ಮೀನಾಕುಮಾರಿ ಚಿತ್ರಕ್ಕೆ ಒಲ್ಲೆ ಎಂದ ವಿದ್ಯಾಬಾಲನ್
ಹಿಂದಿ ಚಿತ್ರರಂಗದ ಜೀವಂತ ದಂತಕತೆಯೆನಿಸಿದ್ದ ಮೇರುನಟಿ ಮೀನಾ ಕುಮಾರಿಯ ಬದುಕು, ಚಿತ್ರವಾಗಲಿದೆಯೆಂಬ ಸುದ್ದಿ ಬಹಳ ಸಮಯದಿಂದಲೇ ಕೇಳಿಬರುತ್ತಿದೆ. ಆದರೆ ನಿರ್ದೇಶಕ ಕರಣ್ರಝ್ದಿನ್ ಎದುರಿಸುತ್ತಿರುವ ಸಮಸ್ಯೆಯೆಂದರೆ, ಮೀನಾ ಕುಮಾರಿಯ ಪಾತ್ರದಲ್ಲಿ ನಟಿಸಲು ಸೂಕ್ತ ನಟಿಯರೇ ಸಿಗುತ್ತಿಲ್ಲವಂತೆ. ಬಾಲಿವುಡ್ನ ಜನಪ್ರಿಯ ನಟಿ ವಿದ್ಯಾಬಾಲನ್ಗೆ ಈ ಚಿತ್ರದಲ್ಲಿ ನಟಿಸುವಂತೆ ಕರಣ್ ಕೋರಿದ್ದರಂತೆ. ‘ತುಮಾರಿ ಸುಲು’ ಚಿತ್ರದ ಗೆಲುವಿನ ಸಂಭ್ರಮದಲ್ಲಿರುವ ವಿದ್ಯಾಬಾಲನ್ ಗಂಭೀರ ಕಥಾವಸ್ತುವಿರುವ, ಮೀನಾಕುಮಾರಿ ಚಿತ್ರದಲ್ಲಿ ನಟಿಸಲು ಹಿಂದೇಟು ಹಾಕಿದ್ದಾರಂತೆ. ಸದ್ಯದ ಮಟ್ಟಿಗೆ ತಾನು ಗಂಭೀರತೆಯಿರದ ಕಥಾಪಾತ್ರಗಳನ್ನೇ ಆಯ್ದುಕೊಳ್ಳುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ.
ಜನಪ್ರಿಯತೆಯ ತುತ್ತ ತುದಿಗೇರಿದರೂ, ಭಗ್ನ ಪ್ರೇಮದಿಂದಾಗಿ ಮದ್ಯಪಾನಕ್ಕೆ ದಾಸಳಾದ ಮೇರು ನಟಿ ಮೀನಾಕುಮಾರಿಯ ದುರಂತಮಯ ಬದುಕಿನಿಂದ ಪ್ರೇರಿತವಾದ ಕಥೆಯನ್ನು ಈ ಚಿತ್ರ ಒಳಗೊಂಡಿರುವುದಾಗಿ ರಝ್ದೆನ್ ಹೇಳುತ್ತಾರೆ.
ಕರಣ್ ಮಾಧುರಿ ದೀಕ್ಷಿತ್ಗೂ ಚಿತ್ರಕಥೆಯನ್ನು ವಿವರಿಸಿದ್ದರು. ಆದರೆ ಮಾಧುರಿ ಕೂಡಾ ಉತ್ಸಾಹ ತೋರಲಿಲ್ಲವಂತೆ. ಇದೀಗ ಕರಣ್, ಬಾಲಿವುಡ್ನಲ್ಲಿ ಗ್ಲಾಮರ್ ಪಾತ್ರಗಳಿಗೆ ಹೆಸರಾದ ಸನ್ನಿಲಿಯೋನ್ಗೆ ನಾಯಕಿ ಪಾತ್ರ ನೀಡುವ ಬಗ್ಗೆ ಯೋಚಿಸುತ್ತಿದ್ದಾರೆ. ಸನ್ನಿ ಲಿಯೋನ್ ತನ್ನ ಇಮೇಜ್ಗೆ ತೀರಾ ವಿಭಿನ್ನವಾಗಿರುವ ಈ ಚಿತ್ರದಲ್ಲಿ ನಟಿಸಲು ಆಸಕ್ತಿ ತೋರಿದ್ದಾರೆಂದು ರಝ್ದಾನ್ ಹೇಳಿದ್ದಾರೆ.