ವ್ಯಕ್ತಿಗೆ ಹಲ್ಲೆ: ಆರೋಪಿಗೆ ದಂಡ ವಿಧಿಸಿ ಕೋರ್ಟ್
ಶಿವಮೊಗ್ಗ, ನ. 15: ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಆರೋಪಿಯೋರ್ವನಿಗೆ 3,000 ರೂ. ದಂಡ ವಿಧಿಸಿ 2ನೇ ಜೆಎಂಎಫ್ಸಿ ಕೋರ್ಟ್ನ ನ್ಯಾಯಾಧೀಶ ಎಚ್.ಆರ್.ದೇವರಾಜ್ ಬುಧವಾರ ತೀರ್ಪು ನೀಡಿದ್ದಾರೆ.
ಅಂತರಗಂಗೆ ಕ್ಯಾಂಪ್ ನಿವಾಸಿ ನಾಗರಾಜ್ ಆರೋಪಿ. ಪೆ. 26, 2014 ರಂದು ಭದ್ರಾವತಿ ವಾಸವಿ ಕಾಲನಿ ನಿವಾಸಿ ಬಿ.ಆರ್.ಮಂಜುನಾಥ ಶೆಟ್ಟಿ ಎಂಬವರಿಗೆ ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ನಾಗರಾಜ್, ಬಿ.ಆರ್.ಮಂಜುನಾಥ್ರೊಂದಿಗೆ ಮಾತಿನ ಚಕಮಕಿ ನಡೆಸಿ, ಹಲ್ಲೆ ನಡೆಸಿದ್ದರು. ಜೊತೆಗೆ ಜೀವ ಬೆದರಿಕೆ ಹಾಕಿದ್ದರು. ಈ ಕುರಿತಂತೆ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ನಾಗರಾಜ್ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು 3 ಸಾವಿರ ರೂ. ದಂಡ ವಿಧಿಸಿದ್ದು, ಅದರಲ್ಲಿ ಎರಡು ಸಾವಿರ ರೂ. ಫಿರ್ಯಾದುದಾರ ಮಂಜುನಾಥರಿಗೆ ನೀಡುವಂತೆ ಆದೇಶಿಸಿದ್ದಾರೆ.
ಒಂದು ವೇಳೆ ದಂಡ ಕಟ್ಟಲು ತಪ್ಪಿದ್ದಲ್ಲಿ ಒಂದು ವರ್ಷ ಸಾದಾ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಸಿ. ಮಂಜುನಾಥ್ ವಾದ ಮಂಡಿಸಿದ್ದರು.





