ಮಕ್ಕಳ ದಿನಾಚರಣೆ: ದ.ಕ. ಜಿಲ್ಲೆಯ 4 ಮಕ್ಕಳಿಗೆ ಪ್ರಶಸ್ತಿ

ಮಂಗಳೂರು, ನ. 13: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯ 4 ಮಂದಿ ಮಕ್ಕಳಿಗೆ ಈ ಸಾಲಿನಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ. ನ.14ರಂದು ಮಕ್ಕಳ ದಿನಾಚರಣೆಯಂದು ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾದ ವಿದ್ಯಾರ್ಥಿ ಬಂಟ್ವಾಳ ತಾಲೂಕಿನ ಕೆದಿಲ ಮುರ್ಗಾಜೆಯ ಸ್ವಸ್ತಿಕ್ ಪದ್ಮ (ವಿಜ್ಞಾನದಲ್ಲಿ ಸಂಶೋಧನೆ) ಎಂಬ ವಿದ್ಯಾರ್ಥಿಯು ವಿಜ್ಞಾನ ಕ್ಷೇತ್ರದಲ್ಲಿ (ವೈಜ್ಞಾನಿಕ ಸಂಶೋಧನೆ) ಅಸಾಧಾರಣ ಪ್ರತಿಭೆಯನ್ನು ಗುರುತಿಸಿ 2017ನೆ ಸಾಲಿನ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ನ. 14 ರಂದು ದೆಹಲಿಯಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಯುವ ಮಕ್ಕಳ ದಿನಾಚರಣೆಯಂದು ರಾಷ್ಟ್ರಪತಿಗಳಿಂದ 10,000 ರೂ. ನಗದು ಹಾಗೂ ರಜತ ಪದಕದೊಂದಿಗೆ ಸನ್ಮಾನಿಸಲ್ಪಡುತ್ತಿದ್ದಾನೆ.
ಈತ ಅನೇಕ ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದು, ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾನೆ.
ರಾಜ್ಯ ಮಟ್ಟದಲ್ಲಿ ಸನ್ಮಾನಿಸಲ್ಪಡುವ ವಿದ್ಯಾರ್ಥಿನಿ ಸುರತ್ಕಲ್ ಸುಭಾಷಿತ ನಗರದ ಎಂ.ಅದ್ವಿಕಾ ಶೆಟ್ಟಿ (ಸಾಂಸ್ಕೃತಿಕ ಕ್ಷೇತ್ರ) ಎಂಬ ವಿದ್ಯಾರ್ಥಿನಿಯ ಸಾಂಸ್ಕೃತಿಕ ಕ್ಷೇತ್ರದಲ್ಲಿರುವ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ 2017ನೆ ಸಾಲಿನ ರಾಷ್ಟ್ರ ಪ್ರಶಸ್ತಿಗೆ ಶಿಫಾರಸು ಮಾಡಿದ್ದು, ನ.14 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಮಕ್ಕಳ ದಿನಾಚರಣೆಯಂದು ಸನ್ಮಾನಿಸಲ್ಪಡುವಳು.
ಈಕೆ ರಾಷ್ಟ್ರ ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದು, ಅಂತಾರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾಳೆ.
ಶೌರ್ಯ ಪ್ರಶಸ್ತಿಗೆ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳು ಸಜೀಪ ಮೂಡಾ ಕುಡೂರು ಮನೆಯ ವೈಶಾಖ್,(ಶೌರ್ಯ ಪ್ರಶಸ್ತಿ). ಈತ ಅಪಾಯಕಾರಿ ಹೆಬ್ಬಾವಿನ ಬಾಯಿಗೆ ಸಿಲುಕಿಕೊಂಡಿದ್ದು, ಬುದ್ಧಿ ಚಾತುರ್ಯದಿಂದ ಹಾವಿನ ಬಾಯಿಯಿಂದ ತನ್ನನ್ನು ಹಾಗೂ ತನ್ನ ತಂಗಿಯನ್ನು ರಕ್ಷಿಸಿದ್ದಾನೆ.
ಅದೇ ರೀತಿ ಪುತ್ತೂರು ತಾಲೂಕು ಕೌಕ್ರಾಡಿ ಗ್ರಾಮದ ನಿತಿನ್ ಕೆ.ಆರ್. (ಶೌರ್ಯ ಪ್ರಶಸ್ತಿ). ಈತ ವಿಷದ ಹಾವಿನಿಂದ ಕಡಿತಕ್ಕೊಳಗಾದ ತನ್ನ ತಂಗಿಯನ್ನು ತನ್ನ ಬುದ್ಧಿ ಚಾತುರ್ಯದಿಂದ ಶಾಲೆಯಲ್ಲಿ ಕಲಿತ ಪ್ರಥಮ ಚಿಕಿತ್ಸೆ ವಿಧಾನದ ಮೂಲಕ ಬಾಯಿಯಲ್ಲಿ ವಿಷವನ್ನು ಹೀರಿ ತನ್ನ ತಂಗಿಯ ಪ್ರಾಣವನ್ನು ರಕ್ಷಿಸಿದ್ದಾನೆ. ಈ ಇಬ್ಬರ ಶೌರ್ಯವನ್ನು ಪರಿಗಣಿಸಿ 2017-18ನೆ ಸಾಲಿನ ರಾಜ್ಯ ಮಟ್ಟದ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನ.14 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಮಕ್ಕಳ ದಿನಾಚರಣೆಯಂದು ಇವರಿಗೆ ಸನ್ಮಾನಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.







