ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ಮಂಡನೆ
ಆಸ್ಪತ್ರೆಗಳಲ್ಲಿ ದರ ಪಟ್ಟಿ ಪ್ರದರ್ಶನ ಕಡ್ಡಾಯ ಸೇರಿದಂತೆ ವಿಧೇಯಕದಲ್ಲೇನಿದೆ
.jpg)
ಚಿಕಿತ್ಸೆ ಫಲಕಾರಿಯಾಗದೆ ರೋಗಿ ಮೃತಪಟ್ಟರೆ ಬಾಕಿ ಹಣಕ್ಕೆ ಬೇಡಿಕೆ ಇಡುವಂತಿಲ್ಲ
ತಪ್ಪಿತಸ್ಥ ವೈದ್ಯರನ್ನು ಜೈಲಿಗಟ್ಟುವ ಅಂಶ ಕೈ ಬಿಡಲಾಗಿದೆ
ಬೆಳಗಾವಿ, ನ.21: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್ಕುಮಾರ್ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
ರಾಜ್ಯ ಸರಕಾರ ಉದ್ದೇಶಿತ ಮಸೂದೆ ಮಂಡನೆ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಐದು ದಿನಗಳ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು. ಈ ವಿಷಯ ಕುರಿತು ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿತ್ತು.
ಆನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಖಾಸಗಿ ವೈದ್ಯರ ಸಂಘದ ಪದಾಧಿಕಾರಿಗಳೊಂದಿಗೆ ನಡೆದ ಸಂಧಾನ ಮಾತುಕತೆಯಲ್ಲಿ ಕೆಲವು ತಿದ್ದುಪಡಿಗಳೊಂದಿಗೆ ವಿಧೇಯಕ ಮಂಡನೆ ಮಾಡಲು ತೀರ್ಮಾನಿಸಲಾಗಿತ್ತು. ಅದರಂತೆ, ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿ, ಇಂದು ವಿಧಾನಸಭೆಯಲ್ಲಿ ವಿಧೇಯಕವನ್ನು ಮಂಡಿಸಲಾಯಿತು.
ವಿಧೇಯಕದಲ್ಲಿರುವ ಅಂಶಗಳು:
*ಸರಕಾರಿ ಯೋಜನೆಗಳಡಿಯಲ್ಲಿ ಒದಗಿಸಲಾಗುವ ಆರೋಗ್ಯ ಸೇವೆಗಳಿಗೆ ಸರಕಾರ ನಿಗದಿಪಡಿಸಿರುವ ದರವನ್ನು ದರಪಟ್ಟಿ ಮೂಲಕ ಆಸ್ಪತ್ರೆಯಲ್ಲಿ ಹಾಗೂ ವೆಬ್ಸೈಟ್ನಲ್ಲಿ ಪ್ರದರ್ಶಿಸಬೇಕು.
*ಆಯಾ ಆಸ್ಪತ್ರೆಗಳ ಚಿಕಿತ್ಸಾ ದರ ಪಟ್ಟಿಯನ್ನು ಆಯಾ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು.
*ಚಿಕಿತ್ಸೆ ಫಲಕಾರಿಯಾಗದೆ ರೋಗಿ ಮೃತಪಟ್ಟರೆ, ಚಿಕಿತ್ಸೆಯ ಬಾಕಿ ಹಣಕ್ಕಾಗಿ ಬೇಡಿಕೆ ಇಡುವಂತಿಲ್ಲ.
*ನಿಗದಿತ ಅವಧಿಗಿಂತ ಹೆಚ್ಚಿನ ಸಮಯ ರೋಗಿಗಳನ್ನು ಕಾಯಿಸದೇ ಸಮಾಲೋಚನೆ ನಡೆಸಬೇಕು. ಅಲ್ಲದೆ, ಸಮಾಲೋಚನಾ ಕೊಠಡಿಯೊಳಗೆ ರೋಗಿಯ ಸಂಬಂಧ ಅಥವಾ ಸ್ನೇಹಿತರಿಗೆ ಅವಕಾಶ ನೀಡಬೇಕು.
*ತಪ್ಪು ಮಾಡುವ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸಬೇಕು ಎಂಬ ಅಂಶವನ್ನು ವಿಧೇಯಕದಿಂದ ಹೊರಗಿಡಲಾಗಿದೆ.
*ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ವೈದ್ಯಾಧಿಕಾರಿ, ಜಿಲ್ಲಾ ಆಯುಷ್ ಅಧಿಕಾರಿ, ಭಾರತೀಯ ವೈದ್ಯರ ಒಕ್ಕೂಟದ ಒಬ್ಬ ಪ್ರತಿನಿಧಿ, ಒಬ್ಬರು ಮಹಿಳಾ ಪ್ರತಿನಿಧಿ ಇರುವ ಐದು ಜನರನ್ನು ಒಳಗೊಂಡ ದೂರು ಪ್ರಾಧಿಕಾರ ಸಮಿತಿ ರಚಿಸಲು ಉದ್ದೇಶಿಸಲಾಗಿದೆ.
*ದೂರು ಪ್ರಾಧಿಕಾರದ ಎದುರು ವಾದ ಮಂಡಿಸಲು ವಕೀಲಕರನ್ನು ನೇಮಕಗೊಳಿಸಲು ಆರೋಪಿತ ವೈದ್ಯರು ಅಥವಾ ವೈದ್ಯಕೀಯ ಸಂಸ್ಥೆಗೆ ಅವಕಾಶ ಕಲ್ಪಿಸಲಾಗಿದೆ.
*ಸರಕಾರಿ ಯೋಜನೆಗಳಡಿಯಲ್ಲಿ ಒದಗಿಸಲಾಗುವ ಆರೋಗ್ಯ ಸೇವೆಗಳಿಗೆ ಚಿಕಿತ್ಸೆ ದರ ನಿಗದಿ ಮಾಡುವ ಅಧಿಕಾರ ಸರಕಾರ ತನ್ನ ಬಳಿ ಇರಿಸಿಕೊಳ್ಳಲಿದೆ.
*ತುರ್ತು ಚಿಕಿತ್ಸಾ ಸಮಯದಲ್ಲಿ ಮುಂಗಡ ಹಣಕ್ಕೆ ರೋಗಿಗಳ ಸಂಬಂಧಪಟ್ಟವರಿಂದ ಒತ್ತಾಯ ಮಾಡುವಂತಿಲ್ಲ.







