"ಬೆರಳು, ಕೈ ಕತ್ತರಿಸುತ್ತೇನೆ ಎಂದ ನಿತ್ಯಾನಂದ ರಾಯ್ ಬಗ್ಗೆ 'ಭಕ್ತ ಚಾನೆಲ್ ಗಳು' ಚರ್ಚಿಸಲಿ"
ಮೋದಿ, ಶಾ ಕ್ಷಮೆಗೆ ಕಾಂಗ್ರೆಸ್ ಆಗ್ರಹ
ಹೊಸದಿಲ್ಲಿ, ನ. 22: ಪ್ರಧಾನಿ ಅವರ ವಿರುದ್ಧ ಕೈ ಎತ್ತಿದರೆ, ಬೆರಳೆತ್ತಿದರೆ ಕತ್ತರಿಸಲಾಗುವುದು ಎಂಬ ಬಿಜೆಪಿಯ ಬಿಹಾರ ಘಟಕದ ಮುಖ್ಯಸ್ಥನ ಹೇಳಿಕೆಗೆ ಬಿಜೆಪಿಯನ್ನು ಇಂದು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಈ ಹೇಳಿಕೆಗೆ ನರೇಂದ್ರ ಮೋದಿ ಅಥವಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದೆ.
ಒಂದು ವರ್ಗದ ಮಾದ್ಯಮಗಳನ್ನೂ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ನ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ, ಬಿಜೆಪಿ ಬಿಹಾರದ ಅಧ್ಯಕ್ಷ ನಿತ್ಯಾನಂದ ರಾಯ್ ಅವರು ಸೋಮವಾರ ನೀಡಿದ ಹೇಳಿಕೆ ಬಗ್ಗೆ ಭಕ್ತ ಚಾನೆಲ್ಗಳು ಚರ್ಚೆ ನಡೆಸಬೇಕು ಎಂದಿದ್ದಾರೆ.
ಮೋದಿ ಅವರಲ್ಲಿ ಪ್ರಶ್ನೆ ಕೇಳಿದರೆ, ಕೈ ಹಾಗೂ ಬೆರಳುಗಳನ್ನು ಕತ್ತರಿಸಲಾಗುತ್ತದೆಯೇ ? ಬಿಹಾರದ ಬಿಜೆಪಿ ನಾಯಕ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಅಮಿತ್ ಶಾ ಅವರಿಗೆ ಇದೆಯೇ ? ಎಂದು ಪ್ರಶ್ನಿಸಿ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.
ಮೋದಿಜಿ, ಅಮಿತ್ಶಾ ಕ್ಷಮೆ ಕೋರುವರೇ ? ಭಕ್ತ ಚಾನೆಲ್ ಗಳು ಈ ಬಗ್ಗೆ ಚರ್ಚೆ ನಡೆಸಲಿದೆಯೇ ? ಎಂದು ಸುರ್ಜೇವಾಲ ಪ್ರಶ್ನಿಸಿದ್ದಾರೆ.