ನನ್ನ ಹತ್ಯೆಗೆ ಮಣಿಶಂಕರ್ ಪಾಕ್ಗೆ ಸುಪಾರಿ ನೀಡಿದ್ದರು: ಮೋದಿ

ಅಹ್ಮದಾಬಾದ್, ಡಿ.8: ತನ್ನ ಹತ್ಯೆಗೆ ಮಣಿಶಂಕರ್ ಅಯ್ಯರ್ ಪಾಕಿಸ್ತಾನಕ್ಕೆ ಸುಪಾರಿ ನೀಡಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಗುಜರಾತ್ನಲ್ಲಿ ರ್ಯಾಲಿಯೊಂದರಲ್ಲಿ ಮಾತನಾಡಿದ ಮೋದಿ, 2015ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಉಚ್ಛಾಟಿತ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ , ಭಾರತ-ಪಾಕ್ ನಡುವೆ ಶಾಂತಿ ನೆಲೆಸಬೇಕಾದರೆ ಮೋದಿಯನ್ನು ದಾರಿಯಿಂದ ನಿವಾರಿಸಿಬಿಡಿ ಎಂದಿದ್ದರು. ದಾರಿಯಿಂದ ನಿವಾರಿಸಿಬಿಡಿ ಎಂದರೆ ಅರ್ಥ ಏನು. ನಾನು ಮಾಡಿರುವ ಅಪರಾಧವಾದರೂ ಏನು. ನಮಗೆ ಜನತೆಯ ಆಶೀರ್ವಾದ ದೊರಕಿರುವುದು ನಮ್ಮ ಅಪರಾಧವೇ ಎಂದು ಪ್ರಶ್ನಿಸಿದರು. ನನ್ನ ಹತ್ಯೆಗೆ ಸುಪಾರಿ ನೀಡಲೆಂದೇ ಮಣಿಶಂಕರ್ ಅಯ್ಯರ್ ಪಾಕ್ಗೆ ಭೇಟಿ ನೀಡಿದ್ದಾರೆಯೇ ಎಂದೂ ಮೋದಿ ಪ್ರಶ್ನಿಸಿದ್ದಾರೆ.
ಮಣಿಶಂಕರ್ ಅಯ್ಯರ್ ಪಾಕ್ಗೆ ಭೇಟಿ ನೀಡಿದ್ದ ಸಂದರ್ಭ ಅಲ್ಲಿಯ ಟಿವಿ ಚಾನೆಲೊಂದು, ನಿಮ್ಮ ಪ್ರಕಾರ ಭಾರತ-ಪಾಕ್ ಮಧ್ಯೆ ಶಾಂತಿ ನೆಲೆಸಲು ಯಾವ ಕ್ರಮ ಕೈಗೊಳ್ಳಬೇಕು ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ ಅಯ್ಯರ್, ಪ್ರಧಾನಿ ಮೋದಿಯನ್ನು ದಾರಿಯಿಂದ ಸರಿಸಿಬಿಡಿ. ಆಮೇಲೆ ನೋಡಿ ಎಂದಿದ್ದರು ಎಂದು ಮೋದಿ ಹೇಳಿದ್ದಾರೆ.





