ಕೆ-ಶಿಪ್-3ನೆ ಹಂತದ ಯೋಜನೆಗೆ ಸಚಿವ ಸಂಪುಟ ಅನುಮೋದನೆ

ಬೆಂಗಳೂರು, ಡಿ. 11: ರಾಜ್ಯದಲ್ಲಿನ 418.16 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು 5,334 ಕೋಟಿ ರೂ. ವೆಚ್ಚದ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮೂರನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವ ಜಯಚಂದ್ರ ತಿಳಿಸಿದ್ದಾರೆ.
ಸೋಮವಾರ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊಳ್ಳೆಗಾಲ-ಹನೂರು ಮತ್ತು ಚಿಂತಾಮಣಿ-ಆಂಧ್ರಪ್ರದೇಶದ ಗಡಿ ದ್ವಿಪಥ ರಸ್ತೆಗಳು, ನೈಸ್ ರಸ್ತೆ ಮಾಗಡಿ ಹಾಗೂ ಮಾಗಡಿ ರಾಷ್ಟ್ರೀಯ ಹೆದ್ದಾರಿ 75- ಚಿಕ್ಕಬೂದಿಗೆರೆ ಚತುಷ್ಪಥ ರಸ್ತೆ ಹಾಗೂ ಗದಗ-ಹೊನ್ನಾಳಿ ರಸ್ತೆಗಳ ಅಭಿವೃದ್ಧಿ ಈ ಯೋಜನೆಯಲ್ಲಿ ಸೇರಿದೆ ಎಂದರು.
ಸ್ಮಾರ್ಟ್ಸಿಟಿ ಸದಸ್ಯರ ನೇಮಕ: ಸ್ಮಾರ್ಟ್ ಸಿಟಿ ಅಭಿಯಾನದಡಿ ಸೃಜಿಸಲಾಗಿರುವ ಬೆಂಗಳೂರು ಸ್ಮಾರ್ಟ್ಸಿಟಿ ಲಿಮಿಟೆಡ್ನ ವಿಶೇಷ ಉದ್ದೇಶಿತ ವಾಹಕಕ್ಕೆ ಅಧಿಕಾರ ಪ್ರತ್ಯಾ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ.
ಸ್ಮಾರ್ಟ್ಸಿಟಿ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ಒದಗಿಸುತ್ತಿರುವ ತಲಾ 500ಕೋಟಿ ರೂ.ಅನುದಾನದ ಬಳಕೆಯ ಉಸ್ತುವಾರಿಗೆ ಬೆಂಗಳೂರು, ಮಂಗಳೂರು, ಬೆಳಗಾವಿ, ಶಿವಮೊಗ್ಗ, ಹುಬ್ಬಳ್ಳಿ ಮತ್ತು ದಾವಣಗೆರೆ ಸೇರಿ ಆರು ನಗರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸ್ಥಳೀಯ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಪಕ್ಷ ನಾಯಕರನ್ನು ಒಳಗೊಂಡಂತೆ ಈ ವಾಹಕದಲ್ಲಿ ಸದಸ್ಯರನ್ನು ನೇವುಕ ಮಾಡಲು ಸಂಪುಟ ತೀರ್ಮಾನಿಸಿದೆ.
ನಗರ ತ್ಯಾಜ್ಯ ನೀರು ಮರು ಬಳಕೆಯ ಕಾರ್ಯನೀತಿ: ಬೆಂಗಳೂರು ನಗರದಲ್ಲಿ ತ್ಯಾಜ್ಯ ನೀರು ಮರುಬಳಕೆಗೆ ಕೈಗೊಂಡ ಕ್ರಮಗಳನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ನಗರ ತ್ಯಾಜ್ಯ ನೀರು ಮರು ಬಳಕೆಯ ಕಾರ್ಯನೀತಿಗೆ ಸಂಪುಟ ಅನುಮೋದನೆ ನೀಡಿದೆ ಎಂದರು.
ಸಾಲಕ್ಕೆ ಖಾತರಿ: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಆಂತರಿಕ ಹಾಗೂ ಬಾಹ್ಯ ಆಯವ್ಯಯ ಸಂಪನ್ಮೂಲಗಳಿಂದ 350ಕೋಟಿ ರೂ. ಸಾಲ ಪಡೆಯಲು ಸರಕಾರದ ಪ್ರತಿ ಖಾತರಿ ಸಂಪುಟ ಒಪ್ಪಿಗೆ ನೀಡಿದೆ.
ಬನವಾಸಿ ಏತ ನೀರಾವರಿ ಯೋಜನೆ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಹೋಬಳಿಯ 32 ಕೆರೆಗಳಿಗೆ ಶಿಕಾರಿಪುರ ತಾಲೂಕಿನ ಭಾರ್ಸಿ ಗ್ರಾಮದ ಸಮೀಪದಲ್ಲಿರುವ ವರದಾ ನದಿಯ ಮೂಲದಿಂದ ನೀರನ್ನು ಎತ್ತಿ ತುಂಬಿಸುವ 62.58ಕೋಟಿ ರೂ.ಮೊತ್ತದ ಬನವಾಸಿ ಏತ ನೀರಾವರಿ ಯೋಜನೆಯ ಸವಿವರ ಯೋಜನಾ ವರದಿಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಮುಂದಿನ ಆರ್ಥಿಕ ವರ್ಷದಲ್ಲಿ ಭಾಗ್ಯಜ್ಯೋತಿ, ಕುಟೀರಜ್ಯೋತಿ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯದವರೆಗಿನ 22.33ಲಕ್ಷ ನೀರಾವರಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಸರಬರಾಜು ಮಾಡಲು 2018-19ನೆ ಸಾಲಿನ ಆಯವ್ಯಯದಲ್ಲಿ ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳಿಗೆ 12 ಸಾವಿರ ಕೋಟಿ ರೂ.ಮೀಸಲಿರಿಸಲು ಸಂಪುಟ ತೀರ್ಮಾನಿಸಿದೆ.
ಮಹಾಮಸ್ತಕಾಭಿಷೇಕ: 2018ರ ಫೆಬ್ರವರಿಯಲ್ಲಿ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಪೂರಕವಾಗಿ ಚನ್ನರಾಯಪಟ್ಟಣ ಮತ್ತು ಅರಸೀಕೆರೆ ತಾಲೂಕುಗಳಲ್ಲಿ 36.8ಕೋಟಿ ರೂ.ವೆಚ್ಚದಲ್ಲಿ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಸಂಪುಟ ಮಂಜೂರಾತಿ ನೀಡಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಕೆರೆ ಸಂಜೀವಿನಿ ಯೋಜನೆಯಲ್ಲಿ ಒತ್ತುವರಿ ತೆರವು ಕಾರ್ಯ ನಿರ್ವಹಿಸುವುದರ ಜೊತೆಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಕೆರೆಯ ಹೂಳೆತ್ತುವ ಕಾರ್ಯಕ್ಕೆ 100 ಕೋಟಿ ರೂ.ಮೀಸಲಿರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಭೂಮಿ ಮಂಜೂರು: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಅಂಬೇವಾಡಿಯಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ 15ಎಕರೆ ಭೂಮಿ ಮಂಜೂರು ಮಾಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಜಯಚಂದ್ರ ಹೇಳಿದರು.







