ಪಂಥೀಯವಾದಿಗಳ ಆರ್ಭಟದಿಂದ ಧರ್ಮಕ್ಕೆ ಧಕ್ಕೆಯಾಗದು: ವೀಣಾ ಬನ್ನಂಜೆ
ಮೂಡಬಿದ್ರೆ (ರತ್ನಾಕರವರ್ಣಿ ವೇದಿಕೆ), ಡಿ.2: ಇಂದು ಜಾತಿ, ಮತ, ಎಡ-ಬಲ ವಾದಗಳನ್ನು ಬೆಂಬಲಿಸುತ್ತಿರುವವರು ನಿಜಧರ್ಮದ ಒಳಹುಗಳನ್ನು ಅರಿತಿಲ್ಲ; ಅನುಭಾವವನ್ನು ಅನುಭವಿಸಿಲ್ಲ. ಇಂತಹವರು ಕೇವಲ ನಾಲ್ಕು ದಿನ ದಿನಪತ್ರಿಕೆಗಳ ಮುಖ್ಯ ಸುದ್ದಿಯಾಗುತ್ತಾರೆ ಅಷ್ಟೆ. ಆದರೆ ಇಂತಹವರ ಆರ್ಭಟದಿಂದ ವಿಶಾಲ ವ್ಯಾಪ್ತಿಯ ಧರ್ಮಕ್ಕೆ ಯಾವುದೇ ಧಕ್ಕೆಯೂ ಆಗುವುದಿಲ್ಲ ಎಂದು ಆಧ್ಯಾತ್ಮಿಕ ಬರಹಗಾರ್ತಿ ವೀಣಾ ಬನ್ನಂಜೆ ಹೇಳಿದರು.
ನುಡಿಸಿರಿಯಲ್ಲಿ ಇಂದು ಧಾರ್ಮಿಕ ಬಹುತ್ವ-ಸಹಬಾಳ್ವೆಯ ನೆಲೆ ವಿಚಾರಗೋಷ್ಠಿಯಲ್ಲಿ ‘ಅನುಭಾವದ ದೃಷ್ಟಿ’ಯ ಬಗ್ಗೆ ಅವರು ತಮ್ಮ ವಿಚಾರ ಮಂಡಿಸಿದರು. ನಮಗೆ ದಕ್ಕುವ ಇಂದ್ರಿಯಾತೀತ ಅನುಭವವೇ ಅನುಭಾವ. ಅನುಭವಿಸದಿದ್ದರೆ ಅನುಭಾವ ನಮ್ಮ ಸ್ಪರ್ಶಕ್ಕೂ ಬರಲಿಕ್ಕಿಲ್ಲ. ಅನುಭಾವಿ ಪ್ರತಿ ಅಣುವನ್ನೂ ಪರಿಗಣಿಸುತ್ತಾನೆ. ಅಕ್ಕಮಹಾದೇವಿ, ಬುದ್ಧನಂತಹವರು ಅನುಭಾವದ ಜೀವನ ನಡೆಸಿದರು. ಧರ್ಮದ ಶ್ರೇಷ್ಠತೆಯನ್ನು ಅವರು ಎತ್ತಿಹಿಡಿದರು. ಆದರೆ ಇಂತಹ ದೇಶದಲ್ಲಿ ಇಂದು ಮತೀಯವಾದಗಳು ಹೆಚುತ್ತಿವೆ. ಇಂತಹ ವ್ಯವಸ್ಥೆಯನ್ನು ಬದಲಾಯಿಸಬೇಕೆಂದರೆ ಯಾವುದೇ ಪರ್ಯಾಯವನ್ನು ನೀಡದ ಅನುಭಾವಿ ಮಾರ್ಗವೇ ಆಯ್ಕೆಗೆ ಸೂಕ್ತ ಎಂದವರು ಹೇಳಿದರು.
ಧರ್ಮ ಪರಂಪರೆಯನ್ನು ವಿಶ್ಲೇಷಿಸಿದ ವೀಣಾ ಬನ್ನಂಜೆ, ನಮ್ಮಲ್ಲಿ ಧಾರ್ಮಿಕಧಾರೆ, ಸಮಾನಾಂತರ ಧಾರೆ ಹಾಗೂ ಅನುಭಾವದ ಧಾರೆ ಎಂಬ ಪ್ರತ್ಯೇಕ ವಿಚಾರಗಳಿವೆ. ಶಂಕರಾಚಾರ್ಯ, ರಾಮಾನುಜರು ಹಾಗೂ ಬುದ್ಧ ಇವರೆಲ್ಲ ಪ್ರಧಾನ ಧರ್ಮಕ್ಕೆ ತಮ್ಮ ಕೊಡುಗೆಗಳನ್ನು ಕೊಟ್ಟಿದ್ದಾರೆ. ಬಸವಣ್ಣ ಇವರೆಲ್ಲರನ್ನು ಮೀರಿ ನಿಂತು ವೈದಿಕ ಧರ್ಮದ ಕಟ್ಟುನಿಟ್ಟುಗಳಿಗೆ, ಮಡಿವಂತಿಕೆಗಳಿಗೆ ವಿರುದ್ಧವಾಗಿ ಹೊಸ ಆಚರಣೆಗಳನ್ನು ಸಮಾನಾಂತರ ಧಾರೆಗೆ ನೀಡಿದರು. ನಂತರ ಬಂದ ಮಧ್ವಾಚಾರ್ಯರು ಅದಾಗಲೇ ಬಂದಿದ್ದ ಅದ್ವೈತ ಸಿದ್ಧಾಂತ ಹಾಗೂ ಬಸವಣ್ಣನ ವಿಚಾರಧಾರೆಗಳಿಗೆ ಸಂಪೂರ್ಣ ವಿರುದ್ಧವಾದ ದ್ವೈತ ಪರಂಪರೆಯನ್ನು ಪ್ರಚುರಪಡಿಸಿದರು. ಈ ಎರಡೂ ಧರ್ಮಧಾರೆಗಳಿಗಿಂತ ವಿಭಿನ್ನವಾದದ್ದು ಅನುಭಾವದ ಧಾರೆ. ಅನುಭವವನ್ನು ಪಡೆದು ಅದನ್ನು ಅಳವಡಿಸಿಕೊಳ್ಳುವುದು, ಅದರಂತೆ ನಡೆಯುವುದು ತುಂಬಾ ಕಷ್ಟ ಎಂದು ಅಭಿಪ್ರಾಯಪಟ್ಟರು.
ವಿಚಾರಗೋಷ್ಠಿಯಲ್ಲಿ ನುಡಿಸಿರಿ ಸಮ್ಮೇಳನಾಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ಡಾ.ನಾ.ದಾ. ಶೆಟ್ಟಿ ಉಪಸ್ಥಿತರಿದ್ದರು.
ನಮ್ಮಳಗಿರುವ ದೇವರನ್ನು ನಾವಿಂದು ಹುಡುಕಬೇಕಿದೆ: ಎಸ್. ಷಡಕ್ಷರಿ
ನಮ್ಮಳಗೆ ಬಂಗಾರದ ವ್ಯಕ್ತಿತ್ವವಿದೆ. ಆದರೆ ಮನುಷ್ಯ ತನ್ನ ಸಣ್ಣತನದಿಂದಾಗಿ ಮಣ್ಣಿನ ವಿಗ್ರಹವಾಗಿದ್ದಾನೆ. ನಮ್ಮ ಉನ್ನತ ನಡವಳಿಕೆಯಿಂದ ನಮ್ಮ ಒಳಗಿರುವ ಚಿನ್ನದ ವ್ಯಕ್ತಿತ್ವ ಗೋಚರಿಸುವಂತಾಗಬೇಕು ಎಂದು ಎಸ್.ಷಡಕ್ಷರಿ ಹೇಳಿದರು.
ಧಾರ್ಮಿಕ ಬಹುತ್ವ-ಸಹಬಾಳ್ವೆಯ ನೆಲೆ ವಿಚಾರಗೋಷ್ಠಿಯಲ್ಲಿ ಆರಾಧನಾ ದೃಷ್ಟಿಯ ಕುರಿತಾಗಿ ತಮ್ಮ ವಿಚಾರಗಳನ್ನು ಹಂಚಿಕೊಂಡರು. ದೇವರು ನಮ್ಮಲ್ಲೇ ಇದ್ದಾನೆ. ಈ ದೇವರನ್ನು ವಿವಿಧ ಬಗೆಯಲ್ಲಿ ತಲುಪುವ, ಆರಾಧಿಸುವ ಮಾರ್ಗವನ್ನು ನಮ್ಮ ಪರಂಪರೆ ಹೇಳಿಕೊಟ್ಟಿದೆ.ದಾಸರು, ದೈವಾರಾಧಕರು ಹಾಡಿದ ಕೀರ್ತನೆಗಳು, ರಚಿಸಿದ ಶ್ಲೋಕಗಳು ಆರಾಧನೆಗಿರುವ ಮಹತ್ವವನ್ನು ತಿಳಿಸಿಕೊಡುತತವೆ. ದೇವರು ಒಬ್ಬನೇ ಆದರೂ ಅವನಿಗೆ ನಾವು ಕೊಟ್ಟಿರುವ ಹೆಸರುಗಳು, ರೂಪಗಳು ಬೇರೆ. ನಮ್ಮ ಔನ್ನತ್ಯದಲ್ಲಿ ಅಡಗಿರುವ ಆ ದೈವತ್ವವನ್ನು ಹುಡುಕುವ, ತಲುಪುವ ಪ್ರಯತ್ನ ನಮ್ಮಿಂದಾಗಬೇಕು ಎಂದರು.







