ವಿಶೇಷ ಪ್ಯಾಕೇಜ್ನಿಂದ ಗ್ರಾಮೀಣ ರಸ್ತೆಗಳ ಅಭಿವೃದ್ಧಿ: ವೀಣಾ ಅಚ್ಚಯ್ಯ
ಮೇಕೇರಿ ಕಾಮಗಾರಿಗಳಿಗೆ ಚಾಲನೆ
ಮಡಿಕೇರಿ, ಡಿ.8: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿನ ಬಗ್ಗೆ ಹೆಚ್ಚಿನ ಕಾಳಜಿ ತೋರುವ ಮೂಲಕ ವಿಶೇಷ ಪ್ಯಾಕೇಜ್ನಡಿ ಅನುದಾನ ಬಿಡುಗಡೆ ಮಾಡಿರುವುದರಿಂದ ಜಿಲ್ಲೆಯ ಗ್ರಾಮೀಣ ರಸ್ತೆಗಳು ಅಭಿವೃದ್ಧಿಯಾಗುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಪಂ ಮತ್ತು ಹಾಕತ್ತೂರು ಗ್ರಾಪಂ ವ್ಯಾಪ್ತಿಯ ಗ್ರಾಮೀಣ ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ನ ಅನುದಾನ ಸದುಪಯೋಗವಾಗುತ್ತಿದ್ದು, ಮೇಕೇರಿ ಗ್ರಾಪಂ ಮತ್ತು ಹಾಕತ್ತೂರು ಗ್ರಾಪಂ ವ್ಯಾಪ್ತಿಯ ರಸ್ತೆಗಳನ್ನು ಕೂಡ ಇದೇ ಅನುದಾನದಡಿ ಅಭಿವೃದ್ಧಿಪಡಿಸಲಾಗುತ್ತಿದೆ. ರಾಜ್ಯ ಸರಕಾರ ನೀಡಿದ ವಿಶೇಷ ಪ್ಯಾಕೇಜ್ ಕೊಡಗು ಜಿಲ್ಲೆಗೆ ವರದಾನವಾಗಿದ್ದು, ರಸ್ತೆಗಳು ಅಭಿವೃದ್ಧಿಯಾಗಬೇಕೆನ್ನುವ ಗ್ರಾಮೀಣ ಜನರ ಬೇಡಿಕೆ ಈಡೇರಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.
18ನೇ ಸಾಲಿಗೂ ವಿಶೇಷ ಪ್ಯಾಕೇಜ್ನಡಿ 50 ಕೋಟಿ ರೂ. ಬಿಡುಗಡೆಯಾಗಿದ್ದು, ರಾಜ್ಯ ಸರಕಾರದಿಂದ ಮತ್ತಷ್ಟು ಅನುದಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು.
ರಾಜೀವ್ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ಮಾತನಾಡಿ, ಪ್ರತೀ ವರ್ಷ 50 ಕೋಟಿ ರೂ. ವಿಶೇಷ ಪ್ಯಾಕೇಜ್ ಅನುದಾನದ ಮೂಲಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. 105 ಗ್ರಾಪಂಗಳಿಗೆ 50ರಿಂದ 75 ಲಕ್ಷದ ರೀತಿಯಲ್ಲಿ ಹಣ ಹಂಚಿಕೆ ಮಾಡಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮೇಕೇರಿ ಮಲಯ ಕಾಂಗ್ರೆಸ್ ಅಧ್ಯಕ್ಷ ತೋರೆರ ಉದಯ್, ಹಾಕತ್ತೂರು ವಲಯ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶರೀನ್, ಹಿರಿಯ ಮುಖಂಡರಾದ ಮಂಞರ ಸಾಬು ತಿಮ್ಮಯ್ಯ, ಕೊಡಗು ಜಿಲ್ಲಾ ಅಲ್ಪಸಂಖ್ಯಾತರ ಕಾರ್ಯದರ್ಶಿ ಖಾಲಿದ್, ಉಳುವಾರನ ಪಳಂಗಪ್ಪ, ಮಾಜಿ ಗ್ರಾಪಂ ಅಧ್ಯಕ್ಷ ಮೇಕೇರಿ ಹನೀಫ್, ಪಿಯುಸಿ ಫೆರೆರಾ, ಹಾಕತ್ತೂರು ಗಂಗಾಧರ, ಎಚ್.ಸಿ. ಪೊನ್ನಪ್ಪ, ಬಾಲಡಿ ಪ್ರತಾಪ್, ಚೆಟ್ಟೊಳಿರ ಪ್ರಕಾಶ್, ಶಾಫಿ ಕೊಟ್ಟಮುಡಿ, ಓಡಿಯನ ನಂದಾ, ಓಡಿಯನ ಸವಿತಾ, ಓಡಿಯನ ಸೋಮಣ್ಣ, ಮಂದ್ರಿರ ತಿಮ್ಮಯ್ಯ, ಲತೀಫ್, ಮಾಜಿ ತಾಪಂ ಸದಸ್ಯರು ಸೇರಿದಂತೆ ಗ್ರಾಮಸ್ಥರು ಇದ್ದರು. ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ 2016-17ನೇ ಸಾಲಿನಲ್ಲಿ 68 ಲಕ್ಷ ರೂ. ಬಿಡುಗಡೆಯಾಗಿದ್ದು, ಈ ಅನುದಾನದಕಾಮಗಾರಿಗೆ ಚಾಲನೆ ನೀಡಲಾಯಿತು.







