ರೈಲಿನಲ್ಲಿ 4ಕೆ.ಜಿ. ಚಿನ್ನಾಭರಣ ದರೋಡೆ ಪ್ರಕರಣ: ಏಳು ಮಂದಿ ಸೆರೆ
40.25 ಲಕ್ಷ ರೂ. ಮೌಲ್ಯದ ಚಿನ್ನ, ಪಿಸ್ತೂಲ್, ಸೊತ್ತು ವಶ

ಉಡುಪಿ, ಡಿ.5: ಮುಂಬೈಯಿಂದ ಕೇರಳದ ತ್ರಿವೆಂಡ್ರಮ್ಗೆ ನೇತ್ರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತಿದ್ದ ಮುಂಬೈ ಜಿ.ಎಂ.ಗೋಲ್ಡ್ ಕಂಪೆನಿಯ ಸೇಲ್ಸ್ಮೆನ್ ರಾಜೇಂದ್ರ ಸಿಂಗ್ ಶಕ್ತವಕ್ತ್ಗೆ ಪಿಸ್ತೂಲ್ ತೋರಿಸಿ, ಚೂರಿಯಿಂದ ಇರಿದು 1.28 ಕೋಟಿ ರೂ. ಮೌಲ್ಯದ 4.112 ಕೆ.ಜಿ. ತೂಕದ ಚಿನ್ನಾಭರಣ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಕಾಪು ಪೊಲೀಸರು ಯಶಸ್ವಿಯಾಗಿದ್ದಾರೆ.
ಉಡುಪಿಯ ಎಸ್ಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಎಂ.ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದರು. ಸೆ.17ರಂದು ಮಧ್ಯಾಹ್ನ ಮುಂಬೈಯಿಂದ ಚಿನ್ನಾಭರಣಗಳಿರುವ ಸೂಟ್ ಕೇಸ್ನೊಂದಿಗೆ ಹೊರಟಿದ್ದ ರಾಜೇಂದ್ರ ಸಿಂಗ್ರನ್ನು ಸೆ.18ರಂದು ಬೆಳಗ್ಗೆ 6:35ರ ಸುಮಾರಿಗೆ ಸುರತ್ಕಲ್ ಸಮೀಪ ದರೋಡೆ ಮಾಡಿರುವ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಡಿಕೇರಿ ಮೂಲದ ಪ್ರಸ್ತುತ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಮಿಥುನ್ ವಾಣಿಯನ್(31), ಬಿಹಾರ ರಾಜ್ಯದ ಗಯಾ ಜಿಲ್ಲೆಯ ಪಿಂಟೂ ಅರ್ಜುನ್ ಚೌಧರಿ(32), ರಾಜಸ್ಥಾನದ ಉದಯಪುರ ಜಿಲ್ಲೆಯ ಯೋಗೀಶ್ವರ ಸಿಂಗ್ ರಾವ್(24) ಮತ್ತು ಪ್ರಭುಲಾಲ್ ಗುರ್ಜಾರ್(30), ಕೇರಳ ಕಾಸರಗೋಡು ಉದುಮದ ಮುಖ್ತಾರ್ ಇಬ್ರಾಹಿಂ(24), ಕಾಸರಗೋಡು ಚೆಮ್ಮನಾಡುವಿನ ರಿಯಾಝ್ ಕೆ.(30), ಕೇರಳ ತ್ರಿಶೂರಿನ ಪಿ.ಕೆ. ಮುರುಗನ್(49) ಬಂಧಿತ ಆರೋಪಿಗಳು.
ಬಂಧಿತರಿಂದ 31,80,000 ರೂ. ಮೌಲ್ಯದ 1ಕೆಜಿ 60.202ಗ್ರಾಂ ತೂಕದ ಚಿನ್ನಾಭರಣಗಳು, ದರೋಡೆ ಸಮಯ ಉಪಯೋಗಿಸಿದ್ದ ಒಂದು ಕಂಟ್ರಿ ರಿವಾಲ್ವರ್, 2 ಜೀವಂತ ಗುಂಡುಗಳು, 10,000 ರೂ. ಮೌಲ್ಯದ ಚಿನ್ನವನ್ನು ಕರಗಿಸುವ ಯಂತ್ರ, ಒಂದು ಹುಂಡೈ ಕಂಪೆನಿಯ ಐ-20 ಕಾರು, 6 ಮೊಬೈಲ್, ಒಂದು ಚಾಕು, 3,720 ರೂ. ನಗದು ಸಹಿತ ಒಟ್ಟು 40,25,000 ರೂ. ಮೌಲ್ಯದ ಸೊತ್ತುಳನ್ನು ವಶಪಡಿಸಿಕೊಳ್ಳಲಾಗಿದೆ.
ಮಿಥುನ್ ಮತ್ತು ಪಿಂಟೂನನ್ನು ನ.21ರಂದು ಉಳ್ಳಾಲ ರೈಲ್ವೆ ನಿಲ್ದಾಣದಲ್ಲಿ ಯೋಗೀಶ್ವರ ಸಿಂಗ್ ಮತ್ತು ಪ್ರಭುಲಾಲ್ನನ್ನು ಡಿ.3ರಂದು ಮುಂಬೈಯ ಗಿರ್ಗಾಂನಲ್ಲಿ, ಮುಖ್ತಾರ್ ಮತ್ತು ರಿಯಾಝ್ನನ್ನು ನ.17ರಂದು ಮಂಗಳೂರಿನ ಪಂಪ್ವೆಲ್ ಬಳಿ, ಮುರುಗನ್ನನ್ನು ನ.23ರಂದು ಕೇರಳ ತ್ರಿಶೂರ್ನಲ್ಲಿ ಬಂಧಿಸಲಾಗಿದೆ.
ಪೊಲೀಸ್ ತಂಡ ಸಂಶಯಾಸ್ಪದ ವ್ಯಕ್ತಿಗಳು, ರೈಲಿನಲ್ಲಿ ಸೆ.17ರಂದು ಪ್ರಯಾಣಿಸಿದ ಪ್ರಯಾಣಿಕರ ಮಾಹಿತಿ, ಮುಂಬೈಯಿಂದ ಮಂಗಳೂರುವರೆಗಿನ ರೈಲು ನಿಲ್ದಾಣಗಳ ಸಿ.ಸಿ.ಕ್ಯಾಮರಾ ಪೂಟೇಜ್ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಅವರ ಶೋಧ ಕಾರ್ಯ ಮುಂದುವರಿದಿದೆ ಎಂದು ಎಸ್ಪಿ ತಿಳಿಸಿದರು.
ಸೇಡಿಗಾಗಿ ದರೋಡೆ: 4-5ವರ್ಷಗಳ ಹಿಂದೆ ಗಣೇಶ್ ಮುತಾಲಿಯಾ ಎಂಬವರ ಜಿ.ಎಂ.ಗೋಲ್ಡ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಯೋಗೀಶ್ವರ ಸಿಂಗ್ ರಾವ್ನನ್ನು ಕಂಪೆನಿಗೆ ಮೋಸ ಮಾಡಿದ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕಲಾಗಿತ್ತು. ಈತ ರಾಜಾಸ್ಥಾನದ ಮಾವಲಿ ಮತ್ತು ರೈಲ್ಮಾರ್ಗ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಪಾಲಾಗಿದ್ದನು. ಆಗ ಜೈಲಿನಲ್ಲಿ ಪರಿಚಯವಾದ ದೇವರಾಜ್ ಠಾಕೂರು ಎಂಬಾತ ನೊಂದಿಗೆ ಜಿ.ಎಂ.ಗೋಲ್ಡ್ ಕಂಪೆನಿ ವಿರುದ್ಧ ಸೇಡು ತೀರಿಸಿಕೊಳ್ಳುವ ವಿಚಾರ ವನ್ನು ಯೋಗೀಶ್ವರ್ ಹೇಳಿಕೊಳ್ಳುತ್ತಾನೆ. 2017ರ ಮಾರ್ಚ್ ತಿಂಗಳಲ್ಲಿ ಜೈಲಿ ನಿಂದ ಬಿಡುಗಡೆಗೊಂಡು ಮುಂಬೈಗೆ ಬಂದ ಯೋಗೀಶ್ವರ್ ಬಳಿ ಜಿ.ಎಂ. ಗೋಲ್ಡ್ ಉದ್ಯೋಗಿ ಪ್ರಭುಲಾಲ್ 10 ಲಕ್ಷ ರೂ. ಹಣ ಕೇಳುತ್ತಾನೆ. ಅದಕ್ಕೆ ಯೋಗೇಶ್ವರ್ ನನಗೆ ಕಂಪೆನಿಯ ಚಿನ್ನಾಭರಣ ಸಾಗಿಸುವ ಮಾಹಿತಿಯನ್ನು ನೀಡಿದರೆ ಸಹಾಯ ಮಾಡುವುದಾಗಿ ತಿಳಿಸುತ್ತಾನೆ. ಅದರಂತೆ ಯೋಗೀಶ್ವರ್ ಜೈಲಿನಲ್ಲಿರುವ ದೇವರಾಜ್ಗೆ ತಿಳಿಸಿ ಚಿನ್ನಾಭರಣ ದರೋಡೆಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾನೆ.
ದೇವರಾಜ್ ಈ ಬಗ್ಗೆ ಮುಂಬೈಯ ಜೈಲು ಸ್ನೇಹಿತ ಮಿಥುನ್ಗೆ ಸೂಚಿಸುತ್ತಾನೆ. ಹಾಗೆ ಮುಂಬೈಯ ಪನ್ವೇಲ್ನ ಸಹಾರಾ ಲಾಡ್ಜ್ನಲ್ಲಿ ಯೋಗೇಶ್ವರ ಮತ್ತು ಮಿಥುನ್ ಸೆ.11ರಿಂದ 17ರವರೆಗೆ ಉಳಿದುಕೊಂಡು ದರೋಡೆ ಯೋಜನೆ ರೂಪಿಸುತ್ತಾರೆ. ಇದಕ್ಕಾಗಿ ಇವರು ಪಿಂಟೂ, ಮುಖ್ತಾರ್, ರಿಯಾಝ್ ಸಹಾಯ ಪಡೆದುಕೊಳ್ಳುತ್ತಾರೆ.
ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಜಿ.ಎಂ. ಗೋಲ್ಡ್ ನ ಸೋಹನ್ ಸಿಂಗ್ ದೆಹಲಿಗೆ ರೈಲಿನಲ್ಲಿ ಚಿನ್ನ ಸಾಗಾಟ ಮಾಡುತ್ತಿರುವಾಗ ಮಾಹಿತಿ ಕೊರತೆಯಿಂದ ಇವರ ದರೋಡೆ ಯೋಜನೆ ವಿಫಲವಾಗುತ್ತದೆ. ಒಂದು ವಾರದ ನಂತರ ರಾಜೇಂದ್ರ ಸಿಂಗ್ ತಿರುವನಂತಪುರಕ್ಕೆ ಹೋಗುವ ರೈಲು ಬದಲಾದ ಕಾರಣ ಆಗಲೂ ಇವರಿಗೆ ಕೃತ್ಯ ನಡೆಸಲು ಅಸಾಧ್ಯವಾಗುತ್ತದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಮೂರನೆ ಯತ್ನ ಯಶಸ್ವಿ: ಸೆ.17ರಂದು ಮುಂಬೈ -ತಿರುವನಂತಪುರ ನೇತ್ರಾವತಿ ರೈಲಿನಲ್ಲಿ ರಾಜೇಂದ್ರ ಸಿಂಗ್ ಶಕ್ತವಕ್ತ್ ಪ್ರಯಾಣಿಸುತ್ತಿರುವ ಬಗ್ಗೆ ಪ್ರಭುಲಾಲ್ ನೀಡಿದ ಮಾಹಿತಿಯಂತೆ ಮಿಥುನ್, ಪಿಂಟೂ, ಯೋಗಿಶ್ವರ್ ಪನ್ವೇಲ್ ರೈಲ್ವೆ ನಿಲ್ದಾಣ ಅದೇ ರೈಲಿಗೆ ಹತ್ತಿ ಪ್ರಯಾಣಿಸುತ್ತಾರೆ. ಮುಂದೆ ಕುಂದಾಪುರದಲ್ಲಿ ಮುಖ್ತಾರ್ ಮತ್ತು ರಿಯಾಜ್ ಇವರೊಂದಿಗೆ ಸೇರಿಕೊಳ್ಳುತ್ತಾರೆ. ಸುರತ್ಕಲ್ ರೈಲ್ವೆ ನಿಲ್ದಾಣ ಸಮೀಪಿಸುತ್ತಿದ್ದಂತೆ ರಾಜೇಂದ್ರ ಸಿಂಗ್ನನ್ನು ದರೋಡೆ ಮಾಡಿದ ಆರೋಪಿಗಳು ಸುರತ್ಕಲ್ ನಿಂದ ಟ್ಯಾಕ್ಸಿ ಮೂಲಕ ಸುಳ್ಯಕ್ಕೆ ಹೋಗುತ್ತಾರೆ.
ಅಲ್ಲಿ ಮುಖ್ತಾರ್ ಮತ್ತು ರಿಯಾಜ್ ತಮ್ಮ ಪಾಲಿನ ಚಿನ್ನದ ಬಳೆಗಳನ್ನು ಪಡೆದು ಕಾಸರಗೋಡಿಗೆ ವಾಪಾಸ್ ಹೋಗುತ್ತಾರೆ. ಬಳಿಕ ಮಿಥುನ್, ಪಿಂಟೂ, ಯೋಗೀಶ್ವರ ಮೈಸೂರಿಗೆ ಹೋಗಿ ಅಲ್ಲಿಂದ ಮುಂಬೈಗೆ ಹೋಗಿ ಸೆ.19ರಂದು ಪನ್ವೇಲ್ನ ಸಹರಾ ಲಾಡ್ಜ್ ನಲ್ಲಿ ದೇವರಾಜ್ ಠಾಕೂರ್ನ ಪಾಲು ಸೇರಿ 4 ಪಾಲುಗಳಾಗಿ ಚಿನ್ನವನ್ನು ಹಂಚಿಕೊಳ್ಳುತ್ತಾರೆ. ನಂತರ ಮಿಥುನ್ ಮತ್ತು ಯೋಗೀಶ್ವರ್ ಚಿನ್ನ ಕರಗಿಸುವ ಯಂತ್ರ ಖರೀದಿಸಿ, ಅದರಿಂದ ಚಿನ್ನದ ಗಟ್ಟಿ ಗಳು ಮಾಡಿ ಮಾರಾಟ ಮಾಡಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ.
ಮಿಥುನ್ ಅಂತರ್ರಾಜ್ಯ ದರೋಡೆ, ಸುಲಿಗೆ ಪ್ರಕರಣದ ಆರೋಪಿ ಯಾಗಿದ್ದು, ಈತನ ವಿರುದ್ಧ ಮುಂಬೈಯ ಬೊರಿವಿಲಿ, ದಹಿಸರ್, ಥಾಣಾ, ರಾಜಾಸ್ಥಾನದ ಅಮೇಟ್ನಲ್ಲಿ ಮನೆ ದರೋಡೆ ಪ್ರಕರಣ ದಾಖಲಾಗಿವೆ. ಸದ್ಯ ಈತ ‘ವಾಂಟೆಡ್’ ಆರೋಪಿ. ಅಂತರ್ ರಾಜ್ಯ ದರೋಡೆ, ಸುಲಿಗೆ ಪ್ರಕರಣದ ಆರೋಪಿಯಾಗಿರುವ ಪಿಂಟೂ ವಿರುದ್ಧ ಮುಂಬೈಯ ಬೊರಿವಿಲಿ, ದಹಿಸರ್, ಥಾಣಾಗಳಲ್ಲಿ ಚಿನ್ನದ ಅಂಗಡಿ ದರೋಡೆ ಪ್ರಕರಣಗಳು ದಾಖಲಾಗಿವೆ.
ಯೋಗೀಶ್ವರ ಸಿಂಗ್ ಎರಡು ಕೊಲೆ ಪ್ರಕರಣದ ಆರೋಪಿ. ಮುಖ್ತಾರ್ ಮತ್ತು ರಿಯಾಝ್ ಕೇರಳ ರಾಜ್ಯದ ವಿವಿಧ ಠಾಣೆಗಳಲ್ಲಿ ಗಲಾಟೆ, ದೊಂಬಿ ಪ್ರಕರಣಗಳ ಆರೋಪಿಗಳಾಗಿದ್ದಾರೆ. ಮುಖ್ತಾರ್ ಹಾಗೂ ರಿಯಾಝ್ನಿಂದ ಚಿನ್ನ ಖರೀದಿಸಿದ್ದ ಪಿ.ಕೆ.ಮುರುಗನ್ ಕಳವು ಮಾಲುಗಳನ್ನು ಖರೀದಿಸುವ ದಂಧೆಯ ಆರೋಪಿಯಾಗಿದ್ದು, ಈತನ ವಿರುದ್ಧ ಕೇರಳ ರಾಜ್ಯದಲ್ಲಿ 55 ಪ್ರಕರಣಗಳು ದಾಖಲಾಗಿವೆ. ಈತ ಚಿನ್ನವನ್ನು ತ್ರಿಶೂರ್ನ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದು ಆತನ ಪತ್ತೆ ಕಾರ್ಯ ಮುಂದುವರೆದಿದೆ. ದರೋಡೆ ಕೃತ್ಯಕ್ಕೆ ಮಾಹಿತಿ ನೀಡಿದ ಪ್ರಭುಲಾಲ್ ಮೊದಲು ಜಿ.ಎಂ.ಗೋಲ್ಡ್ ನಲ್ಲಿ ಈಗ ಜ್ಯುವೆಲ್ಲರಿಯೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದನು ಎಂದು ಎಸ್ಪಿ ಡಾ.ಸಂಜೀವ ಎಂ.ಪಾಟೀಲ್ ತಿಳಿಸಿದರು.
ಪೊಲೀಸ್ ತಂಡಕ್ಕೆ 1ಲಕ್ಷ ರೂ. ಬಹುಮಾನ
ಈ ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ ಮಂಗಳೂರು ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಒಂದು ಲಕ್ಷ ರೂ. ನಗದು ಬಹುಮಾನ ಘೋಷಿಸಿರುವುದಾಗಿ ಎಸ್ಪಿ ಡಾ.ಸಂಜೀವ ಎಂ.ಪಾಟೀಲ್ ತಿಳಿಸಿದರು.
ಈ ಕಾರ್ಯಾಚರಣೆಯನ್ನು ಐಜಿಪಿ ಹೇಮಂತ್ ನಿಂಬಾಳ್ಕರ್, ಎಸ್ಪಿ ಡಾ. ಸಂಜೀವ ಪಾಟೀಲ್ ಮತ್ತು ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ನಿರ್ದೇಶನದಂತೆ ಕಾರ್ಕಳ ಎಎಸ್ಪಿ ರಿಷಿಕೇಷ್ ಸೋನವಣೆ ಸೂಚನೆಯಂತೆ ಕಾಪು ವೃತ್ತ ನಿರೀಕ್ಷಕ ವಿ.ಎಸ್.ಹಾಲಮೂರ್ತಿ ರಾವ್, ಪಡುಬಿದ್ರೆ ಎಸ್ಸೈ ಸತೀಶ್, ಸಿಬ್ಬಂದಿಗಳಾದ ಸುಧಾಕರ್, ರಾಜೇಶ್, ಪವ್ರೀಣ್ ಕುಮಾರ್, ನಾರಾಯಣ, ಉಮೇಶ್, ಉಡುಪಿ ಡಿಸಿಐಬಿ ಘಟಕದ ಸಿಬ್ಬಂದಿ ಗಳಾದ ರವಿಚಂದ್ರ, ರಾಘವೇಂದ್ರ, ಶಿವಾನಂದ ಹಾಗೂ ಕಾಪು ವೃತ್ತ ಕಚೇರಿಯ ರವಿ ಕುಮಾರ್, ಸಂದೀಪ್ ಶೆಟ್ಟಿ, ಶರಣಪ್ಪ, ಪಡುಬಿದ್ರೆ ಠಾಣೆಯ ಹರೀಶ್ ಬಾಬು ಮತ್ತು ಚಾಲಕರಾದ ರಾಘವೇಂದ್ರ, ಜಗದೀಶ, ಖಾಲಿದ್, ಜಿಲ್ಲಾ ಪೊಲೀಸ್ ಕಛೇರಿಯ ಶಿವಾ ನಂದ, ದಿನೇಶ್ ಪಾಲ್ಗೊಂಡಿದ್ದರು.
ರಾಜಸ್ಥಾನದ ಉದಯಪುರ ಐಜಿಪಿ ಆನಂದ ಶ್ರೀವಾಸ್ತವ್ ಹಾಗೂ ಪೊಲೀಸ್ ಅಧಿಕಾರಿಗಳು ಹಾಗೂ ಮುಂಬೈ ಝವೇರಿ ಬಜಾರ್ನ (ಉದಯಪುರ) ಎಲ್.ಟಿ.ಮಾರ್ಗ್ ಪೊಲೀಸ್ ಠಾಣಾ ಅಧಿಕಾರಿಗಳು ಸಹಕರಿಸಿದ್ದರು.







