ಗುಜರಾತ್ ಚುನಾವಣೆ ಬಳಿಕ ರಾಷ್ಟ್ರೀಯ ಪಕ್ಷಗಳಲ್ಲಿ ಭಾರಿ ಬದಲಾವಣೆ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಡಿ.6: ಗುಜರಾತ್ ಚುನಾವಣೆ ಫಲಿತಾಂಶದ ನಂತರ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಆನಂತರ, ರಾಷ್ಟ್ರೀಯ ಪಕ್ಷಗಳಿಂದ ಹಲವರು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬುಧವಾರ ನಗರದ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿಕೊಂಡಿದ್ದೇವೆ. 105 ಕ್ಷೇತ್ರಗಳ ಪೈಕಿ 70 ರಿಂದ 80 ಸ್ಥಾನಗಳಲ್ಲಿ ಗೆಲ್ಲಲೇಬೇಕು. 20-30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವೆ ಪೈಪೋಟಿ ಇದೆ. ಅಂತಹ ಕಡೆ ಆಕಾಂಕ್ಷಿಗಳ ನಡುವೆ ಸೌಹಾರ್ದತೆ ಮೂಡಿಸಬೇಕು ಎಂದರು.
ಕಳೆದ ಬಾರಿ ಆದ ತಪ್ಪುಗಳು ಮುಂದಿನ ಚುನಾವಣೆಯಲ್ಲಿ ಮರುಕಳಿಸಬಾರದು. ಹಾಗಾಗಿ ಎ, ಬಿ, ಸಿ ಕ್ಯಾಟಗರಿ ಅಂತ ಮಾಡಿಕೊಂಡಿದ್ದೇವೆ. ಈ ಬಾರಿ ನಾವು ಕಷ್ಟಪಡದೆ ಇದ್ದರೂ ಅರವತ್ತರಿಂದ ಎಪ್ಪತ್ತು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಆದರೆ, ಸರಕಾರ ರಚನೆಗೆ ಬೇಕಾದ ಸಂಖ್ಯೆ ತಲುಪುವುದು ನಮ್ಮ ಗುರಿ. 113 ಸ್ಥಾನಗಳಲ್ಲಿ ಗೆದ್ದರಷ್ಟೆ ರಾಜ್ಯಪಾಲರು ನಮಗೆ ಅವಕಾಶ ನೀಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.
ಬೇರೆ ಪಕ್ಷದ ಬಾಗಿಲು ತಟ್ಟಲು ನಮಗೆ ಇಷ್ಟ ಇಲ್ಲ. ಸಮ್ಮಿಶ್ರ ಸರಕಾರ ಬಂದರೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿನ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಕಷ್ಟ. ಕಳೆದ ಹತ್ತು ವರ್ಷಗಳಲ್ಲಿ ಎರಡು ಸಾರ್ವತ್ರಿಕ ಚುನಾವಣೆ ಎದುರಿಸಿದ್ದೇನೆ. 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಅವರು ತಿಳಿಸಿದರು. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ದುರ್ಬಲವಾಗಿರುವುದು ನಿಜ. ಆದರೆ, ಹಳೆ ಮೈಸೂರು ಭಾಗದಲ್ಲಿ ಗರಿಷ್ಠ ಸೀಟುಗಳನ್ನು ಗೆಲ್ಲುತ್ತೇವೆ. ಹೈದರಾಬಾದ್- ಕರ್ನಾಟಕದಲ್ಲಿ ಪಕ್ಷಕ್ಕೆ ಉತ್ತಮ ವಾತಾವರಣವಿದೆ ಎಂದು ಕುಮಾರಸ್ವಾಮಿ ಹೇಳಿದರು.
ಹಾವೇರಿ, ಗದಗ ಸೇರಿ ಮುಂಬೈ ಕರ್ನಾಟಕ ಭಾಗದಲ್ಲಿ ಸಾಕಷ್ಟು ದುರ್ಬಲವಿದೆ. ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ಹಾಕುತ್ತೇವೆ. ಆಪರೇಷನ್ ಕಮಲದಲ್ಲಿ ಸಿದ್ದರಾಮಯ್ಯ ಪಾತ್ರವಿರುವುದನ್ನು ಪರೋಕ್ಷವಾಗಿ ಅವರೆ ಒಪ್ಪಿಕೊಂಡಂತಾಗಿದೆ. ಅದೆಲ್ಲ ಹತ್ತು ವರ್ಷದ ಹಿಂದೆ ನಡೆದಿದೆ ಅನ್ನೋದು ಗೊತ್ತಿದೆ. ಬಿಜೆಪಿಯವರು ಇದನ್ನು ಬಹಿರಂಗ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಅಂಕಪಟ್ಟಿ ಹಗರಣ: ಮೈಸೂರು ವಿಶ್ವವಿದ್ಯಾಲಯಗಳಲ್ಲಿ ನಡೆದಿದೆ ಎನ್ನಲಾದ ಅಂಕಪಟ್ಟಿಗಳ ಹಗರಣ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಸರಕಾರದಲ್ಲಿ ಎಲ್ಲವೂ ನಡೆಯುತ್ತದೆ. ಹೊರನೋಟಕ್ಕೆ ಮಾತ್ರ ನಾವು ಒಳ್ಳೆಯವರು ಅಂತ ತೋರಿಸಿಕೊಳ್ಳುತ್ತಾರೆ. ಎನ್ಎಸ್ಯುಐ ಘಟಕದವರೆ ಈ ಸಂಬಂಧ ಕಾಂಗ್ರೆಸ್ ಉಸ್ತುವಾರಿಗೆ ದೂರು ನೀಡಿದ್ದಾರೆ ಎಂದರು.
ನಾನು ಅದಾನಿ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದೆ. ಆದರೆ, ಈಗ ಅದೇ ಕಂಪೆನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಣೆ ಹಾಕಿದ್ದಾರೆ. ಉಡುಪಿ ಬಳಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಹಸಿರು ನಿಶಾನೆ ನೀಡಲಾಗಿದೆ. ಇದು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅದಾನಿ ಪಾತ್ರವನ್ನು ಮುಚ್ಚಿಹಾಕುವ ತಂತ್ರವಾಗಿದೆ ಎಂದು ಅವರು ತಿಳಿಸಿದರು.







