ಗೋರಿಗಳ ಭಗ್ನಕ್ಕೆ ಯತ್ನಿಸಿದವರು, ಪ್ರಚೋದಿಸಿದವರ ವಿರುದ್ಧ ಕಠಿಣ ಕ್ರಮ: ಎಸ್ಪಿ ಅಣ್ಣಾಮಲೈ

ಚಿಕ್ಕಮಗಳೂರು, ಡಿ.4: ಬಾಬಾ ಬುಡಾನ್ ಗಿರಿಯಲ್ಲಿ ಡಿ.3ರಂದು ನಡೆದ ದತ್ತಜಯಂತಿ ವೇಳೆಯಲ್ಲಿ ದೇವಾಲಯದಿಂದ ಪ್ರತ್ಯೇಕವಾಗಿರುವ ಗೋರಿಗಳನ್ನು ಭಗ್ನಗೊಳಿಸಲು ಯತ್ನಿಸಿದವರು ಮತ್ತು ಅದಕ್ಕೆ ಪ್ರಚೋದಿಸಿದವರ ವಿರುದ್ದ ಕಠಿಣ ಕಾನೂನುಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಹೇಳಿದರು.
ಅವರು ಸೋಮವಾರ ನಗರ ಪೊಲಿಸ್ ಠಾಣೆಯಲ್ಲಿ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, “ಗೋರಿಗಳನ್ನು ಭಗ್ನಗೊಳಿಸಲು ಯತ್ನ ನಡೆಸಿರುವ ಪ್ರಕರಣವನ್ನು ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣೆಯಲ್ಲಿ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ಮುಂದೆ ಇಲಾಖೆ ತಪ್ಪಿತಸ್ಥರ ವಿರುದ್ದ ತೆಗೆದುಕೊಳ್ಳುವ ಕಠಿಣ ಕಾನೂನು ಕ್ರಮಗಳು ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ನಡೆಸುವವರಿಗೆ ಪಾಠವಾಗಲಿದೆ” ಎಂದರು.
ದತ್ತಜಯಂತಿಯಲ್ಲಿ ಭಾಗವಹಿಸಲು ವಿವಿಧ ಜಿಲ್ಲೆಗಳಿಂದ ಬರುವ ದತ್ತಭಕ್ತರಿಂದ ವಿವಿಧ ಮೌಲ್ಯದ ಬಾಂಡ್ ಗಳನ್ನು ಪಡೆಯಲಾಗಿದೆ. ಗೋರಿ ಭಗ್ನ ಹಾಗೂ ನಿಷೇಧಿತ ಸ್ಥಳದಲ್ಲಿ ಧ್ವಜವನ್ನು ಹಾಕಲು ಪ್ರಯತ್ನ ನಡೆಸಿ ಶಾಂತಿಭಂಗಕ್ಕೆ ಮುಂದಾದವರ ಬಗ್ಗೆ ಡ್ರೋಣ್ ಕ್ಯಾಮಾರದಲ್ಲಿ ಚಿತ್ರೀಕರಣಗೊಂಡ ಛಾಯಚಿತ್ರಗಳು ಮತ್ತು ಮಾಧ್ಯಮಗಳಲ್ಲಿ ಪ್ರಕಟಗೊಂಡ ಪೋಟೋಗಳನ್ನು ಆಧರಿಸಿ ಆರೋಪಿಗಳ ಪತ್ತೆ ಕಾರ್ಯಕ್ಕೆ ಪೋಲೀಸರು ಮುಂದಾಗಿದ್ದಾರೆ. ಬಾಂಡ್ ನೀಡಿರುವವರಲ್ಲಿ ಯಾರಾದರೂ ತಪ್ಪಿತಸ್ಥರೆಂದು ಕಂಡು ಬಂದರೆ ಅವರ ಮೇಲೆ ಕ್ರಮಕೈಗೊಳ್ಳುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು.
ಗುಹಾಂತರ ದೇವಾಲಯದ ಆವರಣದಿಂದ ಅನತಿ ದೂರದಲ್ಲಿರುವ ಬಾಂಬೆ ಗೋರಿಗಳೆಂದು ಕರೆಯಲ್ಪಡುವ ಗೋರಿಗಳಿಗೆ ಸೂಕ್ತ ಭದ್ರತೆ ನೀಡುವಲ್ಲಿ ಪೋಲೀಸ್ ಇಲಾಖೆ ವಿಫಲವಾಗಿರುವುದನ್ನು ಒಪ್ಪಿಕೊಂಡ ಪೋಲೀಸ್ ವರಿಷ್ಠಾಧಿಕಾರಿಗಳು ಮುಂಬರುವ ದಿನಗಳಲ್ಲಿ ಈ ಗೋರಿಗಳಿಗೂ ಸಹ ಭದ್ರವಾದ ಬೇಲಿ ನಿರ್ಮಿಸಿ ಭದ್ರತೆಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಲಾಗುವುದು. ಈ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪವೆಸಗಿದವರ ವಿರುದ್ದವೂ ಕಾನೂನುಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ವಿವಿಧ ಪ್ರಕರಣಗಳಲ್ಲಿ 32 ಆರೋಪಿಗಳು ವಶಕ್ಕೆ-3 ವಾಹನಗಳ ಜಪ್ತಿ
ಉಪ್ಪಳ್ಳಿ ಮಾರ್ಗದಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಅಡ್ಡಗಟ್ಟಿ ಹಲ್ಲೆ ನಡೆಸಿದ ಪ್ರಕರಣ, ವಾಜೀದ್ ಎಂಬ ಆಟೋ ಚಾಲಕನ ಮೇಲೆ ಹಲ್ಲೆ, ಪೆಟ್ರೋಲ್ ಬಾಂಬ್ ಹಾಗೂ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ಕಲ್ಲುತೂರಾಟ ನಡೆಸುತ್ತಿದ್ದವರು ಮತ್ತು ವಾಹನದಲ್ಲಿ ಬಂದು ಹಲ್ಲೆ ನಡೆಸಲು ಮುಂದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 32 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. 3 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಉಪ್ಪಳ್ಳಿ ಮಾರ್ಗದಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ತಡರಾತ್ರಿ 3.30ರ ವೇಳೆಯಲ್ಲಿ 3 ಮಂದಿಯನ್ನು ಬಂಧಿಸಲಾಗಿದೆ ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆ. ಕೈಮರದಿಂದ ಗಿರಿಗೆ ತೆರಳುತ್ತಿದ್ದ ಆಟೋಚಾಲಕ ವಾಜೀದ್ ಎಂಬುವವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ವಾಹನವನ್ನು ಜಪ್ತಿ ಮಾಡಿ 15 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಆರೋಪಿಗಳಲ್ಲಿ 7/8 ಮಂದಿ ಬೇರೆ ಜಿಲ್ಲೆಯವರಾಗಿದ್ದರೆ, ಉಳಿದವರೆಲ್ಲಾ ಇಲ್ಲಿನವರಾಗಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿಯಾಗಿದೆ. ಇಂದು ಬೆಳಗ್ಗೆ ಹಿಂದೂ ಮತ್ತು ಮುಸ್ಲಿಂ ಮುಖಂಡರೊಂದಿಗೆ ಘಟನೆ ಸಂಬಂಧ ಸಮಾಲೋಚನೆ ನಡೆಸಿದ್ದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಹೆಚ್ಚುವರಿ ಪೋಲೀಸ್ ಅಧೀಕ್ಷಕ ಜಗದೀಶ್ ಉಪಸ್ಥಿತರಿದ್ದರು.







