ಮಹಿಳೆಯರ ಸಬಲೀಕರಣಕ್ಕೆ ಸ್ತ್ರೀ ಶಕ್ತಿ ಸಂಘಗಳು ಸಕ್ರಿಯವಾಗಲಿ: ಸಚಿವೆ ಉಮಾಶ್ರೀ

ಬೆಂಗಳೂರು, ಡಿ.7: ಮಹಿಳೆಯರು ಸಬಲೀಕರಣದಲ್ಲಿ ಸ್ತ್ರೀ ಶಕ್ತಿ ಸಂಘಗಳು ಮಹತ್ವದ ಪಾತ್ರ ವಹಿಸಲಿ ಎಂದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಉಮಾಶ್ರೀ ಆಶಯ ವ್ಯಕ್ತಪಡಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಸಂಯುಕ್ತ ಆಶ್ರಯದಲ್ಲಿ ನಗರದ ಮಲ್ಲೇಶ್ವರಂನಲ್ಲಿರುವ ವಿವೇಕಾನಂದ ಆಟದ ಮೈದಾನದಲ್ಲಿ ಆಯೋಜಿಸಿದ್ದ ಕರ್ಮಣಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೆಣ್ಣನ್ನು ಸಮಾಜದಲ್ಲಿ ಅತ್ಯಂತ ಕೀಳಾಗಿ ಕಾಣುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗಲೂ ಅದು ಮುಂದುವರಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳೆಯರು ಆರ್ಥಿಕವಾಗಿ ಸಬಲೀಕರಣವಾದರೆ ಸಮಾಜದಲ್ಲಿ ಅವರನ್ನು ಗುರುತಿಸುವ ಸ್ಥಿತಿ ಬದಲಾಗುತ್ತದೆ. ಈ ನಿಟ್ಟಿನಲ್ಲಿ ಸ್ತ್ರೀ ಶಕ್ತಿ ಸಂಘಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿವೆ ಎಂದ ಅವರು, ರಾಜ್ಯ ಸರಕಾರದಿಂದ ನೀಡುತ್ತಿರುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಹೆಣ್ಣು ಗೌರವಯುತವಾದ ಜೀವನ ನಡೆಸಲು ಮುಂದಾಗಬೇಕು ಎಂದರು. ರಾಜ್ಯ ಸರಕಾರದಿಂದ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಅದರ ಜೊತೆಗೆ, 25 ಸಾವಿರ ಸಹಾಯ ಧನವನ್ನು ನೀಡಲಾಗುತ್ತಿದೆ. ಹೀಗಾಗಿ, ಹೆಣ್ಣು ಮಕ್ಕಳು ಮನೆಯಲ್ಲಿ ಕೆಲಸ ಮಾಡುವುದು, ಗುಡಿ ಕೈಗಾರಿಕೆ ಮಾಡುವವರು ಸರಕಾರದಿಂದ ಸಾಲ ಪಡೆಯಿರಿ ಎಂದ ಅವರು, ಸ್ತ್ರೀ ಶಕ್ತಿ ಸಂಘಗಳು, ಸಾಮಾಜಿಕ ಬಹಿಷ್ಕೃತರು, ವಿಧವೆಯರು, ಲೈಂಗಿಕ ಅಲ್ಪಸಂಖ್ಯಾತರು, ಎಚ್ಐವಿ ಪೀಡಿತರು ಸೇರಿದಂತೆ ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಎನ್.ಎ.ಹಾರಿಸ್ ಮಾತನಾಡಿ, ಆಸಿಡ್ ದಾಳಿ ಸಂತ್ರಸ್ಥ ಮಹಿಳೆಯರಿಗೆ ನೀಡುವ ಪರಿಹಾರದ ರೀತಿಯಲ್ಲಿಯೇ ಅಡುಗೆ ಅನಿಲ ಸಿಡಿತಕ್ಕೆ ಒಳಗಾಗುವ ಮಹಿಳೆಯರಿಗೂ ಸಹಾಯ ಧನ ನೀಡಬೇಕು. ಹಾಗೂ ಅತ್ಯಾಚಾರ ಸಂತ್ರಸ್ಥರಿಗೂ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ಮಾತನಾಡಿ, ಒಂದು ಪಕ್ಷದಲ್ಲಿ ಕೆಲಸ ಮಾಡುತ್ತಾ, ಅಲ್ಲಿ ಏನು ಸಿಗಲಿಲ್ಲ ಎಂದು ಮತ್ತೊಂದು ಪಕ್ಷಕ್ಕೆ ಹೋಗುತ್ತಿದ್ದರೆ ಎಲ್ಲಿಯೂ ಏನು ಸಿಗುವುದಿಲ್ಲ. ಎಲ್ಲಿ ಇರುತ್ತೇವೆಯೋ ಅಲ್ಲಿಯೇ ನಿಷ್ಠಾವಂತರಾಗಿ ದುಡಿದರೆ ಮುಂದೊಂದು ದಿನ ಒಳ್ಳೆ ಸ್ಥಾನ ಸಿಗುತ್ತದೆ. ಅದಕ್ಕೆ ನಾನೇ ನಿದರ್ಶನವಾಗಿದ್ದು, ಏಳೆಂಟು ವರ್ಷದಿಂದ ಪಕ್ಷಕ್ಕಾಗಿ ದುಡಿದೆ. ಹೀಗಾಗಿ, ನನಗೆ ಈ ಸ್ಥಾನ ಸಿಗಲು ಸಾಧ್ಯವಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಟಿ.ಸೋಮಶೇಖರ್, ಪಾಲಿಕೆ ಸದಸ್ಯ ಕೇಶವಮೂರ್ತಿ, ಸಂಗೀತ ನಿರ್ದೇಶಕ ಲತಾ ಹಂಸಲೇಖ, ಮಂಡಳಿ ಸದಸ್ಯರಾದ ಅಶ್ವಿನಿ, ಸುಶೀಲ ನಂಜಪ್ಪ, ಭಾಗ್ಯ ಭೀಮಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ವಿವಿಧ ಸ್ವ ಸಹಾಯ ಸಂಘಗಳಿಂದ 25-30 ಸ್ಟಾಲ್ಗಳನ್ನು ನಿರ್ಮಿಸಲಾಗಿತ್ತು. ಇದರಲ್ಲಿ ವಿವಿಧ ರೀತಿಯ ಆಹಾರ ಉತ್ಪನ್ನಗಳು, ಅಡುಗೆ ಪದಾರ್ಥಗಳು, ಸೀರೆ, ಬಳೆ ಸೇರಿದಂತೆ ಹಲವು ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಇಂದಿನಿಂದ ಆರಂಭವಾದ ಪ್ರದರ್ಶನ ಮತ್ತು ಮಾರಾಟ ಇನ್ನೂ ಎರಡು ದಿನಗಳ ಕಾಲ ನಡೆಯುತ್ತದೆ.







