ಟಿಕೇಟ್ಗೆ ಹೈಕಮಾಂಡ್ ನಿರ್ಧಾರವೇ ಅಂತಿಮ: ಪ್ರತಾಪ್
ಕುಂದಾಪುರ ವಿಧಾನಸಭಾ ಕ್ಷೇತ್ರದ ಇಂಟಕ್ ಸಮಾವೇಶ

ಕುಂದಾಪುರ, ಡಿ.9: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮ. ಇದು ಕುಂದಾಪುರ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಗೂ ಅನ್ವಯಿಸುತ್ತದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ ಹೇಳಿದ್ದಾರೆ.
ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಶನಿವಾರ ನಡೆದ ಕುಂದಾಪುರ ವಿಧಾನಸಭಾ ಕ್ಷೇತ್ರದ ಇಂಟಕ್ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಕರ್ನಾಟಕ ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ ಅವರು ಕುಂದಾಪುರದಿಂದ ಸ್ಪರ್ಧಿಸಲು ತಾನೂ ಒಬ್ಬ ಆಕಾಂಕ್ಷಿಯಾಗಿದ್ದು, ಪಕ್ಷ ಅವಕಾಶ ನೀಡಿದರೆ ಕುಂದಾಪುರ ಜನತೆಗೆ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ ಎಂದು ಹೇಳಿರುವುದನ್ನು ಅವರು ಪರೋಕ್ಷವಾಗಿ ಉಲ್ಲೇಖಿಸಿ ಈ ಮಾತು ಹೇಳಿದರು.
ರಾಕೇಶ್ ಮಲ್ಲಿ ಅವರ ಬಗ್ಗೆ ಪಕ್ಷದ ರಾಜ್ಯ ನಾಯಕರು ಗಮನಹರಿಸಲಿದ್ದಾರೆ ಎಂಬ ವಿಶ್ವಾಸವಿದೆ. ಪ್ರತಿ ಕ್ಷೇತ್ರದಲ್ಲೂ ಗೆಲ್ಲುವ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಖಂಡಿತ ಮಣೆ ಹಾಕಲಿದೆ. ಏನೇ ಇದ್ದರೂ ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ನಾವೆಲ್ಲೂ ಬದ್ಧರು ಎಂದವರು ನುಡಿದರು.
ಕಾಂಗ್ರೆಸ್ ಪಕ್ಷವನ್ನು ಪ್ರತಿ ಕ್ಷೇತ್ರದಲ್ಲಿ ಬಲಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕು. ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮನೆ- ಮನೆಗೂ ಭೇಟಿ ನೀಡುವ ಮೂಲಕ ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತಿದ್ದಾರೆ. ಇದರಿಂದ ರಾಜ್ಯದ ಜನರ ಸಮಸ್ಯೆ, ಭಾವನೆಗಳನ್ನು ಅರ್ಥಮಾಡಿಕೊಳ್ಳಬಹುದಾಗಿದೆ ಎಂದು ಪ್ರತಾಪ್ಚಂದ್ರ ಶೆಟ್ಟಿ ವಿವರಿಸಿದರು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಬಾವ, ದೇಶಕ್ಕೆ ಸ್ವಾತಂತ್ರ ಸಿಗುವ ಮೊದಲೇ ಅಂದರೆ 1947ರ ಮೇ ಮೊದಲ ವಾರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗ ‘ಇಂಟಕ್’ ಅಸ್ವಿತ್ತಕ್ಕೆ ಬಂದಿದ್ದು, ಜಿ.ಬಿ.ಕೃಪಲಾನಿ ಉದ್ಘಾಟಿಸಿದರೆ, ಸರ್ದಾರ್ ವಲ್ಲಭಬಾಯಿ ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಗಾಂಧೀಜಿ ಸಹ ಕಾರ್ಯಕ್ರವುಕ್ಕೆ ಬಂದು ಹರಸಿದ್ದರು ಎಂದರು.
ಕಾರ್ಮಿಕರು ಹಾಗೂ ಮಾಲಿಕರ ನಡುವಿನ ಸಾಮರಸ್ಯ ಕಾಪಾಡಲು ಇಂಟಕ್ ಸಂಘಟನೆಯಿದ್ದು, ಕಾರ್ಮಿಕರ ಶೋಷಣೆಯನ್ನು ತಡೆಯುವಲ್ಲಿ ಇದು ಶ್ರಮಿಸುತ್ತಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಕಾರ್ಮಿಕ ಸಚಿವರಾಗಿ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ದೊರೆಯುವಂತಾಗಲು ಶ್ರಮಿಸಿದ್ದರು. ಸಂಘಟನೆ ಕಾರ್ಮಿಕರು, ದುಡಿಯುವ ವರ್ಗ, ರೈತರು, ಮೀನುಗಾರರಿಗೆ ಪ್ರಥಮ ಆದ್ಯತೆ ನೀಡುವಂತೆ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಬೈಂದೂರು ಶಾಸಕ ಹಾಗೂ ಮಾಜಿ ಜಿಲ್ಲಾದ್ಯಕ್ಷ ಕೆ.ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ರಾಜ್ಯ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ರಾಜ್ಯ ಮಹಿಳಾ ಇಂಟಕ್ ಅಧ್ಯಕ್ಷೆ ಬಿ.ತಾರಾ ಚಂದನ್, ಎಂ.ಎಸ್.ಮುಹಮ್ಮದ್, ವಿಕಾಸ್ ಹೆಗ್ಡೆ ಮಾತನಾಡಿದರು.
ಕಾಂಗ್ರೆಸ್ ಮುಖಂಡರಾದ ಬಿ.ಬಸವರಾಜ್, ಬಿ.ಹಿರಿಯಣ್ಣ, ವೆರೋನಿಕಾ ಕರ್ನೆಲಿಯೋ, ಬಿ.ನಿತ್ಯಾನಂದ ಶೆಟ್ಟಿ, ಲಕ್ಷ್ಮಿ ವೆಂಕಟೇಶ, ಅಮೃತ್ ಶೆಣೈ, ವಿಶ್ವಾಸ್ ಅಮೀನ್, ಅಶೋಕ್ ಕೊಡವೂರು, ಇಚ್ಚಿತಾರ್ಥ ಶೆಟ್ಟಿ, ಗಣೇಶ ಕೋಟ್ಯಾನ್, ಮಾಣಿ ಗೋಪಾಲ, ಪುಟ್ಟಸ್ವಾಮಿ, ಜ್ಯೋತಿ ವಿ. ಪುತ್ರನ್, ಮಮತಾ ಶೆಟ್ಟಿ, ಚಂದ್ರ ಅಮೀನ್, ಅಜಿತ್ ಶೆಟ್ಟಿ, ಆತ್ರಾಡಿ ಇಸ್ಮಾಯಿಲ್, ಕೃಷ್ಣದೇವ್ ಕಾರಂತ, ಪಿ.ಕೆ. ಸುರೇಶ್, ಸದಾನಂದ ಶೆಟ್ಟಿ, ದೇವರಾಜು ಶೆಟ್ಟಿ, ಗಣೇಶ್ ಸೇರಿಗಾರ್, ದೇವೇಂದ್ರ ಗಾಣಿಗ, ಎಂ. ಉದಯಕುಮಾರ್ ಶೆಟ್ಟಿ ಇತರರು ಉಪಸ್ಥಿತರಿದ್ದರು.
ಕುಂದಾಪುರ ಬ್ಲಾಕ್ ಸಮಿತಿ ಅಧ್ಯಕ್ಷ ಶಿವರಾಮ ಶೆಟ್ಟಿ ಮಲ್ಯಾಡಿ ಸ್ವಾಗತಿಸಿದರು. ಅಕ್ಷಯ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಂಕರ್ ಕುಂದರ್ ವಂದಿಸಿದರು.
ಕುಂದಾಪುರದಲ್ಲಿ ಸ್ಪರ್ಧೆಗೆ ಆಕಾಂಕ್ಷಿ: ರಾಕೇಶ್ ಮಲ್ಲಿ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಕುಂದಾಪುರ ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದು, ಪಕ್ಷ ಅವಕಾಶ ಕೊಟ್ಟರೆ ಸ್ಪರ್ಧಿಸುವ ಇಚ್ಛೆಯಿದ್ದು, ಇಲ್ಲಿನ ಜನರ ಸೇವೆ ಮಾಡಲು ಉತ್ಸುಕನಾಗಿದ್ದೇನೆ. ಮುಂದೆ ಇಲ್ಲೇ ವಾಸ್ತವ್ಯ ಹೂಡಿ, ಈ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಕಾರ ದೊಂದಿಗೆ ಹಗಲಿರುಳು ಶಕ್ತಿಮೀರಿ ಪ್ರಯತ್ನಿಸುತ್ತೇನೆ.
ಈಗಾಗಲೇ ಕ್ಷೇತ್ರದಲ್ಲಿ ಮನೆ-ಮನೆಗೆ ಕಾಂಗ್ರೆಸ್ ಕಾರ್ಯಕ್ರಮವನ್ನು ಯಶಸ್ವಿ ಯಾಗಿ ನಡೆಸಿದ್ದು, ಇನ್ನು ಮುಂದೆ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ, ಪಕ್ಷ ವನ್ನು ಬೂತ್ಮಟ್ಟದಲ್ಲಿ ಸಂಘಟಿಸಲು ಹೆಚ್ಚಿನ ಒತ್ತು ನೀಡುವುದಾಗಿ ಸಮಾವೇಶದ ಸಂಘಟಕ ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದರು.







