ನೋಟ್ ಬ್ಯಾನ್ ಅನುಷ್ಠಾನ ಸಂಪೂರ್ಣ ದೋಷಪೂರಿತ: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಥೇಲರ್
ಹೊಸದಿಲ್ಲಿ, ನ.19: ನೋಟ್ ಬ್ಯಾನ್ ಮಾಡಿದ ಭಾರತ ಸರಕಾರದ ನಿರ್ಧಾರವು ಉತ್ತಮ ಪರಿಕಲ್ಪನೆಯಾಗಿದ್ದರೂ ಅದರ ಅನುಷ್ಠಾನ ಸಂಪೂರ್ಣ ದೋಷಪೂರಿತವಾಗಿದೆ ಎಂದು ಅಮೆರಿಕಾದ ಅರ್ಥಶಾಸ್ತ್ರಜ್ಞ ಹಾಗು ನೊಬೆಲ್ ಪ್ರಶಸ್ತಿ ಪುರಸ್ಕೃತ ರಿಚರ್ಡ್ ಥೇಲರ್ ಹೇಳಿದ್ದಾರೆ.
ಇಷ್ಟೇ ಅಲ್ಲದೆ ನೋಟ್ ಬ್ಯಾನ್ ನಂತರ 2000 ರೂ. ಮುಖಬೆಲೆಯ ನೋಟನ್ನು ಪರಿಚಯಿಸಿದ ನಡೆ ‘ಗೊಂದಲಮಯ’ವಾಗಿದೆ ಹಾಗು ಭಾರತವನ್ನು ಕಡಿಮೆ ನಗದು ಆರ್ಥಿಕತೆಯನ್ನಾಗಿ ಮಾಡುವ ಉದ್ದೇಶದ ನೋಟ್ ಬ್ಯಾನ್ ನಿರ್ಧಾರಕ್ಕೆ ಹೊಡೆತ ನೀಡುತ್ತದೆ ಎಂದವರು ಹೇಳಿದ್ದಾರೆ.
ನೋಟ್ ಬ್ಯಾನ್ ಕುರಿತಾಗಿ ಚಿಕಾಗೋ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸ್ವರಾಜ್ ಕುಮಾರ್ ಅವರು ತಮ್ಮ ಅಭಿಪ್ರಾಯ ಏನು ಎಂದು ಪ್ರಶ್ನಿಸಿದ್ದಕ್ಕಾಗಿ ಥೇಲರ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಕುಮಾರ್ ಟ್ವಿಟರ್ ನಲ್ಲಿ ಥೇಲರ್ ಜೊತೆಗಿನ ಇಮೇಲ್ ಮಾತುಕತೆಯನ್ನು ಪೋಸ್ಟ್ ಮಾಡಿದ್ದಾರೆ. “ಪರಿಕಲ್ಪನೆಯು ಉತ್ತಮವಾಗಿದೆ. ಆದರೆ ಇದರ ಅನುಷ್ಠಾನವು ಆಳವಾಗಿ ದೋಷಪೂರಿತವಾಗಿದೆ ಹಾಗು 2000 ರೂ. ನೋಟುಗಳನ್ನು ಪರಿಚಯಿಸಿರುವುದು ಸಂಪೂರ್ಣ ಪ್ರಕ್ರಿಯೆಯನ್ನು ಗೊಂದಲಕ್ಕೀಡು ಮಾಡುತ್ತದೆ” ಎಂದು ಥೇಲರ್ ಹೇಳಿದ್ದಾರೆ.