ಅನಾಥ ಮಕ್ಕಳ ಕ್ಷೇಮಾಭಿವೃದ್ಧಿಗೆ ಶ್ರಮಿಮಿಸುವಂತಾಗಬೇಕು: ಟಿ.ಆರ್.ಸುರೇಶ್
ಅನಾಥಾಶ್ರಮ ಮಕ್ಕಳ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧಾಕೂಟ
ಮಂಗಳೂರು ನ. 19: ಅನಾಥ ಮಕ್ಕಳ ಅನಾಥ ಪ್ರಜ್ಞೆಯನ್ನು ನಿರ್ಮೂಲನೆಗೊಳಿಸಿ ಅವರ ಕ್ಷೇಮಾಭಿವೃದ್ಧಿಗೆ ಎಲ್ಲರೂ ಶ್ರಮಿಸುವಂತಾಗಬೇಕು ಎಂದು ನಗರದ ಪೋಲೀಸ್ ಆಯುಕ್ತ ಟಿ.ಆರ್. ಸುರೇಶ್ ಸಲಹೆ ನೀಡಿದ್ದಾರೆ.
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ನಗರ ಜಂಟಿ ಆಶ್ರಯದಲ್ಲಿ ನಗರದ ರಾಮಕೃಷ್ಣ ಕಾಲೇಜಿನ ಆವರಣದಲ್ಲಿ ರವಿವಾರ ನಡೆದ ರೋಟರಿ 19ನೆ ವಾರ್ಷಿಕ ಅನಾಥಾಶ್ರಮ ಮಕ್ಕಳ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕೂಟ ಹಾಗೂ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತ ಮಕ್ಕಳ ಉತ್ಸಾಹಕ್ಕೆ ಸ್ಪಂದಿಸಿ ಸೂಕ್ತ ವೇದಿಕೆ ಒದಗಿಸಿ, ಪ್ರೋತ್ಸಾಹ ನೀಡುವ ರೋಟರಿ ಸಂಸ್ಥೆಯ ಸಾಮಾಜಿಕ ಕಳವಳಿ ಮತ್ತು ಸೇವಾ ಮನೋಭಾವ ಶ್ಲಾಘನೀಯ ಎಂದರು.
ಸಂಘಟನಾ ಅಧ್ಯಕ್ಷ ರೋ.ಡಾ. ದೇವದಾಸ್ ರೈ ಮಾತನಾಡಿ, ಈ ವಾರ್ಷಿಕ ಕಾರ್ಯಕ್ರಮವು ತಮ್ಮ ಸಂಸ್ಥೆಯ ಪ್ರತಿಷ್ಠಿತ ಸಮಾಜ ಸೇವಾ ಚಟುವಟಿಕೆಯ ಯೋಜನೆಯ ಅಂಗವಾಗಿದ್ದು, ಅನಾಥಾಶ್ರಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ವೇದಿಕೆಯನ್ನು ಒದಗಿಸುವುದು ಹಾಗೂ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಳ್ಳುವುದು ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ ಎಂದರು.
ರೋಟರಿ ವಲಯ 2ರ ಸಹಾಯಕ ಗವರ್ನರ್ ರೋ.ನವೀನ್ ಕುಮಾರ್, ಎಸ್.ಕೆ.ಎಸ್. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸನತ್ ಶೆಟ್ಟಿ, ರೋಟರಿ ಸಂಸ್ಥೆಯ ಸ್ಥಾಪನಾಧ್ಯಕ್ಷ ರೋ.ಪ್ರೇಮನಾಥ್ ಕುಡ್ವ, ರೋಟರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷೆ ರೋ. ಪವಿತ್ರಾ ಆಚಾರ್ಯ, ಕಾರ್ಯದರ್ಶಿ, ರೋ.ಶರತ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ರೋ.ರೇಮಂಡ್ ಡಿಕುನ್ಹಾ ಸ್ವಾಗತಿಸಿದರು.
ಸಂಸ್ಥೆಯ ಕಾರ್ಯದರ್ಶಿ ರೋ. ಪ್ರಕಾಶ್ ಚಂದ್ರ ವಂದಿಸಿದರು, ರೋ.ಕೆ.ಎಂ. ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ನಗರದ ಕಾರ್ಯಾಚರಿಸುತ್ತಿರುವ 10 ಅನಾಥಾಶ್ರಮಗಳ ಸುಮಾರು 600 ಮಕ್ಕಳು ಸ್ಪರ್ಧಾ ಕೂಟದಲಿಲ್ಲ್ಲಿ ಭಾಗವಹಿಸಿದರು. ಹುರುಪು ಹಾಗೂ ಉತ್ಸಾಹದಿಂದ ಸ್ಪರ್ಧಾಕೂಟದಲ್ಲಿ ಪಾಲ್ಗೊಂಡರು. ಆಕರ್ಷಕ ಪಥ ಸಂಚಲನ ನೀಡಿದ ಬಳಿಕ ತಮ್ಮಲ್ಲಿ ಹುದುಗಿದ ಕ್ರೀಡಾ ಸಾಮರ್ಥ್ಯ ಮತ್ತು ಕಲಾಪ್ರತಿಭೆಯನ್ನು ಪ್ರದರ್ಶಿಸಿ ಸಭಿಕರನ್ನು ರಂಜಿಸಿದರು.