ದಾವಣಗೆರೆ : ಆಗ್ರ್ಯಾನಿಕ್ ನೆಸ್ಟ್ ಸಾವಯವ ವಸ್ತುಗಳ ಮಾರಾಟ ಮಳಿಗೆ ಉದ್ಘಾಟನೆ

ದಾವಣಗೆರೆ,ನ.19:ಆರೋಗ್ಯದ ಹಿತದೃಷ್ಟಿಯಿಂದ ರಾಸಾಯನಿಕಮುಕ್ತ ಸಾವಯವ ಕೃಷಿಗೆ ರೈತರು ಮರಳಬೇಕು. ಸಾರ್ವಜನಿಕರೂ ಸಹ ಸಾವಯವ ಪದಾರ್ಥಗಳನ್ನು ಹೆಚ್ಚು ಬಳಸುವ ಮೂಲಕ ರೈತರಿಗೆ ಉತ್ತೇಜನ ತುಂಬಬೇಕು ಎಂದು ಮಾಜಿ ಕೃಷಿ ಸಚಿವ ಎಸ್.ಎ. ರವೀಂದ್ರನಾಥ ಹೇಳಿದರು.
ನಗರದ ಹದಡಿ ರಸ್ತೆಯ ಕಿಸಾನ್ ವಲ್ರ್ಡ್ ಆವರಣದಲ್ಲಿ ಭಾನುವಾರ ಆಗ್ರ್ಯಾನಿಕ್ ನೆಸ್ಟ್ ಸಾವಯವ ವಸ್ತುಗಳ ಮಾರಾಟ ಮಳಿಗೆ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೋಗರಹಿತ ಜೀವನಕ್ಕಾಗಿ ಜನರಿಗೆ ಸಾವಯವ ವಸ್ತು ಒದಗಿಸಲು ಮಾರಾಟ ಮಳಿಗೆ ತೆರೆದಿರುವುದು ಶ್ಲಾಘನೀಯ. ಆದರೆ, ಅಲ್ಲಲ್ಲಿ ರಾಸಾಯನಿಕ ಬಳಸಿ, ಸಾವಯವ ಎಂಬುದಾಗಿ ಜನರನ್ನು ವಂಚಿಸುತ್ತಿರುವ ಆರೋಪ ಕೇಳಿಬರುತ್ತಿವೆ. ಹೀಗಾಗದಂತೆ ನೂರಕ್ಕೆ ನೂರರಷ್ಟು ಸಾವಯವ ಪದ್ಧತಿ ಅಳವಡಿಸಿಕೊಂಡಿರುವ ರೈತರಿಂದಲೇ ಉತ್ಪನ್ನ ಖರೀದಿಸಬೇಕು. ಗ್ರಾಹಕರಿಗೆ ಗುಣಮಟ್ಟದ ವಸ್ತುಗಳು ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.
ನೈಸರ್ಗಿಕವಾದ ಸಾವಯವ ಕೃಷಿ ಹಾಗೂ ಆಹಾರ ಪದಾರ್ಥಗಳಿಗೆ ಸರ್ಕಾರ ಇನ್ನಷ್ಟು ಉತ್ತೇಜನ ನೀಡಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಕೃಷಿ ಮಂತ್ರಿಯಾಗಿದ್ದಾಗ ಸಾವಯವ ಕೃಷಿ ಉತ್ತೇಜನಕ್ಕೆ ಒತ್ತು ನೀಡಿದ್ದೆವು. ಸಾವಯವ ಕೃಷಿ ಮಿಷನ್ ಪ್ರಾರಂಭಿಸಿ, ಬಜೆಟ್ನಲ್ಲಿ 100 ಕೋಟಿ ರು. ಅನುದಾನ ಮೀಸಲಿಟ್ಟಿದ್ದೆವು. ಇದರಿಂದಾಗಿ ಜನರಲ್ಲಿ ಸಾವಯವ ಉತ್ಪನ್ನಗಳ ಬಗ್ಗೆ ಒಲವು ಹೆಚ್ಚುತ್ತಿದೆ. ಇಂತಹ ಸಂದರ್ಭ ಸಾವಯವ ಕೃಷಿ ಪದ್ಧತಿ ಹಾಗೂ ರಾಸಾಯನಿಕಮುಕ್ತ ಆಹಾರ ಪದಾರ್ಥಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ಕೊಡಬೇಕು ಎಂದ ಅವರು, ಮೊದಲೆಲ್ಲಾ ಯಾವುದೇ ರಾಸಾಯನಿಕ ಸಿಂಪಡಿಸದೆ ರಾಗಿ ಮತ್ತಿತರೆ ಬೆಳೆ ಬೆಳೆಯಲಾಗುತ್ತಿತ್ತು. ಐದಾರು ವರ್ಷ ದಾಸ್ತಾನು ಮಾಡಿದರೂ ರಾಗಿಗೆ ಹುಳುಬಾಧೆ ಇರಲಿಲ್ಲ. ಆದರೆ ಈಗ ಪ್ರತಿಯೊಂದಕ್ಕೂ ರಾಸಾಯನಿಕ ಕೀಟನಾಶಕ, ಗೊಬ್ಬರ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಮಾರಾಟ ಮಳಿಗೆ ಉದ್ಘಾಟಿಸಿದ ಮಾಜಿ ಶಾಸಕ, ಚಲನಚಿತ್ರ ನಟ ಬಿ.ಸಿ. ಪಾಟೀಲ್ ಮಾತನಾಡಿ, ಅವಸರದ ಜಗತ್ತಿನಲ್ಲಿ ಹೈಬ್ರಿಡ್ ತಳಿ ಮುಂಚೂಣಿಗೆ ಬಂದಿದ್ದು, ಯುವಜನರು ಜಂಕ್ ಫುಡ್, ಫಾಸ್ಟ್ ಫುಡ್ಗಳತ್ತ ಹೊರಳುತ್ತಿದ್ದಾರೆ. ಯಾರೊಬ್ಬರೂ ಆಹಾರದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ರೋಗ ಬಂದರೆ ಆಸ್ಪತ್ರೆಗಳಿವೆ ಎಂಬ ಧೋರಣೆಯೇ ಇದಕ್ಕೆ ಕಾರಣ. ಆದ್ದರಿಂದ ವಿಷಯುಕ್ತ ಆಹಾರ ಪದಾರ್ಥಗಳ ದುಷ್ಪರಿಣಾಮ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದ ಅವರು, ಸಾವಯವ ಪದ್ಧತಿಯಲ್ಲಿ ಆಹಾರ ಧಾನ್ಯ ಬೆಳೆಯುವುದು ಕಷ್ಟದ ಕೆಲಸ. ಆದರೂ ಈ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡುತ್ತಿರುವ ರೈತರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕಿದೆ. ಸಾವಯವ ಕೃಷಿಕರಿಗೆ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹಧನ ಸಿಗಬೇಕಿದೆ ಎಂದು ಅವರು ಹೇಳಿದರು.
ಹಿಂದೆಲ್ಲಾ ಕೃಷಿಕರ ಮನೆಗಳಲ್ಲಿ ಹತ್ತಾರು ದನ-ಕರು ಇರುತ್ತಿದ್ದವು. ಕೊಟ್ಟಿಗೆ ಗೊಬ್ಬರಕ್ಕೆ ಯಾವುದೇ ಅಭಾವವಿರಲಿಲ್ಲ. ಆದರೆ, ಕ್ರಮೇಣ ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಕಡಿಮೆಯಾಗಿದ್ದು, ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಅತಿಯಾಗಿದೆ. ಸೋಮಾರಿತನದಿಂದಾಗಿ ಶ್ರಮ ಸಂಸ್ಕøತಿ ಮರೆತಿರುವ ಹಳ್ಳಿಗರು ಗೋ ಸಾಕಾಣಿಕೆ ನಿಲ್ಲಿಸಿರುವುದೇ ಈ ಸಮಸ್ಯೆಗೆಲ್ಲಾ ಕಾರಣ. ಇನ್ನಾದರೂ ಹಳ್ಳಿ ಕೊಟ್ಟಿಗೆಗಳಲ್ಲಿ ಕೃಷಿಗೆ ಪೂರಕವಾದ ಜಾನುವಾರು ಸಾಕಣೆ ಮತ್ತೆ ಶುರುವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳ ಪ್ರಾಂತೀಯ ಸಾವಯವ ಕೃಷಿ ಸಂಘಗಳ ಒಕ್ಕೂಟದ ಅಧ್ಯಕ್ಷ ಟಿ. ಕೃಪ ವಹಿಸಿದ್ದರು. ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಆಹಾರ ತಜ್ಞೆ ಬೆಂಗಳೂರಿನ ಚಮನ್ ಫರ್ಜಾನಾ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ವಾಣಿಜ್ಯ ತೆರಿಗೆ ಇಲಾಖೆ ಉಪಾಯುಕ್ತ ಡಿ.ಪಿ. ಪ್ರಕಾಶ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಸದಾಶಿವ, ನಿವೃತ್ತ ಜಂಟಿ ನಿರ್ದೇಶಕ ಆರ್.ಜಿ. ಗೊಲ್ಲರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಟಿ.ಆರ್.ವೇದಮೂರ್ತಿ, ಡಾ.ಟಿ.ಎನ್. ದೇವರಾಜ ಮತ್ತಿತರರಿದ್ದರು. ಸಿದ್ದೇಶ್ ಕತ್ತಲಗೆರೆ ನಿರೂಪಿಸಿದರು. ಯುಕ್ತಾ ಪಾಟೀಲ್, ಭುವನ್ ಗೌಡ ಪ್ರಾರ್ಥಿಸಿದರು. ಕೆ.ಎಸ್. ಪ್ರಭುದೇವ್ ಸ್ವಾಗತಿಸಿದರು. ಶುಭ ವಂದಿಸಿದರು.







