ಜಿಲ್ಲಾ ಮಟ್ಟದ ಯುವಜನೋತ್ಸವ : ಬೀನಾ ವೈದ್ಯ ಪದವಿ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಭಟ್ಕಳ,ನ.29: ಕುಮಟಾ ನೆಲ್ಲಿಕೇರಿ ಶಾಸಕರ ಮಾದರಿ ಹಿರಿಯ ಕನ್ನಡ ಮಾಧ್ಯಮ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ತೋರಿರುವ ಭಟ್ಕಳ ಮುರುಡೇಶ್ವರ ಬೀನಾ ವೈದ್ಯ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಕಾಲೇಜಿನ ವಿದ್ಯಾರ್ಥಿ ಸಚಿನ್ ಹೆಗಡೆ ಕರ್ನಾಟಕ ಸಂಗೀತದಲ್ಲಿ ಪ್ರಥಮ ಸ್ಥಾನ ಗಳಿಸಿದರೆ, ನಾಟಕ ತಂಡಕ್ಕೂ ಪ್ರಥಮ ಸ್ಥಾನ ಒಲಿದು ಬಂದಿದೆ. ವಿದ್ಯಾರ್ಥಿ ದಿನೇಶ ಶೆಣೈ ಕರ್ನಾಟಕ ಸಂಗೀತದಲ್ಲಿ ದ್ವಿತೀಯ ಮತ್ತು ಹಾರ್ಮೋನಿಯಂ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಗಳಿಸಿದ್ದಾನೆ. ತಬಲಾ ವಾದನದಲ್ಲಿ ನಾಗಾರ್ಜುನ ಭಟ್ ದ್ವಿತೀಯ, ಹಾರ್ಮೋನಿಯಂ ವಿಭಾಗದಲ್ಲಿ ಸಚಿನ್ ಹೆಗ್ಡೆ, ಆಶುಭಾಷಣದಲ್ಲಿ ಆಜ್ಜಾ ಅನೀಶ್ ಮನ್ನಾ ದ್ವಿತೀಯ ಸ್ಥಾನ ಪಡೆದರೆ, ನಿಖಿತಾ ಖಾರ್ವಿ ನೇತೃತ್ವದ ಜನಪದ ನೃತ್ಯ ತಂಡಕ್ಕೆ ತೃತೀಯ ಸ್ಥಾನ ಒಲಿದು ಬಂದಿದೆ.
ವಿಜೇತರಿಗೆ ಆಡಳಿತ ಮಂಡಳಿಯ ಅಧ್ಯಕ್ಷ ಮಂಕಾಳ ಎಸ್ ವೈದ್ಯ, ನಿರ್ದೇಶಕಿ ಪುಷ್ಪಲತಾ ಎಮ್.ಎಸ್, ಪ್ರಾಚಾರ್ಯ ಪ್ರಸಾದ್ ಮಹಾಲೆ, ಸಾಂಸ್ಕೃತಿಕ ಕಾರ್ಯಕ್ರಮದ ರೂವಾರಿ ಮಹೇಶ್ ಹೆಗಡೆ ಮತ್ತು ನಯೀಮ್ ಗೋರಿ ಹಾಗೂ ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.





