ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನ ವೆಚ್ಚ ಮಾಡದ ಅಧಿಕಾರಿಗಳಿಗೆ ನೋಟಿಸ್ : ಸಚಿವ ಆಂಜನೇಯ

ಬೆಂಗಳೂರು, ಡಿ. 7: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕೃಷಿ ಇಲಾಖೆ ಉದ್ದೇಶಪೂರ್ವಕವಾಗಿಯೇ ವೆಚ್ಚ ಮಾಡಿಲ್ಲ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಎಚ್ಚರಿಸಿದ್ದಾರೆ.
ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎಸ್ಟಿಪಿ-ಟಿಎಸ್ಪಿ ಅನುದಾನ ವೆಚ್ಚಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಎಸ್ಸಿ-ಎಸ್ಟಿ ಕೃಷಿ ಕೂಲಿ ಕಾರ್ಮಿಕರಿಗೆ ವಿದೇಶಿ ಪ್ರವಾಸಕ್ಕೆ ಹಣ ಒದಗಿಸಿದ್ದರೂ, ಯೋಜನೆ ಅನುಷ್ಠಾನಕ್ಕೆ ಕೃಷಿ ಇಲಾಖೆ ಆಸಕ್ತಿಯನ್ನೆ ವಹಿಸಿಲ್ಲ ಎಂದು ಆರೋಪಿಸಿದರು.
ಪರಿಶಿಷ್ಟ ರೈತರು ಟ್ರಾಕ್ಟರ್ ಖರೀದಿಗೆ ನೀಡುತ್ತಿದ್ದ ಸಹಾಯಧನವನ್ನು 2ಲಕ್ಷ ರೂ. ನಿಂದ 3ಲಕ್ಷ ರೂ.ಕ್ಕೆ ಹೆಚ್ಚಳ ಮಾಡಲಾಗಿದೆ. ಆದರೆ, ಕೃಷಿ ಇಲಾಖೆ ಉದ್ದೇಶ ಪೂರ್ವಕವಾಗಿ ಕೇವಲ 2ಲಕ್ಷ ರೂ.ಹಣವನ್ನು ನೀಡುವ ಮೂಲಕ ಪರಿಶಿಷ್ಟರಿಗೆ ವಂಚನೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರಿಶಿಷ್ಟರು ಆರ್ಥಿಕ ಮತ್ತು ಸಾಮಾಜಿಕವಾಗಿ ಸದೃಢರಾಗಬೇಕೆಂಬ ಇಚ್ಛೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಇದ್ದಂತಿಲ್ಲ. ಅವರ ಏಳ್ಗೆಯನ್ನು ಸಹಿಸಲು ಆಗಿತ್ತಿಲ್ಲ. ಹೀಗಾಗಿ ಒದಗಿಸಿದ ಅನುದಾನ ವೆಚ್ಚ ಮಾಡಿಲ್ಲ ಎಂದ ಅವರು, ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಸಿಎಂ ಹಾಗೂ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತರಲಾಗುವುದು ಎಂದರು.
ಶೇ.42ರಷ್ಟು ಮಾತ್ರ ವೆಚ್ಚ: ಎಸ್ಟಿಪಿ-ಟಿಎಸ್ಪಿ ಯೋಜನೆಯಡಿ 37 ಇಲಾಖೆಗಳಿಗೆ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ 27,703 ಕೋಟಿ ರೂ.ಅನುದಾನ ಮೀಸಲಿಟ್ಟಿದ್ದು, ಆ ಪೈಕಿ 11,626 ಕೋಟಿ ರೂ.ಗಳನ್ನಷ್ಟೇ ವೆಚ್ಚ ಮಾಡಿದ್ದು, ಈವರೆಗೂ ಕೇವಲ ಶೇ.42ರಷ್ಟನ್ನೇ ವೆಚ್ಚ ಮಾಡಲಾಗಿದೆ ಎಂದು ವಿವರ ನೀಡಿದರು.
ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನದ ಪೈಕಿ ಇಂಧನ-ಶೇ.67, ವಸತಿ- ಶೇ.60, ಗ್ರಾಮೀಣಾಭಿವೃದ್ಧಿ ಇಲಾಖೆ-ಶೇ.55ರಷ್ಟು ವೆಚ್ಚ ಮಾಡಿದೆ. ಆದರೆ, ಉನ್ನತ ಶಿಕ್ಷಣ-ಶೇ.6, ಯುವ ಸಬಲೀಕರಣ-ಶೇ.3, ಕೌಶಲ್ಯಾಭಿವೃದ್ಧಿ-ಶೇ.3, ಕಾರ್ಮಿಕ ಇಲಾಖೆ-ಶೇ.3ರಷ್ಟು ಹಾಗೂ ಕಾನೂನು ಇಲಾಖೆ ಮೀಸಲಿಟ್ಟ ಹಣವನ್ನು ವೆಚ್ಚವನ್ನೇ ಮಾಡಿಲ್ಲ ಎಂದರು.
ಅಧಿಕಾರಿಗಳು ಗೈರು: ಕಂದಾಯ, ಕೈಗಾರಿಕೆ, ತೋಟಗಾರಿಕೆ, ಉನ್ನತ ಶಿಕ್ಷಣ, ಮುಜರಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿ ಹಲವು ಇಲಾಖೆ ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆಗೆ ಗೈರುಹಾಜರಾಗಿದ್ದು, ಆ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಆಂಜನೇಯ ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಲಕ್ಷ್ಮಿನಾರಾಯಣ್, ಸಲಹೆಗಾರ ಇ.ವೆಂಕಟಯ್ಯ, ಶಾಸಕರಾದ ಉಮೇಶ್ ಜಾಧವ್, ಕಳಲೆ ಕೇಶವ ಮೂರ್ತಿ, ವಾರ್ತಾ ಇಲಾಖೆ ನಿರ್ದೇಶಕ ಹರ್ಷಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
‘ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನವನ್ನು ನಿಶ್ಚಿತವಾಗಿಯೂ ಶೇ.95ರಷ್ಟು ವೆಚ್ಚ ಮಾಡಲಾಗುವುದು. ಅನುದಾನವನ್ನು ವೆಚ್ಚ ಮಾಡುವ ಮೂಲಕ ಯೋಜನೆಗಳ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು. ಅಲ್ಲದೆ, ಅನುದಾನ ವೆಚ್ಚ ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’
-ಎಚ್.ಆಂಜನೇಯ ಸಮಾಜ ಕಲ್ಯಾಣ ಸಚಿವ







