ನೈಸ್ ಹಗರಣ ಚರ್ಚೆಗೆ ಆಗ್ರಹಿಸಿ ಜೆಡಿಎಸ್ ಧರಣಿ
.jpg)
ಬೆಳಗಾವಿ, ನ.24: ನೈಸ್ ಹಗರಣ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ನೀಡಿರುವ ಜಂಟಿ ಸದನಸಮಿತಿಯ ವರದಿ ಆಧರಿಸಿ ಚರ್ಚೆಗೆ ಅವಕಾಶ ನೀಡಬೇಕೆಂದು ವಿಧಾನಪರಿಷತ್ನಲ್ಲಿ ಶುಕ್ರವಾರ ಜೆಡಿಎಸ್ ಸದಸ್ಯರು ಧರಣಿ ನಡೆಸಿದರು.
ಕಲಾಪದ ಆರಂಭವಾಗುತ್ತಿದ್ದಂತೆ ಜೆಡಿಎಸ್ನ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ, ಕೆ.ಟಿ.ಶ್ರೀಕಂಠೇಗೌಡ, ಪುಟ್ಟಣ್ಣ, ಚೌಡಾರೆಡ್ಡಿ, ರಮೇಶ್ಬಾಬು, ಶರವಣ ಮತ್ತಿತರರು ವಿಷಯ ಪ್ರಸ್ತಾಪಿಸಿ ನೈಸ್ ಹಗರಣದ ಕುರಿತು ಚರ್ಚೆಗೆ ನಿನ್ನೆ ನೋಟಿಸ್ ನೀಡಲಾಗಿತ್ತು. ನಿರ್ದಿಷ್ಟ ಕಾಲವಾಧಿಯೊಳಗೆ ನೋಟಿಸ್ ಬಂದಲ್ಲ ಎಂದು ಸೂಚನೆಯನ್ನು ತಿರಸ್ಕರಿಸಲಾಗಿದೆ. ಇಂದು ಮತ್ತೆ ನೋಟಿಸ್ ನೀಡಿದ್ದೇವೆ. ಚರ್ಚೆಗೆ ಅವಕಾಶ ನೀಡಿ ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಭಾನಾಯಕ ಎಂ.ಆರ್.ಸೀತಾರಾಮ್ ಅವರು, ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಜೆಡಿಎಸ್ನ ಸದಸ್ಯ ರಮೇಶ್ಬಾಬು ಶೂನ್ಯವೇಳೆಯಲ್ಲಿ ಗಮನ ಸೆಳೆದಿದ್ದರು. ಅದಕ್ಕೆ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಉತ್ತರ ನೀಡಿದ್ದಾರೆ. ಈಗ ಮತ್ತೆ ನಿಲುವಳಿ ಸೂಚನೆಯಡಿ ಚರ್ಚೆ ಮಾಡಲು ಅವಕಾಶ ಇಲ್ಲ ಎಂದರು.
ಇದಕ್ಕೆ ಅನುಮೋದನೆ ನೀಡಿದ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪ ಆಗಿರುವುದರಿಂದ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಲು ಆಗುವುದಿಲ್ಲ. ಜತೆಗೆ ನಿಯಮ 330 ಅಡಿ ಕೂಡ ಸೂಚನಾ ಪತ್ರ ಬಂದಿದೆ, ಅದನ್ನು ಪರಿಶೀಲಿಸುತ್ತೇನೆ ಎಂದರು.
ಇದನ್ನು ಒಪ್ಪದ ಜೆಡಿಎಸ್ ಸದಸ್ಯರು, ಇದು 30ಸಾವಿರ ಕೋಟಿ ರೂ.ಮೊತ್ತದ ಹಗರಣ ಇದಾಗಿದೆ. ಸರಕಾರದ ಕಾನೂನು ಸಚಿವರ ನೇತೃತ್ವದ ಸದನ ಸಮಿತಿಯೇ ವರದಿ ನೀಡಿದೆ. ನೈಸ್ ಸಂಸ್ಥೆಯ ಮುಖ್ಯಸ್ಥ ಕಾನೂನು ಬಾಹಿರವಾಗಿ ಮೂಲ ಒಪ್ಪಂದವನ್ನು ಉಲ್ಲಂಘಿಸಿ ಒಂದು ಎಕರೆಗೆ 20 ಕೋಟಿ ರೂ.ಗಳಂತೆ ಮಾರಟ ಮಾಡಿಕೊಂಡು ವಂಚನೆ ಮಾಡುತ್ತಿದ್ದಾರೆ. ಇಂತಹ ಹಗರಣದ ಚರ್ಚೆಗೆ ಅವಕಾಶ ನೀಡಲೇಬೇಕು ಎಂದು ಒತ್ತಾಯಿಸಿ ಸದನದ ಬಾವಿಗೆ ಹೋದರು.
ಆಡಳಿತ ಪಕ್ಷದ ಸದಸ್ಯ ಸಿ.ಎಂ.ಇಬ್ರಾಹೀಂ ಮಾತನಾಡಿ, ನೈಸ್ ಹಗರಣದ ಬಗ್ಗೆ ಎಲ್ಲರಿಗೂ ಆತಂಕ ಇದೆ. ಆಡಳಿತ ಪಕ್ಷದಲ್ಲೂ ಚರ್ಚೆಗೆ ವಿರೋಧ ಇಲ್ಲ. ಒಂದಷ್ಟು ಸಮಯ ನಿಗದಿ ಮಾಡಿ ಎಂದು ಮನವಿ ಮಾಡಿದರು.
ನಿಯಮಗಳ ತಾಕಲಾಟ ಎದುರಾದಾಗ ಜೆಡಿಎಸ್ ನಾಯಕ ಬಸವರಾಜಹೊರಟ್ಟಿ ಅವರು, ನಿಲುವಳಿ ಸೂಚನೆಯಡಿ ಅಲ್ಲದೇ ಇದ್ದರೂ ಯಾವುದಾದರೂ ನಿಯಮದಡಿ ಅರ್ಧಗಂಟೆ ಚರ್ಚೆಗೆ ಅವಕಾಶ ನೀಡಿ. ಅವಕಾಶ ನೀಡುವ ಸಾರ್ವಭೌಮ ಅಧಿಕಾರ ನಿಮಗಿದೆ. ಈ ಮೊದಲು ಹಲವಾರು ಇಂತಹ ವಿಷಯಗಳು ಎದುರಾದಾಗ ಸಮಯಾವಕಾಶ ನೀಡಿದ್ದೀರಾ. ಈಗಲೂ ಅವಕಾಶ ನೀಡಿ ಎಂದು ಮನವಿ ಮಾಡಿದರು.
ಸೂಕ್ತ ನೋಟಿಸ್ ಆಧರಿಸಿ ಅರ್ಧಗಂಟೆ ಕಾಲ ಚರ್ಚೆಗೆ ಸಮಯ ನಿಗದಿ ಮಾಡುವುದಾಗಿ ಸಭಾಪತಿ ಭರವಸೆ ನೀಡಿದ ನಂತರ ಜೆಡಿಎಸ್ ಸದಸ್ಯರು ಧರಣಿ ಕೈ ಬಿಟ್ಟರು.







