'ಪ್ರಜಾಕೀಯ'ದಲ್ಲಿ 30,000 ಸಕ್ರಿಯ ಕಾರ್ಯಕರ್ತರು: ಉಪೇಂದ್ರ

ಉಡುಪಿ, ಡಿ.6: ಕೆಪಿಜೆಪಿ -'ಪ್ರಜಾಕೀಯ' ಪಕ್ಷದ ಇಮೇಲ್ ಮೂಲಕ ಈಗಾಗಲೇ 50,000 ಮಂದಿ ಅರ್ಜಿ ಹಾಕಿದ್ದು, ಅವರಲ್ಲಿ 30ಸಾವಿರ ಮಂದಿ ನೋಂದಾವಣಿ ಮಾಡಿಕೊಂಡಿದ್ದಾರೆ. ಇವರೆಲ್ಲ ಸಕ್ರಿಯ ಕಾರ್ಯಕರ್ತರಾಗಿದ್ದು, ಇನ್ನಷ್ಟು ಮಂದಿ ಸ್ವಯಂ ಸೇವಕರಾಗಿ ಕೆಲಸ ಮಾಡಲು ಮುಂದೆ ಬಂದಿದ್ದಾರೆ ಎಂದು ಪಕ್ಷದ ಸ್ಥಾಪಕ, ಚಿತ್ರನಟ ಉಪೇಂದ್ರ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಆಡಳಿತರುವ ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳಿಗೆ ಒಂದೇ ರೀತಿಯ ಸಮವಸ್ತ್ರ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಕಳೆದ 15ವರ್ಷಗಳಿಂದ ವಿವಿಧ ರಾಜಕೀಯ ಪಕ್ಷಗಳು ನನಗೆ ಆಹ್ವಾನ ನೀಡಿದೆ ಎಂದು ಹೇಳಿದರು.
ರಾಜಕೀಯ ಕ್ಷೇತ್ರ ವ್ಯಾಪರೀಕರಣ ಆಗಿರುವುದರಿಂದ ಎಲ್ಲ ಕ್ಷೇತ್ರಗಳು ಕೂಡ ವ್ಯಾಪರೀಕರಣಗಳಾಗಿವೆ. ಶಿಕ್ಷಣ, ಆರೋಗ್ಯ ಕೂಡ ವ್ಯಾಪಾರ ಆಗಿದೆ. ರಾಜ ಕೀಯದಲ್ಲಿ ಸಂಬಳಕ್ಕಾಗಿ ದುಡಿಯಿರಿ. ರಾಜಕಾರಣಿಗಳಾಗಿ ಜೀವನ ಪೂರ್ತಿ ದುಡಿಯುವ ಬದಲು ದಿನಕ್ಕೆ ಎಂಟು ಗಂಟೆ ದುಡಿದರೆ ಸಾಕು. ಚುನಾವಣೆ ಸಮೀಪಿಸುತ್ತಿದ್ದರೆ ಗಲಾಟೆ, ಜಾತಿ, ಧರ್ಮವೇ ಮುಖ್ಯವಾಗುತ್ತದೆ. ಆದರೆ ಸಮಸ್ಯೆ ಹಾಗೂ ಅದಕ್ಕೆ ಪರಿಹಾರದ ಬಗ್ಗೆ ಚರ್ಚೆ ಆಗುವುದು ತೀರಾ ಕಡಿವೆು ಎಂದು ಅವರು ಅಭಿಪ್ರಾಯ ಪಟ್ಟರು.
ಆರೋಗ್ಯ, ಶಿಕ್ಷಣ ಉಚಿತವಾಗಿ ಸಿಗದ ಕಾರಣ ನಾವು ಭ್ರಷ್ಟರಾಗುತ್ತಿದ್ದೇವೆ. ಚುನಾವಣೆ ಗೆಲ್ಲುವ ಈಗ ಇರುವ ದಾರಿಯನ್ನು ಬದಲಾಯಿಸಬೇಕಾಗಿದೆ. ಒಂದು ಎಂಎಲ್ಎ ಸ್ಥಾನ ಗೆಲ್ಲಲು ಇಂದು ಕೋಟ್ಯಂತರ ರೂ. ಹಣ ಖರ್ಚು ಮಾಡಲಾಗುತ್ತಿದೆ. ಹಣ ಇಲ್ಲದೆಯೂ ಈಗಿರುವ ತಂತ್ರಜ್ಞಾನವನ್ನು ಬಳಸಿ ಕೊಂಡು ಚುನಾವಣೆ ಗೆಲ್ಲಲು ಸಾಧ್ಯ ಎಂಬುದನ್ನು ತೋರಿಸುತ್ತೇವೆ ಎಂದರು.







