ಅಡುಗೆ ಅನಿಲ ಸೋರಿಕೆ: ಮೂವರು ಮೃತ್ಯು
ಬೆಂಗಳೂರು, ನ.15: ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ತಗುಲಿ ಒಂದೇ ಕುಟುಂಬದ ನಾಲ್ವರಲ್ಲಿ ಮೂವರು ಮೃತಪಟ್ಟ ಘಟನೆ ನಗರದ ಹೊರವಲಯದ ಹೆಬ್ಬಗೋಡಿಯಲ್ಲಿ ನಡೆದಿದೆ.
ತಿರುಪಾಳ್ಯದ ವಿಕಾಸ್ ಪ್ರದಾನ್(27), ಅವರ ಪತ್ನಿ ಕರ್ಣಾ(24), ಸಂಬಂಧಿಕ ದೇವನ್(23) ಮೃತಪಟ್ಟವರು ಎಂದು ಗುರುತಿಸಿದ್ದು, ಸುಟ್ಟ ಗಾಯಗಳಾಗಿರುವ ಚವನ್ ಎಂಬವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಸ್ಸಾಂ ಮೂಲದವರಾಗಿರುವ ಈ ನಾಲ್ವರು ಉದ್ಯೋಗಕ್ಕಾಗಿ ಒಂದು ತಿಂಗಳ ಹಿಂದಷ್ಟೇ ನಗರಕ್ಕೆ ಬಂದು ತಿರುಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ(ನ.10)ಮುಂಜಾನೆ ಕರ್ಣಾ ಅವರು ಅಡುಗೆ ಮಾಡಲು ಹೋದಾಗ ಸಿಲಿಂಡರ್ ಸೋರಿಕೆಯಿಂದ ಬೆಂಕಿ ತಗುಲಿ ವಿಕಾಸ್ ಪ್ರದಾನ್, ದೇವನ್ ಹಾಗೂ ಚವನ್ಗೆ ಬೆಂಕಿ ತಗುಲಿ ಗಾಯಗೊಂಡಿದ್ದರು.
ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ವಿಕಾಸ್ ಪ್ರದಾನ್, ಕರ್ಣಾ ಹಾಗೂ ದೇವನ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಶವಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯ ಸಂಸ್ಕಾರವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ವಿಕಾಸ್ ಪ್ರದಾನ್ ಸಂಬಂಧಿಕರಿಗೆ ಮೃತದೇಹಗಳನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಲು ಹಣವಿಲ್ಲದ ಕಾರಣ ಮೈಸೂರು ರಸ್ತೆಯಲ್ಲಿರುವ ಶವಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು ಎಂದು ಹೆಬ್ಬಗೋಡಿ ಪೊಲೀಸರು ತಿಳಿಸಿದ್ದಾರೆ.





