ಉಳ್ಳಾಲ: ಎಸ್ಎಂಎಸ್ಎಫ್ನಿಂದ ಮೀಲಾದ್ ಜಲ್ಸಾ, ಸನ್ಮಾನ ಸಮಾರಂಭ

ಉಳ್ಳಾಲ, ಡಿ. 7: ಇಸ್ಲಾಮಿನಲ್ಲಿ ಶ್ರೇಷ್ಠ ಹಗಲು ಅರಫಾ ದಿನವಾಗಿದ್ದರೆ, ಶ್ರೇಷ್ಠ ರಾತ್ರಿ ಲೈಲತುಲ್ ಕದ್ರ್ ಆಗಿದೆ. ಅದೇ ರೀತಿ ಬದ್ರ್ ದಿನವೂ ಶ್ರೇಷ್ಠವಾಗಿದೆ. ಅತ್ಯುತ್ತಮ ಸಮಯ ಪ್ರವಾದಿ (ಸ.ಅ) ಅವರು ಜನಿಸಿದ ಸಮಯವಾಗಿದೆ. ಅವರ ಜನ್ಮದಿನ ಮೀಲಾದುನ್ನಬಿ ಎಲ್ಲೆಡೆ ಆಚರಿಸುವ ಮೂಲಕ ಜನ್ಮದಿನ ನೆನಪಿಸುವ ಕಾರ್ಯ ನಡೆಯಬೇಕು ಎಂದು ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಭಿಪ್ರಾಯಪಟ್ಟರು.
ಉಳ್ಳಾಲ ಸೈಯದ್ ಮದನಿ ದರ್ಗಾ ಮತ್ತು ಜಮಾಅತ್ ಅಂಗಸಂಸ್ಥೆ ಸೈಯದ್ ಮದನಿ ಸೋಶಿಯಲ್ ಫ್ರಂಟ್ ಆಶ್ರಯದಲ್ಲಿ ದರ್ಗಾದ ವೇದಿಕೆಯಲ್ಲಿ ನಡೆದ ಬೃಹತ್ ಮೀಲಾದ್ ಜಲ್ಸಾ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಸ್ಲಾಮಿನಲ್ಲಿ ಕೆಲವು ಪ್ರಮುಖ ದಿನಗಳಿದ್ದು ಅದನ್ನು ನೆನಪಿಸುವ ಕೆಲಸ ಖಂಡಿತವಾಗಿಯೂ ನಡೆಯಬೇಕು, ಮೀಲಾದುನ್ನಬಿ ಅಂತಹ ದಿನಗಳಲ್ಲೊಂದಾ ಗಿದ್ದು, ಆಚರಣೆ ತಡೆಯುವ ಬಗ್ಗೆ ಮಾತನಾಡುವವರನ್ನು ಕಡೆಗಣಿಸಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ದರ್ಗಾದಲ್ಲಿ 55 ಸದಸ್ಯರಿದ್ದು, ಆಡಳಿತ ನಡೆಸುವುದು ಕಷ್ಟವಾದರೂ ಸೈಯದ್ ಮದನಿ ತಂಙಳ್ರ ನಿಯಂತ್ರಣದಲ್ಲಿರುವುದರಿಂದ ಸುಸೂತ್ರವಾಗಿ ಆಡಳಿತ ನಡೆಯುತ್ತಿದೆ. ಆದರೂ ದರ್ಗಾ ವತಿಯಿಂದ ಹೊರತರಲಾದ ಪುಸ್ತಕ ಹಾಗೂ ಅಧ್ಯಕ್ಷರ ಬಗ್ಗೆ ಆರೋಪ ಮಾಡಲಾಗುತ್ತಿದೆ. ಯಾರು ಏನೇ ಮಾಡಿದರೂ ಸೈಯದ್ ಮದನಿ ವಿಶ್ರಮಿಸುತ್ತಿರುವ ದರ್ಗಾದಲ್ಲಿ ನಡೆಯದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ.ಮೋನು, ಉಪಾಧ್ಯಕ್ಷ ಶಾಹುಲ್ ಹಮೀದ್ ಮೆಟ್ರೋ, ನೆಕ್ಕರೆ ಬಾವ, ಸದಸ್ಯರಾದ ಸುಲೈಮಾನ್ ಸಾಮಾಣಿಗೆ, ಯು.ಕೆ.ಮೋನು ಇಸ್ಮಾಯಿಲ್, ಯು.ಎಸ್.ಅಬೂಬಕರ್ ಅವರನ್ನು ಸನ್ಮಾನಿಸಲಾಯಿತು.
ಉಳ್ಳಾಲದ ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಅಂತಾರಾಷ್ಟ್ರೀಯ ವಾಗ್ಮಿ ಉಸ್ತಾದ್ ಅಲ್ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಮುಖ್ಯ ಭಾಷಣಗೈದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್, ಸೈಯದ್ ಅಮೀರ್ ತಂಙಳ್ ಕಿನ್ಯ, ದರ್ಗಾ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ತ್ವಾಹ, ಪದಾಧಿಕಾರಿಗಳಾದ ಯು.ಕೆ.ಬಾವ ಮುಹಮ್ಮದ್, ಯು.ಕೆ.ಇಲ್ಯಾಸ್, ಯು.ಟಿ.ಇಲ್ಯಾಸ್, ಮನ್ಸೂರ್ ಅಹ್ಮದ್, ಮುಸ್ತಫಾ ಅಬ್ದುಲ್ಲಾ, ನೌಷಾದ್ ಅಲಿ, ಅಝಾದ್ ಇಸ್ಮಾಯಿಲ್, ಉಮ್ಮರ್ ಫಾರೂಕ್ ಎಫ್ಆರ್ಕೆ, ಬಾವಾ ಅಹ್ಮದ್, ಎ.ಕೆ.ಮೊಯ್ದಿನ್, ಅಫ್ತರ್ ಹುಸೈನ್, ಯು.ಕೆ.ಯೂಸುಫ್, ಅಬ್ಬಾಸ್ ಯು.ಕೆ., ಅಬ್ದುಲ್ ಬುಖಾರಿ, ಜಮಾಲಿಯಾ ಖಾದರ್, ಹಂಝ ಮದನಿನಗರ, ಹಮೀದ್ ಕೋಡಿ, ಎಸ್ಎಂಎಸ್ಎಫ್ ಸಂಚಾಲಕರಾದ ಅಯೂಬ್ ಮಂಚಿಲ, ಉಸ್ಮಾನ್ ಕಲ್ಲಾಪು, ಯು.ಕೆ.ಸದಕತ್ತುಲ್ಲಾ, ಪೊಡಿಮೋನು ಇಸ್ಮಾಯಿಲ್, ಇಬ್ರಾಹಿಂ ಅಲೇಕಳ, ಖಾಲಿದ್ ಯೂಸುಫ್ ಮೊದಲಾದವರು ಉಪಸ್ಥಿತರಿದ್ದರು.
ಎಸ್ಎಂಎಸ್ಎಫ್ ಪ್ರಧಾನ ಕಾರ್ಯದರ್ಶಿ ಎಂ.ಕೆ.ಜುನೈದ್ ಮಖ್ದೂಮಿ ಸ್ವಾಗತಿಸಿದರು. ಅಬ್ದುಲ್ ಖಾದರ್ ರಝಾಕ್ ನಯೀಮಿ ಕಿರಾಅತ್ ಪಠಿಸಿದರು. ಕೆ.ಎಂ.ಕೆ.ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.







