ನ.22 ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ವಾಟಾಳ್ ನಾಗರಾಜ್

ಬೆಂಗಳೂರು, ನ.17: ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಗೈರು ಹಾಜರಾಗುತ್ತಿರುವ ಶಾಸಕರಿಗೆ ಛೀಮಾರಿ ಹಾಕಲು ನ.22ರಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗಾರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರದಿಂದ ಆರಂಭಗೊಂಡಿರುವ ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳನ್ನು ಚರ್ಚಿಸುವುದರ ಬದಲಿಗೆ ಅನಗತ್ಯ ಟೀಕೆಗಳು ಮಾಡುತ್ತಾ ಕಾಲಹರಣ ಮಾಡಿದ್ದಾರೆ. ಮುಖ್ಯ ವಿಷಯಗಳ ಚರ್ಚೆ ನಡೆದೇ ಇಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರಕಾರಗಳು ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಕಡೆಗಣಿಸುತ್ತಲೇ ಬಂದಿವೆ. ಈ ಬಾರಿಯ ಅಧಿವೇಶನದಲ್ಲೂ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಗಡಿ ವಿಚಾರವನ್ನು, ಎರಡು ವರ್ಷಗಳಿಂದ ಸತ್ಯಾಗ್ರಹಗಳನ್ನು ಮಾಡುತ್ತಾ ಬಂದಿರುವ ಮಹಾದಾಯಿ ಮತ್ತು ಕಳಸಾಬಂಡೂರಿ ಯೋಜನೆಯ ಕುರಿತು ಮತ್ತು ಅಲ್ಲಿನ ನೀರಾವರಿ, ವಿದ್ಯುತ್, ಶಿಕ್ಷಣ, ಉದ್ಯೋಗಗಳಂತಹ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲು ಶಾಸಕರು ವಿಫಲರಾಗಿದ್ದಾರೆ. ಅಧಿವೇಶನದಲ್ಲಿ ಚರ್ಚೆಗೊಳಪಟ್ಟ ವಿಷಯಗಳೆಷ್ಟು ಎಂಬುದರ ಜತೆಗೆ ಅಧಿವೇಶನದಲ್ಲಿ ಭಾಗವಹಿಸಿದ್ದ ಶಾಸಕರೆಷ್ಟು ಎಂಬುದನ್ನು ಎಣಿಸುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಶಾಸಕರು ಕರ್ನಾಟಕದ ವಿರುದ್ಧ ದಾಳಿ ಮಾಡುತ್ತಿದ್ದರೂ ಅವರನ್ನು ಅಧಿವೇಶನದಿಂದ ಹೊರಹಾಕುವಲ್ಲಿ ವಿಧಾನಸಭೆ ವಿಫಲವಾಗಿದೆ. ವರ್ಷಕ್ಕೆ ಒಂದು ಬಾರಿ ಅಧಿವೇಶನ ಮಾಡಿ, ಸದನ ಮುಗಿದ ಕೂಡಲೇ ಬೀಗ ಹಾಕಿ ಬರುವುದು ಸರಿಯಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಒಬ್ಬ ಮಂತ್ರಿಯಾದರೂ ಅಲ್ಲಿನ ಸಮಸ್ಯೆ ಏನು ಎಂಬುದನ್ನು ಚರ್ಚಿಸಲು ಅಲ್ಲಿ ಲಭ್ಯವಿರಬೇಕು ಎಂದು ಹೇಳಿದರು.
ಯಾವುದೇ ಒಂದು ಮಸೂದೆ ಕಾಯಿದೆ ಆಗಲು ಸದನದಲ್ಲಿ ಮಂಡನೆ ಆದ ಮೇಲೆ ತಿದ್ದುಪಡಿಗೆ ಅವಕಾಶವಿರುತ್ತದೆ. ಅದರ ಸರಿ ತಪ್ಪುಗಳ ಕುರಿತು ಚರ್ಚಿಸಲು ಅವಕಾಶವಿರುತ್ತದೆ. ಈ ಹಂತದಲ್ಲೇ ಖಾಸಗಿ ವೈದ್ಯರು ವೈದ್ಯಕೀಯ ಮಸೂದೆಯನ್ನು ತಡೆಯುವುದು ಪ್ರಜಾಪ್ರಭುತ್ವಕ್ಕೆ ಅಪಚಾರ. ಜನಪರವಾದ ಉದ್ದೇಶದಿಂದ ಆರೋಗ್ಯ ಸಚಿವ ರಮೇಶ್ ಕುಮಾರ್ ತಂದಿರುವ ಮಸೂದೆಯ ಪೂರ್ವಾಪರ ಯೋಚಿಸದೆ ಅವರನ್ನು ಖಳನಾಯಕನನ್ನಾಗಿ ನೋಡುವುದು ಸರಿಯಲ್ಲ ಎಂದರು.
ಪದ್ಮಾವತಿ ಚಿತ್ರದಲ್ಲಿ ನಟಿಸಿದ ನಾಯಕಿ ದೀಪಿಕಾ ಪಡುಕೋಣೆಯ ಮೂಗು ಮುರಿಯಬೇಕು ಎಂಬ ಹೇಳಿಕೆ ನೀಡಿರುವುದು ತರವಲ್ಲ. ಒಂದು ಚಿತ್ರದಲ್ಲಿ ಯಾವ ಪಾತ್ರ, ಹೇಗೆ ನಟಿಸಬೇಕು ಎಂಬುದು ನಿರ್ಮಾಪಕ ಮತ್ತು ನಿರ್ದೇಶಕನ ತೀರ್ಮಾನವಾಗಿರುತ್ತದೆ. ಅದರ ಬದಲು ಆ ಪಾತ್ರದಲ್ಲಿ ನಟಿಸಿದ ನಾಯಕಿಗೆ ಜೀವಬೆದರಿಕೆಯ ಹಾಕುವುದು ಸಲ್ಲ ಎಂದರು.







