‘ಪತ್ರಿಕೆ ಯಾರ ಪರವಿರಬೇಕೆಂದು ತೋರಿಸಿಕೊಟ್ಟರು’
ನುಡಿನಮನ ಕಾರ್ಯಕ್ರಮ
ಮೈಸೂರು, ಡಿ.15: ಪತ್ರಿಕೆ ಯಾರ ಪರವಿರಬೇಕೆಂದು ರಾಜಶೇಖರ ಕೋಟಿ ತೋರಿಸಿಕೊಟ್ಟರು ಎಂದು ಬೆಂಗಳೂರಿನ ನಿಡುಮಾಮಿಡಿ ಮಹಾಸಂಸ್ಥಾನ ಮಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ತಿಳಿಸಿದರು. ಭಾರತ ಮೂಲ ನಿವಾಸಿ ಫೌಂಡೇಶನ್ ವತಿಯಿಂದ ಜೆಎಲ್ಬಿ ರಸ್ತೆಯಲ್ಲಿರುವ ದಿ ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಆಂದೋಲನ’ ದಿನಪತ್ರಿಕೆ ಸಂಪಾದಕ ರಾಜಶೇಖರ ಕೋಟಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಕೋಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
1970ರ ದಶಕದ ಚಳವಳಿಗಳ ವಿಚಾರಧಾರೆಗಳಿಂದ ಪ್ರಭಾವಿತರಾದವರಲ್ಲಿ ಕೋಟಿ ಒಬ್ಬರು. ಪಾಟೀಲ ಪುಟ್ಟಪ್ಪ ಅವರ ಗರಡಿಯಲ್ಲಿ ತರಬೇತಿ ಪಡೆದ ಕೋಟಿ ಅವರು ತಮ್ಮ ಪತ್ರಿಕೆಯನ್ನು ಜನರ ಬದುಕಿನ ಭಾಗವಾಗಿ ಕಟ್ಟಿದರು. ಬಡವರ ಬಗ್ಗೆ, ಅಸಹಾಯಕರ ಬಗ್ಗೆ ಅಂತಃಕರಣ ಹೊಂದಿದ್ದ ಅವರು ಪತ್ರಿಕೆ ಯಾರ ಪರವಾಗಿ ಇರಬೇಕು ಎಂಬುದನ್ನು ತೋರಿಸಿಕೊಟ್ಟರು ಎಂದರು.
‘ಆಂದೋಲನ’ ಪ್ರಾರಂಭವಾದ ವರ್ಷದಲ್ಲಿಯೇ ಹಾಸನ, ಕೋಲಾರ ಮತ್ತಿತರ ಜಿಲ್ಲೆಗಳಲ್ಲಿ ಸ್ಥಳಿಯ ಪತ್ರಿಕೆಗಳು ಆರಂಭವಾದವು. ಅವುಗಳಲ್ಲಿ ಅತ್ಯಂತ ಜನಪರವಾಗಿ ಉಳಿದ ಪತ್ರಿಕೆ ‘ಆಂದೋಲನ’. ಪತ್ರಿಕಾ ಮೌಲ್ಯಕ್ಕೆ ಅಪಚಾರ ಮಾಡದೆ ಸಿದ್ಧಾಂತವನ್ನು ಕೊನೆವರೆಗೂ ಉಳಿಸಿಕೊಂಡು ಬಂದಿದ್ದು ಕೋಟಿ ಅವರ ಶ್ರೇಷ್ಠ ಗುಣ ಎಂದು ತಿಳಿಸಿದರು. ಪತ್ರಿಕೆಯನ್ನು ಉದ್ಯಮವಾಗಿ ನೋಡದೇ ಸೇವಾ ಕ್ಷೇತ್ರವಾಗಿ ರೂಪಿಸಿದ್ದರಿಂದ ಜನಮಾನಸದ ಒಳಗೆ ಕೋಟಿ ಅವರು ಪ್ರೀತಿ ವಿಶ್ವಾಸ ಪಡೆದರು. ಆಂದೋಲನದ ಸಮಾಜ ಸೇವೆಯನ್ನು ಕಂಡ ರಾಜ್ಯಮಟ್ಟದ ಪತ್ರಿಕೆಗಳು ಅದನ್ನು ಅನುಸರಿಸಿದವು. ಕೋಟಿ ಅವರಿಗಿದ್ದ ಸಾಮಾಜಿಕ ಕಳಕಳಿ ಅನೇಕ ಜನರಿಗೆ ಪ್ರೇರಣೆಯಾಯಿತು ಎಂದು ನುಡಿದರು. ಅಸ್ಪಶ್ಯರ ಕೇರಿಯಲ್ಲಿ ಸಹಪಂಕ್ತಿ ಭೋಜನ ಕಾರ್ಯಕ್ರಮ ಆಯೋಜಿಸಿದ್ದಾಗ ಪಾಲ್ಗೊಂಡಿದ್ದರು. ಪರಿವರ್ತನೆಯಲ್ಲಿ ನಂಬಿಕೆ ಇಟ್ಟಿದ್ದ ಅವರು ಸಮ ಸಮಾಜದ ಕನಸು ಕಂಡಿದ್ದರು. ಬದುಕಿನುದಕ್ಕೂ ಎಲ್ಲರನ್ನೂ ಅಪ್ಪಿಕೊಂಡು ಜೀವನ ಸಾಗಿಸಿದರು. ಕೋಟಿ ಅವರ ಆಶಯದಲ್ಲಿಯೇ ಪತ್ರಿಕೆ ಮುನ್ನಡೆಸುವಂತೆ ಸಮಾರಂಭದಲ್ಲಿ ಹಾಜರಿದ್ದ ರವಿಕೋಟಿ ಅವರಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಉರಿಲಿಂಗ ಪೆದ್ದಿಗಳ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ, ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಕೆ.ದೀಪಕ್, ಆಂದೋಲನ ದಿನಪತ್ರಿಕೆ ಸಂಪಾದ ರವಿಕೋಟಿ, ಡಾ.ಸಿದ್ದರಾಜು, ಸಾಹಿತಿ ಮುಲ್ಕುಂಡಿ ಮಹದೇವಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.







