ಕಳೆದ ಐದು ತಿಂಗಳಲ್ಲಿ ಬಿಜೆಪಿ ಖಜಾನೆ ಸೇರಿದ 80,000 ಕೋ.ರೂ.ದೇಣಿಗೆ: ಅಣ್ಣಾ ಹಝಾರೆ

ಗುವಾಹಟಿ,ಡಿ.15: ಶುಕ್ರವಾರ ಇಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ಧ ತೀವ್ರ ದಾಳಿಯನ್ನು ನಡೆಸಿದ ಖ್ಯಾತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಅವರು, ಎನ್ಡಿಎ ಸರಕಾರದ ಕಳೆದ ಮೂರು ವರ್ಷಗಳ ಆಡಳಿತದಲ್ಲಿ ದೇಶವು ಏಷ್ಯಾದಲ್ಲಿಯೇ ಅತ್ಯಂತ ಭ್ರಷ್ಟವೆಂಬ ಪಟ್ಟಕ್ಕೇರಿದೆ ಎಂದು ಹೇಳಿದರು. ಕಳೆದ ಐದು ತಿಂಗಳುಗಳಲ್ಲಿ 80,000 ಕೋ.ರೂ.ಗಳು ದೇಣಿಗೆಗಳ ರೂಪದಲ್ಲಿ ಬಿಜೆಪಿಯ ಖಜಾನೆಯನ್ನು ಸೇರಿವೆ ಎಂದು ಅವರು ಪ್ರತಿಪಾದಿಸಿದರು.
ಅಂತರರಾಷ್ಟ್ರೀಯ ಪಾರದರ್ಶಕತೆ ಸಮೀಕ್ಷೆಯೊಂದನ್ನು ಉಲ್ಲೇಖಿಸಿರುವ ಫೋರ್ಬ್ಸ್ ಮ್ಯಾಗಝಿನ್ನಲ್ಲಿಯ ಲೇಖನವೊಂದನ್ನು ಪ್ರಸ್ತಾಪಿಸಿದ ಅವರು, ಏಷ್ಯಾದ ಭ್ರಷ್ಟ ರಾಷ್ಟ್ರಗಳಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ ಎಂದರು.
ಹೊಸ ಸರಕಾರವೊಂದು ಅಧಿಕಾರಕ್ಕೆ ಬಂದಾಗ ಅದಕ್ಕೆ ಕೊಂಚ ಸಮಯವನ್ನು ನೀಡಬೇಕಾಗುತ್ತದೆ. ಹೀಗಾಗಿ ಕಳೆದ ಮೂರು ವರ್ಷಗಳಿಂದಲೂ ತಾನು ಮೌನವಾಗಿದ್ದೆ. ಆದರೆ ಈಗ ಮಾತನಾಡುವ ಸಮಯ ಬಂದಿದೆ. ಮುಂದಿನ ವರ್ಷದ ಮಾ.23ರಿಂದ ಪ್ರಬಲ ಲೋಕ ಜನಪಾಲ್ಗಾಗಿ ಮತ್ತು ಈ ದೇಶದ ರೈತರಿಗಾಗಿ ಇನ್ನೊಂದು ಆಂದೋಲನವನ್ನು ತಾನು ಆರಂಭಿಸಲಿದ್ದೇನೆ ಎಂದು ಅವರು ಘೋಷಿಸಿದರು.
ಸಾಮಾನ್ಯ ಜನರು ಈಗಲೂ ಸಮಸ್ಯೆಗಳಲ್ಲಿ ತೊಳಲಾಡುತ್ತಿದ್ದಾರೆ. ದೇಶದ ರೈತರು ಸಂಕಷ್ಟಗಳಿಂದ ನರಳುತ್ತಿದ್ದಾರೆ. ಬ್ಯಾಂಕುಗಳು ರೈತರಿಗೆ ಸಾಲಗಳನ್ನು ನೀಡುತ್ತಿವೆ, ಆದರೆ ತಮ್ಮ ಮನಸೋಇಚ್ಛೆ ಬಡ್ಡಿಯನ್ನು ಹೇರುತ್ತಿವೆ. ಆರ್ಬಿಐ ಎಲ್ಲ ರೈತರಿಗಾಗಿ ಬಡ್ಡಿದರ ವೊಂದನ್ನು ನಿಗದಿಗೊಳಿಸಬೇಕು ಎಂದ ಅವರು, ಸಾಲಗಳ ಮರುಪಾವತಿಗೆ ತಮ್ಮ ಬೆಳೆಗಳಿಗೆ ಒಳ್ಳೆಯ ಬೆಲೆಗಳನ್ನು ಪಡೆಯುವಲ್ಲಿ ವಿಫಲರಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರು ಬೆಳೆದ ಭತ್ತಕ್ಕೆ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದರು.
ಕಳೆದ ಮೂರು ವರ್ಷಗಳಲ್ಲಿ ತಾನು ಪ್ರಧಾನಿ ನರೇಂದ್ರ ಮೋದಿಯವರಿಗೆ 32 ಪತ್ರಗಳನ್ನು ಬರೆದಿದ್ದರೂ, ಪ್ರಧಾನಿ ಕಚೇರಿಯು ಒಂದಕ್ಕೂ ಉತ್ತರಿಸಿಲ್ಲ ಎಂದರು.
ಆಗಿನ ಪ್ರಧಾನಿ ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರಕಾರವು ದುರ್ಬಲ ಜನ ಲೋಕಪಾಲ್ ಮಸೂದೆಯನ್ನು ಸಿದ್ಧಗೊಳಿಸಿದ್ದರೆ, ಬಿಜೆಪಿ ನೇತೃತ್ವದ ಎನ್ಡಿಎ ಸರಕಾರವು ಅದನ್ನು ಇನ್ನಷ್ಟು ದುರ್ಬಲಗೊಳಿಸಿದೆ. ಅಧಿಕಾರಿಗಳು ತಮ್ಮ ಆಸ್ತಿ ಘೋಷಿಸುವುದನ್ನು ಕಡ್ಡಾಯಗೊಳಿಸಿದ್ದ ನಿಯಮವನ್ನು ಎನ್ಡಿಎ ಸರಕಾರವು ರದ್ದುಗೊಳಿಸಿದೆ. ಕಂಪನಿಗಳು ತಮ್ಮ ಲಾಭದ ಶೇ.7.5ರಷ್ಟನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆಯನ್ನಾಗಿ ನೀಡಲು ಅವಕಾಶವಿತ್ತು,ಆದರೆ ಈಗ ಅವು ಎಷ್ಟೇ ಮೊತ್ತವನ್ನಾದರೂ ರಾಜಕೀಯ ಪಕ್ಷಗಳಿಗೆ ದೇಣಿಗೆಯನ್ನಾಗಿ ನೀಡಬಹುದಾಗಿದೆ ಎಂದು ಹಝಾರೆ ಬೆಟ್ಟು ಮಾಡಿದರು.







