ದಿಲ್ಲಿ ಟೆಸ್ಟ್ನಲ್ಲಿ ವಾಯುಮಾಲಿನ್ಯ: ಐಸಿಸಿಗೆ ದೂರು ನೀಡಿದ ಶ್ರೀಲಂಕಾ
ಕೊಲಂಬೊ, ಡಿ.6: ಭಾರತ ವಿರುದ್ಧ ನಡೆದಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ವೇಳೆ ತನ್ನ ಆಟಗಾರರು ದಿಲ್ಲಿ ವಾಯು ಮಾಲಿನ್ಯದಿಂದ ತೀವ್ರ ತೊಂದರೆ ಎದುರಿಸಿದ್ದರು ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಐಸಿಸಿಗೆ ದೂರು ಸಲ್ಲಿಸಿದೆ.
‘‘ಶ್ರೀಲಂಕಾ ಕ್ರಿಕೆಟ್ ಮಂಡಳಿ ಮಂಗಳವಾರ ಐಸಿಸಿಗೆ ದೂರು ನೀಡಿದೆ. ನಮ್ಮ ನಾಲ್ವರು ಆಟಗಾರರು ವಾಯುಮಾಲಿನ್ಯದಿಂದ ವಾಂತಿ ಮಾಡಿಕೊಂಡಿದ್ದು, ಇಂತಹ ಪರಿಸ್ಥಿತಿಯಲ್ಲಿ ನಮಗೆ ಆಡಲು ಸಾಧ್ಯವಿಲ್ಲವೆಂದು ತಿಳಿಸಿದ್ದೇವೆ’’ ಎಂದು ಕ್ರೀಡಾ ಸಚಿವ ದಯಸಿರಿ ಜಯಸೇಕರ ಹೇಳಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಐಸಿಸಿ ನಮಗೆ ಭರವಸೆ ನೀಡಿದೆ. ಆದರೆ, ಐಸಿಸಿ ಏನು ಕ್ರಮಕೈಗೊಳ್ಳಲಿದೆ ಎಂಬ ಕುರಿತು ಇನ್ನೂ ದೃಢಪಡಿಸಿಲ್ಲ ಎಂದು ದಯಸಿರಿ ಹೇಳಿದ್ದಾರೆ.
ಶ್ರೀಲಂಕಾ ಕ್ರಿಕೆಟಿಗರು ಟೆಸ್ಟ್ ಪಂದ್ಯದ ವೇಳೆ ಮಾಸ್ಕ್ ಧರಿಸಿ ಆಡಿದ್ದು, ಲಂಕೆಯ ಬೌಲರ್ಗಳು ಉಸಿರಾಟದ ಸಮಸ್ಯೆಯ ಬಗ್ಗೆ ದೂರು ನೀಡಿದ್ದರು. ಬುಧವಾರ ಫಿರೋಝ್ ಶಾ ಕೋಟ್ಲಾ ಮೈದಾನದಲ್ಲಿ ಶ್ರೀಲಂಕಾ-ಭಾರತ ನಡುವೆ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ.