ನ.20 ರಿಂದ ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ
ಸದಾಶಿವ ವರದಿ ಜಾರಿಗೆ ಆಗ್ರಹ
ಬೆಂಗಳೂರು, ನ.13: ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಮಾದಿಗರ ಸಂಘಟನೆಗಳ ಒಕ್ಕೂಟದ ವತಿಯಿಂದ ನ.20 ರಿಂದ ಡಿ.11 ರವರೆಗೆ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಡಾ.ಎನ್.ಮೂರ್ತಿ, ವೈಜ್ಞಾನಿಕ ತಳಹದಿಯ ಮೇಲೆ ಅವಲೋಕಿಸಿ ಪರಿಶಿಷ್ಟರ 101 ಉಪಜಾತಿಗಳಿಗೆ ಶಿಕ್ಷಣ, ರಾಜಕೀಯ, ಉದ್ಯೋಗ, ಕೃಷಿ, ವಾಣಿಜ್ಯ, ಕೈಗಾರಿಕೆ ಸೇರಿದಂತೆ ಅನೇಕ ವಿಷಯಗಳಲ್ಲಿ ಸ್ಥಾನಮಾನ ಹೊಂದಿರುವ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಮೀಸಲಾತಿ ಮತ್ತು ಸವಲತ್ತು ಪ್ರಮಾಣವನ್ನು ಹಂಚಿಕೆ ಮಾಡಿ ಸದಾಶಿವ ಅವರು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೂ ಅದನ್ನು ಜಾರಿ ಮಾಡಲು ಮುಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾದಿಗ (ಎಡಗೈ) ಸಂಬಂಧಿಸಿದ 53 ಜಾತಿಗಳ ಜನಸಂಖ್ಯೆ ಶೇ.33.47 ರಷ್ಟಿದ್ದು, ಹೊಲೆಯ (ಬಲಗೈ) ಸಂಬಂಧಿಸಿದ 28 ಜಾತಿಗಳ ಜನಸಂಖ್ಯೆ ಶೇ.32 ರಷ್ಟಿದ್ದು, ಭೋವಿ, ಲಮಾಣಿ, ಕೊರಮ, ಕೊರಚ ಜಾತಿಗಳು ಶೇ.3 ಹಾಗೂ ಅಲೆಮಾರಿ, ಅಸ್ಪಶ್ಯರ 16ಜಾತಿಗಳ ಜನಸಂಖ್ಯೆ 10.96 ರಷ್ಟಿದ್ದು ಇವರಿಗೆ ಶೇ.1 ರಷ್ಟು ಒಳ ಮೀಸಲಾತಿ ಕಲ್ಪಿಸಬೇಕು ಎಂದು ಸದಾಶಿವ ವರದಿಯಲ್ಲಿ ತಿಳಿಸಲಾಗಿದೆ. ಆದರೆ ಸರಕಾರ ಇದನ್ನು ಜಾರಿ ಮಾಡಲು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಹೇಳಿದರು.
ಪರಿಶಿಷ್ಟರಲ್ಲಿರುವ ಕೆಲವೊಂದು ಬಲಿಷ್ಠ ಜಾತಿಗಳು ಮಾದಿಗರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ನಮಗೆ ಸಿಗಬೇಕಾದ ಮೀಸಲಾತಿ ಸಿಗುತ್ತಿಲ್ಲ. ಹೀಗಾಗಿ, ಕೂಡಲೇ ಸದಾಶಿವ ಆಯೋಗದ ವರದಿ ಸರಕಾರ ಜಾರಿ ಮಾಡಬೇಕು ಎಂದು ಹಲವಾರು ಬಾರಿ ಬೃಹತ್ ಪ್ರಮಾಣದ ಹೋರಾಟ ನಡೆಸಲಾಗಿದೆ ಎಂದರು.
ಡಿ.11 ಸಮಾವೇಶ: ಈ ವರದಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿ ಕೂಡಲಸಂಗಮದಿಂದ ಆರಂಭವಾಗುವ ಪಾದಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದ್ದು, ಡಿ.11 ರಂದು ಬೆಂಗಳೂರಿಗೆ ಆಗಮಿಸಲಿದೆ. ಅನಂತರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರಮಾಣದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಬೇಡಿಕೆಗಳು: ಮಾದಿಗರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಭೂ ರಹಿತ ಮಾದಿಗರಿಗೆ ಬಗರ್ ಹುಕುಂ ಸಾಗುವಳಿ ಸಕ್ರಮ ಮಾಡಬೇಕು. ಮಾದಿಗ ಸಂಘ-ಸಂಸ್ಥೆಗಳ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಹಣ ಸಹಾಯ ಮಾಡಬೇಕು. ಶರಣ ಮಾದಾರ ಚೆನ್ನಯ್ಯ ಅಧ್ಯಯನ ಪೀಠ ಕೂಡಲಸಂಗಮದಲ್ಲಿ ಸ್ಥಾಪಿಸಬೇಕು. ಮುಂದಿನ ಚುನಾವಣೆಯಲ್ಲಿ ಮಾದಿಗ ಜನಾಂಗದವರಿಗೆ ಕನಿಷ್ಟ 25 ಜನರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.







