ನ.9ರಿಂದ ಕಾನೂನು ಅರಿವು ಕಾರ್ಯಕ್ರಮ: ದೇವೇಂದ್ರನ್
ಚಿಕ್ಕಮಗಳೂರು, ನ.15: ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಧ್ಯೇಯವನ್ನು ಇಟ್ಟುಕೊಂಡು ಅರ್ಹ ವ್ಯಕ್ತಿಗಳಿಗೆ ಕಾನೂನು ಸೇವೆ ಹಾಗೂ ಅರಿವನ್ನು ಮೂಡಿಸುವ ಉದ್ದೇಶದಿಂದ ನ.9ರಿಂದ 18ರವರೆಗೆ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಟಕ ಹಾಗೂ ಜಾಥಾ ಮೂಲಕ ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಡಿ.ಟಿ ದೇವೇಂದ್ರನ್ ಹೇಳಿದ್ದಾರೆ.
ಬುಧವಾರ ನಗರದ ಜೆವಿಎಸ್ ಬಾಲಕಿಯರ ಪಿಯು ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜೆವಿಎಸ್ ಬಾಲಕಿಯರ ಪಿಯು ಕಾಲೇಜು ವತಿಯಿಂದ ಸೇವೆಗಾಗಿ ಸಂಪರ್ಕ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ದೀಪದ ಭತ್ತಿ ಇದ್ದಂತೆ ನಾವು ದೀಪ ಹಚ್ಚುವ ಕೆಲಸವನ್ನು ಮಾಡುತ್ತೇವೆ, ನೀವು ಸಮಾಜಕ್ಕೆ ದೀಪ ಬೆಳಗುವ ಕೆಲಸವನ್ನು ಮಾಡಬೇಕು ಎಂದರು.
ಮಕ್ಕಳನ್ನು ಕಂಡಾಗ ನನಗೆ ನೆನಪಾಗುವುದು ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಮಾತು ಮಕ್ಕಳು ದೊಡ್ಡ ಕನಸುಗಳನ್ನು ಕಾಣಬೇಕು. ಉತ್ತಮ ಸ್ಥಾನಕ್ಕೆ ಬೆಳೆಯಬೇಕು ಎಂದ ಅವರು, ಪ್ರಸ್ತುತ ಮಕ್ಕಳು ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಸಾಮಾನ್ಯ ಜನರಿಗೆ ತಿಳಿಸಬೇಕು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ 2ನೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಸಿ.ಎಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸ್ತ್ರೀಯರ ಶೋಷಣೆ ಹೆಚ್ಚಾಗಿ ನಡೆಯುತ್ತಿದ್ದು, ಎಷ್ಟೋ ಕಾನೂನಿನ ಅರಿವಿಲ್ಲದೆ ಸರಿಯಾದ ರೀತಿಯಲ್ಲಿ ನ್ಯಾಯ ಪಡೆಯಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಪ್ರತಿಯೊಬ್ಬರು ಕಾನೂನನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾನೂನಿನಡಿ ಮಕ್ಕಳ ಹಕ್ಕು ಮತ್ತು ರಕ್ಷಣೆ ಹಾಗೂ ಪೋಕ್ಸೋ ಕಾಯ್ದೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ವಕೀಲೆ ಡಿ.ಎಸ್ ಮಮತಾ, ಈಗಿನ ಕಾಲದಲ್ಲಿ ಮಹಿಳೆಯರಿಗಿಂತ ಮಕ್ಕಳ ಮೇಲೆ ಹೆಚ್ಚಾಗಿ ದೌರ್ಜನ್ಯ ನಡೆಯುತ್ತಿದ್ದು ಇದನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ತಿಳಿದುಕೊಂಡಿರಬೇಕು. ಸಂವಿಧಾನದಲ್ಲಿ ಮಕ್ಕಳಿಗಾಗಿ ಪಾಲನೆ, ಪೋಷಣೆ, ರಕ್ಷಣೆ ಕಾಯ್ದೆ ಇದ್ದು ಇದರ ಅಡಿಯಲ್ಲಿ ಮಕ್ಕಳನ್ನು ರಕ್ಷಿಸಲಾಗುತ್ತಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೆ.ಎಸ್. ನಾರಾಯಣಗೌಡ ವಹಿಸಿದ್ದರು, ಒಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿ ಕೆ.ಬಿ ಅನಂತೇಗೌಡ, ಜೆ.ವಿ.ಎಸ್ ಬಾಲಕಿಯರ ಪಿಯು ಕಾಲೇಜಿನ ಸಹ ಕಾರ್ಯದರ್ಶಿ ಎನ್.ಲಕ್ಷ್ಮಣಗೌಡ, ಜೆ.ವಿ.ಎಸ್ ಬಾಲಕಿಯರ ಪಿಯು ಕಾಲೇಜಿನ ಪ್ರಾಂಶುಪಾಲ ತೇಜಸ್ವಿನಿ.ಜಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಟಿ. ದುಶ್ಯಂತ್ ಉಪಸ್ಥಿತರಿದ್ದರು.







