗಿದ್ದೇವೆ. ರಾಜ್ಯದ ಜನ ನಿಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಟೀಕಿಸಿದರು.
ಸಿದ್ದರಾಮಯ್ಯ ಲಾಟರಿ ಸಿಎಂ: ಬಿಜೆಪಿ ಹಾಗೂ ಕೆಜೆಪಿ ನಡುವಿನ ಜಗಳದಿಂದಾಗಿ ನೀವು ಲಾಟರಿ ಸಿಎಂ ಆದದ್ದು ಎಂದ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಾತಿಗೆ, ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡುತ್ತಾ, ಉಪಮುಖ್ಯಮಂತ್ರಿಯಾಗಿದ್ದ ನೀವು ಹೀನಾಯವಾಗಿ ಸೋತಿದ್ದೀರಾ. ಚುನಾವಣೆಯಲ್ಲಿ ನಿಮ್ಮ ಕ್ಷೇತ್ರದ ಜನತೆ ನಿಮ್ಮನ್ನು ಮೂರನೆ ಸ್ಥಾನಕ್ಕೆ ತಳ್ಳಿದರು. ಠೇವಣಿಯು ಸಿಕ್ಕಿಲ್ಲ. 112 ಸ್ಥಾನಗಳಿಂದ 40 ಸ್ಥಾನಕ್ಕೆ ಬಿಜೆಪಿ ಕುಸಿಯಿತು ಎಂದು ವ್ಯಂಗ್ಯವಾಡಿದರು.







