ಕಲ್ಲು ತೂರಾಟ: ಹೊನ್ನಾವರ ಉದ್ವಿಗ್ನ
ಪೊಲೀಸ್ ಪೇದೆ ಸೇರಿ ಮೂವರಿಗೆ ಗಾಯ, ಟೆಂಪೊಗಳ ಗಾಜು ಧ್ವಂಸ

ಹೊನ್ನಾವರ, ಡಿ.7: ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಟೆಂಪೊ-ಆಟೋರಿಕ್ಷಾ ನಿಲ್ದಾಣದ ಬಳಿ ಬುಧವಾರ ರಾತ್ರಿ 9 ಗಂಟೆ ವೇಳೆ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳವು ಒಮ್ಮೆಲೆ ಕಲ್ಲು, ಬಾಟಲಿ ತೂರಾಟ ನಡೆದು ಉದ್ವಿಗ್ನ ಪರಿಸ್ಥಿತಿ ಉಂಟಾದ ವರದಿಯಾಗಿದೆ.
ಘಟನೆಯಲ್ಲಿ ಕಮಟೇಹಿತ್ಲದ ನರಸಿಂಹ ಮೇಸ್ತ ಎಂಬವರು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶರತ್ ಮಹಾಲೆ ಎಂಬವರು ತಮ್ಮ ಹೇರ್ ಕಟಿಂಗ್ ಶಾಪ್ ಬಂದ್ ಮಾಡಿ ಅದೇ ಮಾರ್ಗದಲ್ಲಿ ನಡೆದು ಹೋಗುತ್ತಿರುವಾಗ ಅವರಿಗೂ ಪೆಟ್ಟು ಬಿದ್ದು ಪಟ್ಟಣದ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬ ಪೊಲೀಸ್ ಪೇದೆಗೆ ಕೈಬೆರಳಿಗೆ ಗಾಯವಾಗಿದೆ. ಟೆಂಪೊ ಸ್ಟ್ಯಾಂಡ್ನಲ್ಲಿ ನಿಲ್ಲಿಸಿದ್ದ 10 ಟೆಂಪೊಗಳ ಗಾಜುಗಳನ್ನು ಪುಡಿಮಾಡಲಾಗಿದೆ. ಕೆಲವು ಟೆಂಪುಗಳು ಜಖಂಗೊಂಡಿವೆ ಎಂದು ತಿಳಿದುಬಂದಿದೆ.
ಬಸ್ ನಿಲ್ದಾಣದ ಸುತ್ತಮುತ್ತ ಇರುವ ಅಂಗಡಿಗಳ ಜನರು ಅಂಗಡಿಗಳನ್ನು ಬಂದ್ ಮಾಡಿ ಮನೆಗೆ ತೆರಳುವ ಸಮಯದಲ್ಲಿ ನಿರ್ದಿಷ್ಟ ಕೋಮಿಗೆ ಸೇರಿದ ಒಂದಿಷ್ಟು ಜನರ ಗುಂಪು ಹೋ ಎಂದು ಕೂಗುತ್ತ ಕಲ್ಲು, ಬಾಟಲಿ ತೂರಾಟ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹಾಗೂ ಗುರುವಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಇಲ್ಲಿಯ ಪಿಎಸ್ಸೈ ಹಾಗೂ ಸಿಬ್ಬಂದಿ ಭದ್ರತೆಗೆ ತೆರಳಿದ್ದರು. ಒಮ್ಮಿಂದೊಮ್ಮಲೆ ಗಲಾಟೆ ಆಗಿರುವುದರಿಂದ ಇದ್ದ ಕೆಲವೇ ಪೊಲೀಸರು ಪರಿಸ್ಥಿತಿ ಹತೆಟಿಗೆ ತರಲು ಹರಸಾಹಸಪಟ್ಟರು.
ರಾತ್ರಿ 12 ಗಂಟೆವರೆಗೆ ಟೆಂಪೊ ಚಾಲಕರು, ಮಾಲಕರು ಸ್ಥಳಕ್ಕೆ ಬಂದು, ತಮ್ಮ ಟೆಂಪೊಗಳಿಗೆ ಹಾನಿಯಾಗಿರುವುದನ್ನು ಗಮನಿಸಿ ಪೊಲೀಸ್ ಠಾಣೆಗೆ ತೆರಳಿ ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಘಟನಾ ಸ್ಥಳದಲ್ಲಿ ಹಾಗೂ ಬಸ್ನಿಲ್ದಾಣದ ಎದುರಿನ ರಸ್ತೆಯಲ್ಲಿ ಕಲ್ಲು, ಗಾಜಿನ ಬಾಟಲಿಗಳು, ಕಬ್ಬಿಣದ ರಾಡು ಬಿದ್ದುಕೊಂಡಿವೆ. ಪಟ್ಟಣದ ಜನರಲ್ಲಿ ಈ ಘಟನೆ ಭಯದ ವಾತಾವರಣವನ್ನು ಸೃಷ್ಟಿಸಿದೆ.







