ಗುಜರಾತ್ ನತ್ತ ವಿ.ಆರ್.ವಾಲಾ ಚಿತ್ತ ?
ಬೆಂಗಳೂರು, ಡಿ.11: ಗುಜರಾತ್ ನ ವಿಧಾನಸಭೆಯ ಚುನಾವಣಾ ಫಲಿತಾಂಶ ಡಿ.18ರಂದು ಪ್ರಕಟಗೊಳ್ಳಲಿದ್ದು, ಕರ್ನಾಟಕದ ರಾಜ್ಯಪಾಲ ವಜೂಭಾಯ್ ವಾಲಾ ಅವರ ನಡೆ ಕುತೂಹಲ ಕೆರಳಿಸಿದೆ.
ವಜೂಭಾಯ್ ವಾಲಾ ಅವರು ಗುಜರಾತ್ ನ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೂಚನೆಯಂತೆ ವಜೂಭಾಯ್ ವಾಲಾ ಅವರು ಮತ್ತೆ ತವರು ರಾಜ್ಯವಾಗಿರುವ ಗುಜರಾತ್ ಗೆ ತೆರಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಗುಜರಾತ್ ಗೆ ವಾಪಸಾಗಲು ತಯಾರಾಗಿರುವಂತೆ ವಜೂಭಾಯ್ ವಾಲಾ ಅವರಿಗೆ ಪ್ರಧಾನಿ ಮೋದಿ ಸೂಚಿಸಿದ್ದಾರೆ . ಈ ಕಾರಣದಿಂದಾಗಿ ರಾಜ್ಯಪಾಲ ವಿ.ಆರ್.ವಾಲಾ ಅವರು ಡಿ.16ರ ಒಳಗಾಗಿ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡುವಂತೆ ರಾಜಭವನದ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ರಾಜ್ಯಪಾಲರ ಆದೇಶದಂತೆ ಅಧಿಕಾರಿಗಳು ಕಡತಗಳ ವಿಲೇವಾರಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪರಿಸ್ಥಿತಿಗೆ ತಕ್ಕಂತೆ ಬಿಜೆಪಿ ನಿರ್ಧಾರ ಕೈಗೊಳ್ಳುತ್ತಿದ್ದು, ಬಿಜೆಪಿಯು ಮತ್ತೆ ಗುಜರಾತ್ ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಆತ್ಮವಿಶ್ವಾಸದಲ್ಲಿದೆ.