ತುಳಿತಕ್ಕೊಳಗಾದವರಿಗೆ ಸಾಮಾಜಿಕ ನ್ಯಾಯ ದೊರೆಯಲಿ: ಮುರುಘಾಶ್ರೀ
ಚಿತ್ರದುರ್ಗ, ಡಿ.5: ಶೋಷಣೆ ಅದೊಂದು ಯಾತನೆ. ಶೋಷಣೆ ಮತ್ತು ತುಳಿತಕ್ಕೊಳಗಾದವರಿಗೆ ಸಾಮಾಜಿಕ ನ್ಯಾಯ ದೊರಕುವಂತಾಗಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.
ನಗರದ ಅಮೃತ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಬಸವಕೇಂದ್ರ ಮುರುಘಾಮಠ, ಬಸವೇಶ್ವರ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮತ್ತು ಜಿಲ್ಲಾ ಬಸವಕೇಂದ್ರಗಳ ಸಹಯೋಗದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಮತ್ತು ಸಾಮಾಜಿಕ ನ್ಯಾಯ ವಿಷಯ ಕುರಿತು ಶ್ರೀಗಳು ಮಾತನಾಡಿದರು.
ಶೋಷಣೆ ಜೀವನವಿಡೀ ವೇದನೆಯಾಗಿ ಇಂದಿಗೂ ಸಮಾಜದಲ್ಲಿ ಸತಾಯಿಸುತ್ತಿರುವ ರೋಗವಾಗಿದೆ. ಬುದ್ಧ ಅಮಾನವೀಯ ಆಚರಣೆಗಳನ್ನು ನಿಲ್ಲಿಸಿದರು. ನಂತರ ಬಸವಣ್ಣ ಈ ಸಾಲಿನಲ್ಲಿ ಬಂದು ನಿಂತರು. ಶ್ರೇಣೀಕೃತವಾದ ಸಮಾಜ ಇತ್ತು. ನಾಲ್ಕು ವರ್ಗಗಳಿದ್ದವು. ಶೂದ್ರನ ಸ್ಥಾನಮಾನ ಮೇಲ್ವರ್ಗದವರ ಸೇವೆ ಮಾಡುವುದೇ ಆಗಿತ್ತು. ಇಂತಹ ಅಸಹನೀಯ ಪರಿಸ್ಥಿತಿ ಇತ್ತು. ಕುಲಹದಿನೆಂಟು ಜಾತಿಯವರೆಲ್ಲರೂ ಒಂದಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದರು ಎಂದರು.
ಶರಣರು ಎಂದಿಗೂ ಪಲಾಯನವಾದಿಗಳಲ್ಲ. ಹಾಗಾಗಿ ಅಂದು ಸಾಮೂಹಿಕ ಹೋರಾಟಕ್ಕೆ ಧುಮುಕಿದವರು. ಇಂದಿನ ಮಹಿಳೆಯರ ಸಬಲೀಕರಣ ಅಂದಿನ ಮಹಿಳೆಯರ ವಿಮೋಚನೆ. ಮಾನವನ ಜ್ವಲಂತ ಸಮಸ್ಯೆಗಳು ಇಂದಿಗೂ ಇವೆ. ಬುದ್ಧ, ಬಸವ, ಏಸು, ಪೈಗಂಬರ್, ಅಂಬೇಡ್ಕರ್, ಗಾಂಧೀಜಿಯವರ ಚಿಂತನೆಗಳನ್ನು ಬಿತ್ತಬಹುದು ಎಂದರು.
ಆದರೆ ನಾವು ಅವರಾಗಲು ಸಾಧ್ಯವಿಲ್ಲ. ಕಾರಣ ಅಂತಹ ಮೂಲಭೂತ ಸಮಸ್ಯೆಗಳನ್ನು ಎತ್ತಿ ಹೋರಾಟ ನಡೆಸಿದ್ದಾರೆ. ಅಂತಹ ಸಮಸ್ಯೆಗಳು ಇಂದು ಇಲ್ಲವಾದ್ದರಿಂದ ಅವರಂಥಾಗಲು ಸಾಧ್ಯವಿಲ್ಲ. ಅವರ ಮಾರ್ಗದಲ್ಲಿ ನಡೆಯುವುದರಿಂದ ಅವರನ್ನು ನೆನಪಿಸಬಹುದಾಗಿದೆ ಎಂದು ತಿಳಿಸಿದರು.
ವೈದಿಕ ಆಚರಣೆಗಳು: ಕೆಲವರಿಗೆ ಧರ್ಮ, ಸಿದ್ಧಾಂತಗಳು ರುಚಿಸುವುದಿಲ್ಲ. ಈ ಆಚರಣೆಗಳನ್ನು ಕೆಲವರು ಧರ್ಮ ಎಂದು ಆಚರಿಸುತ್ತಾರೆ. ಇವು ಆಧ್ಯಾತ್ಮಿಕತೆಗಿಂತಲೂ ಮುಖ್ಯವಾಗಿ ವಿಜೃಂಭಿಸುತ್ತಿದ್ದವು. ಅವರು ವೈದಿಕ ಆಚರಣೆಯಲ್ಲಿ ಎಲ್ಲದನ್ನೂ ಕಾಣುತ್ತಾರೆ ಎಂದರು.
ನಾವು ಮಾನವೀಯ ವೌಲ್ಯಗಳನ್ನು ಆಚರಿಸಬೇಕು. 21ನೇ ಶತಮಾನದಲ್ಲಿ ಮಾನವ ಮಾನವನಾಗಿ ಉಳಿಯಬೇಕಾದರೆ ಮಾನವೀಯ ವೌಲ್ಯಗಳನ್ನು ಅನುಸರಿಸಬೇಕು. ನಮ್ಮಳಗೆ ವೌಲ್ಯಗಳು ವಿಜೃಂಭಿಸಬೇಕು. ನಮ್ಮಳಗೆ ಅಂತಹ ಮಾನವ ಉದಯಿಸಬೇಕು. ನಾವು ಕೃತಿಯಲ್ಲಿ ಮತ್ತು ಆಕೃತಿಯಲ್ಲಿ ಮಾನವರಾಗಬೇಕು ಎಂದರು.
ವಿಷಯಾವಲೋಕನ ಮಾಡಿದ ಚಳ್ಳಕೆರೆ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಜಿ.ವಿ. ರಾಜಣ್ಣ, ದೇಶೀ ಚಹರೆಯ ಅವಲೋಕನವೇ ವಚನ ಸಾಹಿತ್ಯ. ಜನಪದ ಪರಂಪರೆಯ ಮತ್ತು ಜನಪದ ಸಾಹಿತ್ಯದ ಮುಂದುವರಿದ ಭಾಗ. ವಚನ ಸಾಹಿತ್ಯದಲ್ಲಿ ಜೀವಪರವಾದ ಧ್ವನಿ ಇದೆ. ಚಳವಳಿಗಳು ಅಥವಾ ಆಂದೋಲನ ಸುಮ್ಮನೆ ಹುಟ್ಟುವುದಿಲ್ಲ, ಇವು ಜನರಿಗೆ ಧ್ವನಿಯಾಗುತ್ತದೆ. ಇದರ ಮುಂದಾಳತ್ವವನ್ನು ಬಸವಣ್ಣನವರು ವಹಿಸಿದ್ದರು ಎಂದರು.
ಬರವಣಿಗೆ ಹೋರಾಟದ ಮೂಲಕ ವಚನ ಚಳವಳಿ ರೂಢಿಸಿಕೊಳ್ಳುತ್ತದೆ. ಇದೊಂದು ಬಹುಮುಖ್ಯ ಕ್ರಾಂತಿಯಾಗುತ್ತದೆ. ಬಿದ್ದವರ ಬದುಕಿಗೆ ಆಸರೆಯಾಗುತ್ತದೆ. ಬಸವಾದಿ ಶರಣರು ಆದರ್ಶ ರಾಜ್ಯದ ಜೊತೆಗೆ ಭಕ್ತಿಯನ್ನು ಬಿತ್ತಿದರು. ಧ್ವನಿಯಿಲ್ಲದವರಿಗೆ ಧ್ವನಿಕೊಡುವ ಕೆಲಸ ಮಾಡಿದ್ದರು ಎಂದರು.
ಭಕ್ತಿ, ಕಾಯಕ, ದಾಸೋಹಗಳು ಅಂದು ಬಹುಮುಖ್ಯವಾಗುತ್ತವೆ. ಾನವನಾಗುವ ಕಲ್ಪನೆಯನ್ನು 12ನೇ ಶತಮಾನ ನೀಡಿತು. ಕಾಯಕ ಅತ್ಯಂತ ನಿಷ್ಠೆಯಿಂದ ಕೂಡಿರಬೇಕು. ದೇವರ ಹೆಸರಿನಲ್ಲಿ, ಸಂಘ ಸಂಸ್ಥೆಗಳ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಹಣ ಗಳಿಸುವ ಪ್ರವೃತ್ತಿಗೆ ಜನ ಮುಂದಾಗಿದ್ದಾರೆ. ಸ್ವಾವಲಂಬನೆ ಅವರಿಗೆ ಮುಖ್ಯವಾಗಿತ್ತು ಎಂದರು.
ಅಮೃತ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಗುರುಸ್ವಾಮಿ ಮಾತನಾಡಿದರು. ಬಸವಕಿರಣ ಸ್ವಾಮೀಜಿ, ಕೇತೇಶ್ವರ ಮಠದ ಸ್ವಾಮೀಜಿ, ಎಸ್.ಕೆ.ಬಿ. ಪ್ರಸಾದ್, ಡಾ. ಕೃಷ್ಣಪ್ಪ, ಆರ್.ಮಲ್ಲಿಕಾರ್ಜುನಯ್ಯ, ಪತ್ರಕರ್ತ ಜಿ.ಎಸ್. ಉಜ್ಜನಪ್ಪ, ಎ.ವಿಜಯಕುಮಾರ್ ಮುಂತಾದವರಿದ್ದರು.
ಜಮುರಾ ಕಲಾವಿದರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಬಿ.ವಿ. ವಿಶ್ವನಾಥ್ ಸ್ವಾಗತಿಸಿದರು. ನಾಗರಾಜ್ ಸಂಗಮ್ ವಂದಿಸಿದರು. ಹುರಳಿ ಬಸರಾಜ್ ನಿರೂಪಿಸಿದರು.







