ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪು ನಡುವೆ ಗಲಭೆ
ಬೆಳಗಾವಿ, ನ.16: ಕ್ಷುಲ್ಲಕ ಕಾರಣಕ್ಕೆ ನಿನ್ನೆ ತಡರಾತ್ರಿ ಎರಡು ಕೋಮುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ತುಕಡಿ ನಿಯೋಜಿಸಲಾಗಿದೆ.
ಗಲಭೆಯಲ್ಲಿ ನಾಲ್ಕು ಬೈಕ್, ಒಂದು ಕಾರು, ಒಂದು ಆಟೊ ರಿಕ್ಷಾ ಬೆಂಕಿಗೆ ಆಹುತಿಯಾಗಿದ್ದು, ಪೊಲೀಸ್ ವಾಹನಗಳು ಸೇರಿ ಹಲವು ವಾಹನಗಳು ಜಖಂಗೊಂಡಿವೆ.
ರಸ್ತೆಗಳಲ್ಲಿ ಕಲ್ಲು ಮತ್ತು ಗಾಜಿನ ಚೂರುಗಳು ಬಿದ್ದಿದ್ದು, ಓಡಾಡಲು ಆಗದಂತಹ ಸ್ಥಿತಿ ಎದುರಾಗಿದೆ.
ತಡರಾತ್ರಿ ನಗರದ ಖಡಕ್ಗಲ್ಲಿ, ಖಂಜಾರದಲ್ಲಿ ಮತ್ತು ಶಾಸ್ತ್ರಿಚೌಕ ಸುತ್ತಮುತ್ತ ಎರಡು ಕೋಮುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಭೆ ಸಂಭವಿಸಿದ್ದು, ಎರಡು ಗುಂಪಿನವರು ಪರಸ್ಪರ ಕಲ್ಲು ಮತ್ತು ಬಾಟಲ್ ತೂರಾಟ ನಡೆಸಿದ ಪರಿಣಾಮ ಪರಿಸ್ಥಿತಿ ಬಿಗಡಾಯಿಸಿದೆ.
ಪ್ರಕ್ಷುಬ್ಧಗೊಂಡು ಪರಿಸ್ಥಿತಿ ಬಿಗಡಾಯಿಸಿರುವುದನ್ನು ಮನಗಂಡು ಸ್ಥಳದಲ್ಲಿ ಕೆಎಸ್ಸಾರ್ಪಿ ತುಕಡಿಗಳನ್ನು ನಿಯೋಜಿಸಲಾಗಿದ್ದು, ನಗರದ ಇತರ ಠಾಣೆಗಳ ಪೊಲೀಸರನ್ನು ಶಾಂತಿ ಪಾಲನೆ ಕರ್ತವ್ಯ ವಹಿಸಲಾಗಿದೆ. ಗಲಭೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲವಾದರೂ ಗಲಭೆ ಸೃಷ್ಟಿಸಿದ ಕೆಲ ಕಿಡಿಗೇಡಿಗಳ ವೀಡಿಯೊ ಲಭ್ಯವಾಗಿದ್ದು, ಕೂಡಲೇ ಅವರನ್ನು ಬಂಧಿಸಿ ಸ್ಥಳದಲ್ಲಿ ಶಾಂತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
-ಅಮರನಾಥ ರೆಡ್ಡಿ, ಡಿಸಿಪಿ







