ಮಗನ ಸಾವಿಗೆ ನ್ಯಾಯ ಸಿಗದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ: ಪರೇಶ್ ಮೇಸ್ತಾ ತಂದೆ
ಹೊನ್ನಾವರ, ಡಿ.13: ಪರೇಶ್ ಮೇಸ್ತಾ ಸಾವು ಪ್ರಕರಣವನ್ನು ಸಿಬಿಐ ಅಥವಾ ಎನ್ ಐಎ ತನಿಖೆಗೆ ಒಳಪಡಿಸಬೇಕೆಂದು ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾ ಆಗ್ರಹಿಸಿದ್ದಾರೆ.
ಹೊನ್ನಾವರದ ಗೇರುಸೊಪ್ಪ ರಸ್ತೆಯಲ್ಲಿರುವ ಸಾಗರ ರೆಸಿಡೆನ್ಸಿ ಹೋಟೆಲ್ ನಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಮತ್ತು ಪೊಲೀಸರ ಮೇಲೆ ನಮಗೆ ನಂಬಿಕೆಯಿಲ್ಲ. ನನ್ನ ಮಗನ ಸಾವಿನ ಸಂಪೂರ್ಣ ತನಿಖೆಯಾಗಬೇಕು. ಆದ್ದರಿಂದ ಪ್ರಕರಣವನ್ನು ಸಿಬಿಐ ಅಥಬಾ ಎನ್ ಐಎಗೆ ವಹಿಸಬೇಕೆಂದು ಹೇಳಿದರು.
ಮಗನ ಸಾವಿಗೆ ನಮಗೆ ನ್ಯಾಯ ಸಿಗದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಉತ್ತರ ಕನ್ನಡ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಒಂದು ಲಕ್ಷ ರೂ. ಪರಿಹಾರ ನೀಡಿದ್ದು, ಅದನ್ನು ನಾವು ವಾಪಸ್ ನೀಡುತ್ತೇವೆ. ನನ್ನ ಮಗ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ. ಅವನನ್ನು ಯಾರೋ ಹತ್ಯೆ ಮಾಡಿ ನೀರಿನಲ್ಲಿ ಎಸೆದಿದ್ದಾರೆ. ಮಗನ ಶರೀರ ಕಪ್ಪುಬಣ್ಣಕ್ಕೆ ತಿರುಗಿದ್ದು, ಶರೀರದದಲ್ಲಿ ಗಾಯಗಳಿದ್ದವು ಮತ್ತು ಕಣ್ಣುಗಳು ಹೊರಬಂದಿದ್ದವು ಎಂದು ಕಮಲಾಕರ ಮೇಸ್ತಾ ಹೇಳಿದರು.