ಮಡಿಕೇರಿ:ಅಭಿವೃದ್ಧಿಯ ನಿಖರ ಮಾಹಿತಿ ಒದಗಿಸಲು ಡಿಸಿ ಸೂಚನೆ
ಕೊಡಗು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಶೀಘ್ರ ಭೇಟಿ: ಪ್ರಗತಿ ಪರಿಶೀಲನೆ

ಮಡಿಕೇರಿ, ನ.29: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯದಲ್ಲಿಯೇ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಕೈಗೊಂಡಿರುವ ಹಲವು ಜನಪರ ಕಾರ್ಯಕ್ರಮಗಳ ಸಾಧನೆ ಕುರಿತ ಪುಸ್ತಕವನ್ನು ಜಿಲ್ಲಾಡಳಿತ ವತಿಯಿಂದ ಹೊರತರಲಾಗುತ್ತಿದ್ದು, ನಾಲ್ಕುವರೆ ವರ್ಷದ ಸಾಧನೆಯ ನಿಖರ ಮಾಹಿತಿಯನ್ನು ಒದಗಿಸುವಂತೆ ಸಂಬಂಧಪಟ್ಟ ಎಲ್ಲ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಪ್ರಸ್ತುತ ಸರಕಾರದ ಕಾರ್ಯಕ್ರಮಗಳ ಅಂಕಿ ಅಂಶಗಳ ಸಹಿತ ಮಾಹಿತಿಯನ್ನು ಎಕ್ಸೆಲ್ ಹಾಗೂ ವರ್ಡ್ ಫಾರ್ಮೆಟ್ನಲ್ಲಿ ಒದಗಿಸುವಂತೆ ನಿರ್ದೇಶನ ನೀಡಿದರು.
ಸರಕಾರದ ಕಾರ್ಯಕ್ರಮಗಳ ತಾಲೂಕುವಾರು ಮತ್ತು ಜಿಲ್ಲೆಗೆ ಸಂಬಂಧಿಸಿದಂತೆ ಅನುಬಂಧದಲ್ಲಿ ತಿಳಿಸಿರುವಂತೆ ಮಾಹಿತಿ ಒದಗಿಸಬೇಕಿದೆ. ಫಲಾನುಭವಿಗಳ ಹೆಸರು, ಸಂಖ್ಯೆ, ಮೊತ್ತ ಮತ್ತಿತರ ವಿವರವನ್ನು ಡಿ.5ರೊಳಗೆ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೈಗೊಂಡಿರುವ ಪ್ರಮುಖ ಯೋಜನಾ ಕಾರ್ಯಕ್ರಮಗಳ ಹೆಸರು, ಅನುದಾನ, ಮೊತ್ತ ವಿವರಗಳನ್ನು ಅನುಬಂಧ-3 ರಂತೆ ಒದಗಿಸಬೇಕು. ಹಾಗೆಯೇ ಛಾಯಾಚಿತ್ರ ಅಥವಾ ರೇಖಾಚಿತ್ರ ಸಹಿತ ಮಾಹಿತಿ ಒದಗಿಸುವಂತೆ ಅವರು ಹೇಳಿದರು.
ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಉದ್ಘಾಟನೆ ಅಥವಾ ಶಂಕುಸ್ಥಾಪನೆ ಇರುವ ಕಾಮಗಾರಿಗಳ ಸಂಬಂಧ ಮಾಹಿತಿ ಒದಗಿಸುವುದು. ಫಲಾನುಭವಿಗಳಿಗೆ ಸರಕಾರದ ಸವಲತ್ತುಗಳನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದು, ಜಿಲ್ಲೆ, ತಾಲೂಕುಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ನಾಲ್ಕು ವರ್ಷದ ಸರಕಾರದ ಸಾಧನೆ ಪುಸ್ತಕ ಮಾದರಿಯಲ್ಲಿ ಜಿಲ್ಲಾ ಸಾಧನೆ ಒಳಗೊಂಡ ಪುಸ್ತಕ ಪ್ರಕಟಿಸಬೇಕಾಗಿದೆ. ಆಯಾಯ ಇಲಾಖಾ ಪ್ರಗತಿಯಲ್ಲಿ ತಾಲೂಕುವಾರು ಮಾಹಿತಿ ಹಾಗೂ ಜಿಲ್ಲೆಯ ಅಂಕಿ ಅಂಶಗಳನ್ನು ಒದಗಿಸುವಂತೆ ತಿಳಿಸಿದರು.
ಉನ್ನತ ಶಿಕ್ಷಣ ವ್ಯಾಪ್ತಿಯ ಎಂಜಿನಿಯರಿಂಗ್ ಕಾಲೇಜು, ಬೃಹತ್ ನೀರಾವರಿ ಮತ್ತಿತರ ಇಲಾಖೆಗಳಿಂದ ಅಗತ್ಯ ಮಾಹಿತಿ ಪಡೆದುಕೊಳ್ಳುವಂತೆ ಸೂಚನೆ ನೀಡಿದರು.
ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಜಿಪಂ ಉಪ ಕಾರ್ಯದರ್ಶಿ ಸಿದ್ದಲಿಂಗ ಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಮಾಯಾದೇವಿ ಗಲಗಲಿ, ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ.ಸುರೇಶ್, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್, ಲೋಕೋಪಯೋಗಿ ಇಲಾಖೆ ಅಧಿಕಾರಿ ಪ್ರಭು, ಕೃಷಿ ಇಲಾಖೆ ಉಪ ನಿರ್ದೇಶಕರಾದ ರಾಜು, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಮಮ್ತಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಗೋಪಾಲಕೃಷ್ಣ, ಸೆಸ್ಕ್ ಎಇಇ ದೇವಯ್ಯ, ಕೈಗಾರಿಕೆ, ಸಣ್ಣ ನೀರಾವರಿ, ಜಿಲ್ಲಾ ಸರ್ಜನ್ ಅಬ್ದುಲ್ ಅಝೀಝ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಕಾರ್ಯಪ್ಪ, ನಾನಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.







