ದೇಶದೊಳಗಿನ ದುಷ್ಠಶಕ್ತಿಗಳ ವಿರುದ್ಧ ಹೋರಾಟ ಇಂದಿನ ಅನಿವಾರ್ಯ: ಸಸಿಕಾಂತ್ ಸೆಂಥಿಲ್
ಕದ್ರಿ ಹಿಲ್ಸ್ನ ಯೋಧರ ಯುದ್ಧ ಸ್ಮಾರಕದ ಬಳಿ ವಿಜಯ ದಿವಸ ಆಚರಣೆ
ಮಂಗಳೂರು, ಡಿ.16: ದೇಶದೊಳಗಿನ ದುಷ್ಠಶಕ್ತಿಗಳ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಪಾಕಿಸ್ತಾನದ ಮೇಲೆ 1971ರಲ್ಲಿ ಭಾರತ ವಿಜಯ ಸಾಧಿಸಿದ ಸ್ಮರಣಾರ್ಥ ದಕ್ಷಿಣ ಕನ್ನಡ ಜಿಲ್ಲಾ ಪೂರ್ವ ಸೈನಿಕ ಸಂಘದ ವತಿಯಿಂದ ನಗರದ ಕದ್ರಿ ಹಿಲ್ಸ್ನ ಯೋಧರ ಯುದ್ಧ ಸ್ಮಾರಕ ಬಳಿ ಇಂದು ಬೆಳಗ್ಗೆ ನಡೆದ ವಿಜಯ ದಿವಸ ಕಾರ್ಯಕ್ರಮದಲ್ಲಿ ಯುದ್ಧ ಸ್ಮಾರಕಕ್ಕೆ ಹೂಗುಚ್ಚ ಅರ್ಪಿಸಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಿ ಬಳಿಕ ಅವರು ಮಾತಾಡುತ್ತಿದ್ದರು.
ದೇಶದೊಳಗೆ ಜಾತಿ- ಧರ್ಮಗಳ ನಡುವೆ ಕೆಲವೊಂದು ವ್ಯಕ್ತಿಗಳು ಸಂಘರ್ಷ ಮಾಡುವ ಕೆಲಸ ಮಾಡುತ್ತಿದೆ. ಹುತಾತ್ಮ ಸೈನಿಕರ ಪ್ರೇರಣೆ ನಡೆದುಕೊಂಡು, ಇವರ ವಿರುದ್ಧ ಯುದ್ಧ ಸಾರಬೇಕೆಂದರು.
ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಮಾತನಾಡಿ, ಯುವಕರು ದೇಶಸೇವೆಗಾಗಿ ಪಣತೊಡಬೇಕು. ಇಂತಹ ಕಾರ್ಯಕ್ರಮ ಹಲವಾರು ಮಂದಿಗೆ ಸ್ಫೂರ್ತಿದಾಯಕ ಎಂದರು.
ಈ ವೇಳೆ ಹಲವಾರು ಮಂದಿ ಯೋಧರ ಯುದ್ಧ ಸ್ಮಾರಕಕ್ಕೆ ಹೂಹಾರ ಹಾಗೂ ಹೂಗುಚ್ಚ ಅರ್ಪಿಸಿ ನಮನ ಸಲ್ಲಿಸಿದರು.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಎಂ.ಆರ್.ರವಿ, ಎನ್ಸಿಸಿ ಕಮಾಂಡರ್ ಕರ್ನಲ್ ಅನಿಲ್ ನೌಥಿಯಾಲ್, ಕರ್ನಲ್ ಎನ್.ಶರತ್ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾ ಪೂರ್ವ ಸೈನಿಕರ ಸಂಘದ ಕಾರ್ಯದರ್ಶಿ ಎಸ್.ಎಂ.ಐರನ್, ಕೋಶಾಧಿಕಾರಿ ಕರ್ನಲ್ ಬಾಲಕೃಷ್ಣ ಮತ್ತಿತರು ಉಪಸ್ಥಿತರಿದ್ದರು.