ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರು, ನೇಕಾರರು ಮತ್ತು ಬಡವರ ಸಾಲ ಮನ್ನಾ: ದೇವರಾಜ್
'ಕುಮಾರಣ್ಣನ ನಡೆ ರೈತರ ಮನೆ ಕಡೆ'

ಚಿಕ್ಕಮಗಳೂರು, ನ.17:ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರು, ನೇಕಾರರು ಮತ್ತು ಬಡವರ ಜನತಾ ಮನೆಯ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಹೆಚ್.ದೇವರಾಜ್ ಭರವಸೆ ನೀಡಿದರು.
ಅವರು ತಾಲ್ಲೂಕಿನ ಅರಿಶಿನಗುಪ್ಪೆ ಗ್ರಾಮದಲ್ಲಿ ಜೆಡಿಎಸ್ ಏರ್ಪಡಿಸಿದ್ದ “ಕುಮಾರಣ್ಣನ ನಡೆ ರೈತರ ಮನೆಕಡೆ” ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು. ಜೆಡಿಎಸ್ ರೈತರ ಪರವಾದ ಪಕ್ಷ, ಅದರ ವರಿಷ್ಠ ಹೆಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರೈತರ ಪರ ನಿಲುವು ಹೊಂದಿದ್ದಾರೆ ಸದಾಕಾಲ ಕೃಷಿಕರ ಪರವಾಗಿ ಹೋರಾಟ ನಡೆಸಿದ್ದಾರೆ ಎಂದ ಅವರು ಈ ಹಿಂದೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರದಲ್ಲಿದ್ದಾಗ ರೈತರಿಗಾಗಿ ರೂಪಿಸಿದ ಕಾರ್ಯಕ್ರಮಗಳೇ ಇದಕ್ಕೆ ಸಾಕ್ಷಿ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು, ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಬರಗಾಲದಿಂದಾಗಿ ರೈತಾಪಿ ವರ್ಗ ಕಂಗೆಟ್ಟಿದೆ, ನೂರಾರು ಜನ ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ಸಂದರ್ಭದಲ್ಲಿ ಅವರ ನೆರವಿಗೆ ಧಾವಿಸುವುದನ್ನು ಬಿಟ್ಟು ಈ ಎರಡೂ ಪಕ್ಷಗಳು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿವೆ, ಕ್ಷುಲ್ಲಕ ರಾಜಕಾರಣ ಮತ್ತು ಭ್ರಷ್ಟಾಚಾರದಲ್ಲಿ ನಿರತವಾಗಿವೆ ಎಂದು ಆರೋಪಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ರಾಜ್ಯ ವಕ್ತಾರ ಎಸ್.ಎಲ್.ಭೋಜೇಗೌಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ದೇಶದ ಜನತೆ ಅವರಿಂದ ಅಭಿವೃದ್ದಿಯನ್ನು ನಿರೀಕ್ಷಿಸಿದ್ದರು. ಅದರೆ ಆ ಎಲ್ಲಾ ನಿರೀಕ್ಷೆಗಳೂ ಇಂದು ಹುಸಿಯಾಗಿವೆ. ನೋಟು ಅಮಾನ್ಯ ಸೇರಿದಂತೆ ಕೇಂದ್ರ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳು ಶ್ರೀಸಾಮಾನ್ಯನನ್ನು ಸಂಕಷ್ಟಕ್ಕೀಡು ಮಾಡಿವೆ ಎಂದು ದೂರಿದರು.
ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ ಮಾತನಾಡಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಹಣ ತೊಡಗಿಸಿರುವ ರೈತರಿಗೆ ಪರಿಹಾರ ನೀಡದೇ ದ್ರೋಹ ಬಗೆದಿದೆ ಎಂದು ಆರೋಪಿಸಿದರು.
ಇದೇ ವೇಳೆ ವಿವಿಧ ಪಕ್ಷಗಳ 80 ಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್ಗೆ ಸೇರ್ಪಡೆಗೊಂಡರು, ಪಕ್ಷದ ಬಾವುಟ ನೀಡಿ ಅವರನ್ನು ಸ್ವಾಗತಿಸಲಾಯಿತು.
ಜೆಡಿಎಸ್ ಮುಖಂಡರಾದ ಆರ್.ದೇವಿಪ್ರಸಾದ್, ಮಂಜಪ್ಪ, ಭೈರೇಗೌಡ, ಎಂ.ಡಿ.ರಮೇಶ್, ಜಯರಾಜ್ ಅರಸ್, ಮೂರ್ತಿ, ಸಿದ್ದೇಶ್, ಈಶ್ವರ್, ಜಯಕುಮಾರ್, ಮೊನಪ್ಪ, ಕೆಂಗೇಗೌಡ ಉಪಸ್ಥಿತರಿದ್ದರು.







