ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿದರೆ ಕಠಿಣ ಕ್ರಮ : ವಾರ್ಡನ್ಗಳಿಗೆ ಡಿಸಿ-ಸಿಇಓ ಎಚ್ಚರಿಕೆ
ಶಿವಮೊಗ್ಗ-ತೀರ್ಥಹಳ್ಳಿ-ಭದ್ರಾವತಿ ತಾಲೂಕುಗಳು ಸರ್ಕಾರಿ ಹಾಸ್ಟೆಲ್ ಮುಖ್ಯಸ್ಥರ ಸಭೆ

ಶಿವಮೊಗ್ಗ, ನ. 26: ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ರಾಕೇಶ್ಕುಮಾರ್ರವರು ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಭದ್ರಾವತಿ ತಾಲೂಕು ವ್ಯಾಪ್ತಿಯ ಸರ್ಕಾರಿ ಹಾಸ್ಟೆಲ್ ವಾರ್ಡನ್ಗಳ ಸಭೆ ನಡೆಸಿದರು.
'ಕಳೆದ ತಿಂಗಳು ಉನ್ನತ ಅಧಿಕಾರಿಗಳ ತಂಡವು ಕೆಲ ಹಾಸ್ಟೆಲ್ಗಳಿಗೆ ದಿಢೀರ್ ಭೇಟಿಯಿತ್ತು ಪರಿಶೀಲನೆ ನಡೆಸಿದ ವೇಳೆ ದಾಸ್ತಾನು ಪುಸ್ತಕ, ಆಹಾರ ಸಾಮಗ್ರಿಗಳ ದಾಸ್ತಾನು ವಿವರ ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು ಬೆಳಕಿಗೆ ಬಂದಿತ್ತು. ಈ ಕುರಿತಂತೆ 41 ವಾರ್ಡನ್ಗಳಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಈರ್ವರನ್ನು ಅಮಾನತ್ತುಗೊಳಿಸಲಾಗಿದೆ.
ವಾರ್ಡನ್ಗಳು ಯಾವುದೇ ಗೊಂದಲ - ಗಡಿಬಿಡಿಗೆ ಆಸ್ಪದವಾಗದಂತೆ, ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಣೆ ಮಾಡಬೇಕು. ಕರ್ತವ್ಯ ಲೋಪ ಎಸಗುವವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು. ಹಾಗೆಯೇ ಹಾಸ್ಟೆಲ್ಗಳ ದಾಸ್ತಾನು ವಿವರದಲ್ಲಿ ಏರುಪೇರು ಕಂಡುಬಂದರೆ ಸಂಬಂಧಿಸಿದ ವಿಸ್ತರಣಾಧಿಕಾರಿಗಳ ವಿರುದ್ದ ಶಿಸ್ತುಕ್ರಮ ಜರುಗಿಸಲಾಗುವುದು' ಎಂದು ಡಿ.ಸಿ. - ಸಿಇಓ ಎಚ್ಚರಿಕೆ ನೀಡಿದ್ದಾರೆ.
ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ಗ್ರಂಥಾಲಯ ವ್ಯವಸ್ಥೆಯಿಲ್ಲದಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳು, ದಾಸ್ತಾನು ವಿವರ ಸೇರಿದಂತೆ ಸಂಬಂಧಪಟ್ಟ 28 ದಾಖಲಾತಿ ಪುಸ್ತಕಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು.ಹಾಸ್ಟೆಲ್ಗಳಲ್ಲಿ ಅಡುಗೆ ತಯಾರು ಮಾಡುವ ಸಿಬ್ಬಂದಿಗಳು ಪಾಲಿಸಬೇಕಾದ ಸೂಚೆಯ ಅನುಷ್ಠಾನ ಕುರಿತು ವಿಚಾರಣೆ ಮಾಡಬೇಕು.
ಅಡುಗೆ ತಯಾರು ಮಾಡುವ ಸಮಯದಲ್ಲಿ ಸಿಬ್ಬಂದಿಗಳು ಏಫ್ರಾನ್ಗಳು, ಕೈಗವಸು ಸೇರಿದಂತೆ ಅಗತ್ಯ ಸುರಕ್ಷಾ ಕ್ರಮಗಳ ಪಾಲನೆ ಮಾಡುತ್ತಿದ್ದಾರೆಯೇ ಇಲ್ಲವೇ ಎಂಬುವುದನ್ನು ಗಮನಿಸಬೇಕು. ಹಾಸ್ಟೆಲ್ಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬುವುದನ್ನು ಪರಿಶೀಲಿಸಬೇಕು ಎಂದು ವಾರ್ಡನ್ಗಳಿಗೆ ಸೂಚಿಸಿದ್ದಾರೆ.
ಕಟ್ಟಡಗಳು ದುರಸ್ತಿಗೆ ಬಂದಿದ್ದಲ್ಲಿ ತತ್ಕ್ಷಣವೇ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಕಳುಹಿಸಿ ಕೊಡಬೇಕು. ರಿಪೇರಿ ಕೆಲಗಳಿದ್ದರೆ ಉನ್ನತಾಧಿಕಾರಿಗಳಿಗೆ ಲಿಖಿತವಾಗಿ ಗಮನಕ್ಕೆ ತರಬೇಕು. ಅನಾರೋಗ್ಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ಸಮೀಪದ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲು ಮಾಡಬೇಕು. ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದ್ದಲ್ಲಿ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಹಾಸ್ಟೆಲ್ಗಳಲ್ಲಿ ಸ್ವಚ್ಚತೆ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ವಿದ್ಯಾರ್ಥಿ ನಿಲಯಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳ ಬಳಕೆ ಮಾಡಲಾಗುತ್ತಿರುವ ಕುರಿತಂತೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು. ಅಡುಗೆಯಲ್ಲಿ ತಾಜಾ ತರಕಾರಿಗಳ ಉಪಯೋಗಿಸಬೇಕು. ಆಹಾರ ಸಾಮಾಗ್ರಿಗಳು ಕಳಪೆ ಗುಣಮಟ್ಟದ್ದಾಗಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಡಿಸಿ ಹಾಗೂ ಸಿಇಓರವರು ವಾರ್ಡನ್ಗಳಿಗೆ ಸೂಚಿಸಿದ್ದಾರೆ.
ಸಭೆಯಲ್ಲಿ ಆಡಳಿತ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು, ವಿಸ್ತರಣಾಧಿಕಾರಿಗಳು, ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಭದ್ರಾವತಿ ತಾಲೂಕುಗಳ ವಾರ್ಡನ್ಗಳು ಉಪಸ್ಥಿತರಿದ್ದರು.







