ಹೆದ್ದಾರಿ ದುರಸ್ತಿಗೆ ಒತ್ತಾಯಿಸಿ ಹೊನ್ನಕಟ್ಟೆಯಲ್ಲಿ ಪ್ರತಿಭಟನೆ
ಟೋಲ್ ಸ್ಥಗಿತಗೊಳಿಸಲು ಯುವ ಕಾಂಗ್ರೆಸ್ ಆಗ್ರಹ

ಮಂಗಳೂರು, ನ.27: ರಾ.ಹೆ. 66ರಲ್ಲಿ ಹೆದ್ದಾರಿ ಪ್ರಾಧಿಕಾರದ ಕಾನೂನಿನಂತೆ ಯಾವುದೇ ಸೌಲಭ್ಯಗಳಿಲ್ಲ. ಹೆದ್ದಾರಿ ಹದಗೆಟ್ಟು ಪ್ರಾಣ ಹಾನಿ ಸಂಭವಿಸುತ್ತಿದೆ. ಹೀಗಿರುವಾಗ ಮೂರು ಕಡೆಗಳಲ್ಲಿ ಟೋಲ್ ಪಡೆಯುತ್ತಿರುವುದು ಸರಿಯಲ್ಲ. ಹಾಗಾಗಿ ತಕ್ಷಣ ಸುರತ್ಕಲ್, ಬಂಟ್ವಾಳ, ಟೋಲ್ ಕೇಂದ್ರವನ್ನು ಮುಚ್ಚಬೇಕು ಶಾಸಕ ಮೊಯ್ದಿನ್ ಬಾವಾ ಆಗ್ರಹಿಸಿದರು.
ರಾ.ಹೆ.66ರ ಹೊನ್ನಕಟ್ಟೆ, ಬೈಕಂಪಾಡಿ, ಕೂಳೂರು ಮತ್ತಿತರೆಡೆ ಹೊಂಡದಿಂದ ತುಂಬಿರುವ ಹೆದ್ದಾರಿಯನ್ನು ದುರಸ್ತಿಪಡಿಸುವಂತೆ ಆಗ್ರಹಿಸಿ ಮಂಗಳೂರು ಉತ್ತರ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವ ನೇತೃತ್ವದಲ್ಲಿ ಹೊನ್ನಕಟ್ಟೆಯಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಹೆದ್ದಾರಿಯಲ್ಲಿ 12 ಕಿ.ಮೀ ಇರುವ ಮಂಗಳೂರು ತಲುಪಲು ಒಂದೆರಡು ಗಂಟೆ ಪಡೆಯುತ್ತದೆ ಎಂದಾದರೆ ವೇಗದ ಹೆದ್ದಾರಿಗಳು ಇರುವುದು ಯಾಕೆ? ಮಳೆ ನಿಂತು ಇಷ್ಟು ದಿನವಾದರೂ ಹೊಂಡ ಮುಚ್ಚುವಲ್ಲಿ ಇಲಾಖೆ ವಿಫಲವಾಗಿದೆ. ಕೇಂದ್ರ ಸರಕಾರ ಹಾಗು ಸಂಸದರ ನಿರ್ಲಕ್ಷ ಇದರಲ್ಲಿ ಎದ್ದು ಕಾಣುತ್ತದೆ ಎಂದು ಶಾಸಕ ಮೊಯ್ದಿನ್ ಬಾವಾ ಆರೋಪಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮತ್ತು ರಾಜ್ಯ ಕಾಂಗ್ರೆಸ್ ಮಹಿಳಾ ಕಾರ್ಯದರ್ಶಿ ಪ್ರತಿಭಾ ಕುಳಾಯಿ ಮಾತನಾಡಿ ಸಂಸದ ನಳಿನ್ ಕುಮಾರ್ ಕಟೀಲ್ ನಂಬರ್ ಒನ್ ಸಂಸದ ಎಂದುಕೊಳ್ಳುತ್ತಾರೆ. ಆದರೆ ಅವರ ಕ್ಷೇತ್ರದ ಹೆದ್ದಾರಿ ದುರವಸ್ಥೆ ಗಮನಿಸಿದಾಗ ಆ ಸ್ಥಾನ ಸಿಕ್ಕಿದ ಬಗ್ಗೆ ಸಂಶಯ ಕಾಡುತ್ತದೆ. ಇನ್ನು ಮಾತನಾಡಿದರೆ ಬೆಂಕಿ ಕೊಡುತ್ತೇವೆ ಎಂದು ಹೇಳುತ್ತಾರೆ. ಇದರ ಬದಲು ರಸ್ತೆ ದುರಸ್ತಿಗೆ ಶ್ರಮ ವಹಿಸಿ ಸಾರ್ವಜನಿಕರಿಗೆ ಉಪಕಾರ ಮಾಡಿದರೆ ಮತ ಹಾಕಿದ ಮತದಾರನಿಗೂ ನೆಮ್ಮದಿಯಾಗುತ್ತದೆ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭ ಕಾಮಗಾರಿ ಪೂರ್ಣವಾಗುವವರೆಗೆ ಟೋಲ್ ರದ್ದು ಪಡಿಸಲು ಒತ್ತಾಯಿಸಿ ಯುವ ಕಾಂಗ್ರೆಸ್ ಮನವಿ ಸಲ್ಲಿಸಿತಲ್ಲದೆ ಇಲಾಖೆ ಕ್ರಮ ಕೈಗೊಳ್ಳದಿದ್ದರೆ ಟೋಲ್ ಮುಂಭಾಗ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿತು.
ಪ್ರತಿಭಟನೆಯಲ್ಲಿ ಮುಖಂಡರಾದ ಉತ್ತಮ್ ಆಳ್ವ, ಹಬೀಬ್, ಸುಹೈಲ್, ಶೊಯಿಬ್, ರವಿಶ್ರೀಯಾನ್, ಶಕುಂತಳಾ ಕಾಮತ್, ಪುರುಷೋತ್ತಮ್ ಚಿತ್ರಾಪುರ, ಕುಮಾರ್ ಮೆಂಡನ್, ಗುಲ್ಜಾರ್ ಬಾನು, ಜೈಸನ್, ಅಕ್ಬರ್ ಮುಕ್ಕ, ಪುರುಷೋತ್ತಮ್ ಮುಕ್ಕ, ಇಲ್ಯಾಸ್, ಹರೀಶ್ ಬಂಗೇರ, ರಾಜೇಶ್ ಕುಳಾಯಿ, ಸಚಿನ್ ಅಡಪ, ಅಶ್ರಫ್ ಅಡ್ಯಾರ್,ಅದ್ದು ಜಲೀಲ್, ಮಲ್ಲಿಕಾರ್ಜುನ್, ಶ್ರೀಧರ್ ಪಂಜ, ರೂಪೇಶ್ ರೈ, ವರುಣ್ ಅಂಬಟ್, ಆನಂದ್ ಅಮೀನ್, ರೆಹಮಾನ್ ಕುಂಜತ್ತಬೈಲ್, ಆಲಿ ಕೂಳೂರು ಮತ್ತಿತರರು ಉಪಸ್ಥಿತರಿದ್ದರು.
ಹೆದ್ದಾರಿ ತಡೆ ನಡೆಸಿದ ಪಕ್ಷದ ಕಾರ್ಯಕರ್ತರು ಕ್ರಿಕೆಟ್ ಆಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ಹೆದ್ದಾರಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಪ್ರತಿಭಟನೆ ನಡೆಸಲಾಯಿತು. ಹೆದ್ದಾರಿ ಇಲಾಖೆಯ ಇಂಜಿನಿಯರ್ ಅಜಿತ್ ಸ್ಥಳಕ್ಕೆ ಆಗಮಿಸಿ ರಸ್ತೆ ದುರಸ್ತಿಗೆ 8 ಕೋ.ರೂ ಬಿಡುಗಡೆಯಾಗಿ ಟೆಂಡರ್ ಆಗಿದ್ದು ಡಿ.15ರ ಒಳಗಾಗಿ ಗುತ್ತಿಗೆದಾರರು ಕಾಮಗಾರಿ ಆರಂಭಿಸಲಿದ್ದಾರೆ ಎಂದು ಭರವಸೆ ನೀಡಿದರು.







