ರೋಗ ಪೀಡಿತ ಬಾಲಕನ ಚಿಕಿತ್ಸೆಗೆ ನೆರವಾಗುವಿರಾ...?

ಕಡಬ, ಡಿ.5: ಶಾಲೆಗೆ ಹೋಗಿ ಶಿಕ್ಷಣ ಕಲಿತು ಉನ್ನತ ಮಟ್ಟಕ್ಕೇರಬೇಕಿದ್ದ ಬಾಲಕನೋರ್ವ ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ ಇದೀಗ ಆಸ್ಪತ್ರೆಯಲ್ಲಿ ದಿನ ದೂಡುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾನಿಗಳ ಸಹಾಯಹಸ್ತ ಬೇಕಾಗಿದೆ.
ಪುತ್ತೂರು ತಾಲೂಕಿನ ಬಂಟ್ರ ಗ್ರಾಮದ ಕಂಪ ನಿವಾಸಿ ಸುರೇಶ್ ಗೌಡ ಹಾಗೂ ಲಲಿತಾ ದಂಪತಿಯ ಪುತ್ರ ಮರ್ಧಾಳ ಸೈಂಟ್ ಮೇರೀಸ್ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ರಾಜೇಶ್ ಕ್ಯಾನ್ಸರ್ ರೋಗಕ್ಕೀಡಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
2014 ರಲ್ಲಿ ಮೈ ನೋವಿನ ಕಾರಣಕ್ಕೆ ಕಡಬ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿ ನೋವು ಉಲ್ಬಣಗೊಂಡಾಗ ಪುತ್ತೂರಿನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು. ಆ ಸಂದರ್ಭದಲ್ಲಿ ರಕ್ತ ಪರೀಕ್ಷೆಯ ವರದಿ ನೋಡಿ ರಾಜೇಶನ ಕುಟುಂಬಸ್ಥರ ಜಂಘಾಬಲವೇ ಕುಸಿದು ಹೋಗಿತ್ತು. ವರದಿಯಲ್ಲಿ ರಕ್ತದ ಕ್ಯಾನ್ಸರ್ ಇದೆಯೆಂದು ತಿಳಿದ ಕ್ಷಣದಿಂದ ಎರಡೂವರೆ ವರ್ಷದ ಚಿಕಿತ್ಸೆಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ನೀಡಿದ್ದು, ರಾಜೇಶ ಗುಣಮುಖನಾಗಿದ್ದ. ಆರು ತಿಂಗಳ ನಂತರ ಪುನಃ ಕ್ಷೀಣಿಸತೊಡಗಿರುವುದನ್ನು ಕಂಡು ಪರೀಕ್ಷಿಸಿದಾಗ ಬ್ಲಡ್ ಕ್ಯಾನ್ಸರ್ ಎರಡನೇ ಬಾರಿಗೆ ಆವರಿಸಿರುವುದು ಗೊತ್ತಾಗಿದೆ. ಎಲ್ಲಾ ಮಕ್ಕಳಂತೆ ಆಟವಾಡಿಕೊಂಡು ಬಾಳಿ ಬದುಕಬೇಕಾಗಿದ್ದ ಎಳೆಯ ವಯಸ್ಸಿನ ಬಾಲಕ ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ ಇದೀಗ ಹಾಸಿಗೆ ಹಿಡಿಯುವಂತಾಗಿದೆ.
ತಂದೆ - ತಾಯಿ ದಿನಗೂಲಿ ಮಾಡಿ ಜೀವಿಸುತ್ತಿರುವುದರ ಮಧ್ಯೆಯೇ ಈತನ ಆರೈಕೆಯಲ್ಲಿ ತೊಡಗಿರುವುದರಿಂದ ಕಳೆದ ಮೂರು ವರ್ಷಗಳಿಂದ ಸರಿಯಾಗಿ ಕೆಲಸಕ್ಕೂ ಹೋಗದೆ ಪಡಬಾರದ ಕಷ್ಟ ಪಡುವಂತಾಗಿದೆ. ಈತನ ಚಿಕಿತ್ಸೆಗೆ ಅಪಾರ ಹಣದ ಅವಶ್ಯಕತೆಯಿದ್ದು, ಇದೀಗ ದಾನಿಗಳ ಸಹಾಯವನ್ನು ಯಾಚಿಸುತ್ತಿದ್ದಾರೆ. ಈತನಿಗೆ ಸಹಾಯ ಮಾಡಲಿಚ್ಛಿಸುವವರು ರಾಜೇಶ್, ಅಕೌಂಟ್ ಸಂಖ್ಯೆ: 155001111000161 VIJB0001550, ಐಎಫ್ಎಸ್ಸಿ ಕೋಡ್: ವಿಜಯಾ ಬ್ಯಾಂಕ್, ಮರ್ಧಾಳ ಶಾಖೆಗೆ ಹಣವನ್ನು ಜಮಾ ಮಾಡಬಹುದಾಗಿದೆ. ಅಥವಾ 9741882332 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.







