ಜಂಗಮ ಸ್ವರೂಪಿ ಧರ್ಮ ಸ್ಥಾವರವಾದರೆ ಕಟುಕನಾಗುತ್ತೆ: ಸೌಹಾರ್ದ ಸಮಾವೇಶದಲ್ಲಿ ಶಿವಸುಂದರ್

ಉಡುಪಿ, ಡಿ.16: ರಾಜಾಶ್ರಯ ಪಡೆದ ಧರ್ಮವೊಂದು ರಕ್ತಪಿಪಾಸುವಾಗುತ್ತದೆ. ಜಂಗಮ ಸ್ವರೂಪಿ ಧರ್ಮವೊಂದು ಸ್ಥಾವರವಾದಾಗ ಅದು ಕಟಕನಾಗಿ ಬದಲಾಗುತ್ತದೆ ಎಂದು ಖ್ಯಾತ ಚಿಂತಕ ಹಾಗೂ ಅಂಕಣಕಾರ ಬೆಂಗಳೂರಿನ ಶಿವಸುಂರ್ ಅಭಿಪ್ರಾಯ ಪಟ್ಟಿದ್ದಾರೆ.
ಸ್ಟೂಡೆಂಟ್ಸ್ಇಸ್ಲಾಮಿಕ್ ಆರ್ಗ್ನೈಝೇಷನ್ ಆಫ್ ಇಂಡಿಯಾ (ಎಸ್ಐಒ) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಇಂದು ನಗರದ ಪುರಭವನದಲ್ಲಿ ನಡೆದ ‘ಹಲವು ಧರ್ಮಗಳು- ಒಂದು ಭಾರತ’ ಸೌಹಾರ್ದ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತಿದ್ದರು.
ಧರ್ಮ, ದೇವರು ನಮ್ಮನ್ನು ಮನುಷ್ಯನನ್ನಾಗಿ ಮಾಡಬೇಕು. ನಮ್ಮೊಳಗಿನ ವಿಚಾರವನ್ನು ಜಂಗಮವಾಗಿಸಬೇಕು. ಆದರೆ ಅದು ಸ್ಥಾವರವಾದಾಗ ಕಟುಕ ನಾಗಿ ಮಾಡಿ ಸಂವೇದನೆ, ಮನುಷ್ಯತ್ವವನ್ನೇ ಸಾಯಿಸುತ್ತದೆ. ಆಗ ದೇಶವೇ ಕಟುಕ ದೇಶವಾಗುತ್ತೆ ಎಂದವರು ನುಡಿದರು.
ಇಂದು ದೇಶದ ರಾಜಕಾರಣಕ್ಕೆ ತಾಯ್ತನದ ಅಗತ್ಯವಿದೆ. ಇಂದು ಪುರುಷತ್ವ ಅಹಂಕಾರದಿಂದ ಮೆರೆಯುತ್ತಿದೆ. ನಮ್ಮ ಮಹಿಳೆಯರು ರಾಜಕಾರಣಕ್ಕೆ ತಾಯ್ತನವನ್ನು ನೀಡಬೇಕಾಗಿದೆ ಎಂದ ಶಿವಸುಂದರ್, ಪರರನ್ನು, ಪರಧರ್ಮವನ್ನು ದ್ವೇಷಿಸುವುದು ಧರ್ಮವಲ್ಲ, ಅದು ರಾಜಕಾರಣ. ಧರ್ಮದ ಹೆಸರಿನಲ್ಲಿ ಮಾಡುವ ರಾಜಕಾರಣವನ್ನು ನಾವು ವಿರೋಧಿಸಬೇಕಾಗಿದೆ ಎಂದರು.
ಬಿಜೆಪಿ ಹಾಗೂ ಸಂಘಪರಿವಾರ 2022ಕ್ಕೆ ಭಾರತವನ್ನು ಸಂಪೂರ್ಣ ಹಿಂದೂರಾಷ್ಟ್ರವಾಗಿ ಮಾಡುವ ಕನಸನ್ನು ಕಾಣುತ್ತಿದೆ. ಸಂಘಪರಿವಾರದ ಹಿಂದೂ ರಾಷ್ಟ್ರ ಎಂಬುದು ಹಿಂದೂಗಳ ಪರವಾದ ರಾಷ್ಟ್ರವಲ್ಲ. ಅದು ಈ ದೇಶದ ಬಹುಸಂಖ್ಯಾತ ಹಿಂದೂಗಳ ವಿರೋಧಿಯಾಗಿಯೇ ಇರುತ್ತದೆ. ಅದರ ಹಿಂದೂ ರಾಷ್ಟ್ರ ಅಂಬಾನಿ, ಅದಾನಿಗಳ ರಾಷ್ಟ್ರವೇ ಹೊರತು ಬಡ ಬೋರೇಗೌಡನ ರಾಷ್ಟ್ರವಲ್ಲ. ಅದು ದೇಶದ ದಲಿತ, ಹಿಂದುಳಿದ, ಮಹಿಳೆಯರ ವಿರೋಧಿ ರಾಷ್ಟ್ರವಾಗಿಯೇ ಇರುತ್ತದೆ ಎಂಬ ಎಚ್ಚರಿಕೆ ನಮಗಿರಬೇಕು ಎಂದು ಶಿವಸುಂದರ್ ಹೇಳಿದರು.
ಹಿಟ್ಲರ್ ಜರ್ಮನ್ ದೇಶವನ್ನು ಆಳಿದ್ದು ಕೇವಲ ಹತ್ತು ವರ್ಷ ಮಾತ್ರ. ಆದರೆ ಸಂಘಪರಿವಾರ ಕಳೆದ 100 ವರ್ಷಗಳಿಂದ ತನ್ನ ಗುರಿ ಸಾಧಿಸಲು ಮಸಲತ್ತು ನಡೆಸುತ್ತಾ ಇದೆ. 25 ವರ್ಷಗಳ ನಂತರ ಒಂದೇ ಪಕ್ಷ ಕೇಂದ್ರ ಹಾಗೂ 17 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ. ಇನ್ನು ನಾಲ್ಕು ರಾಜ್ಯಗಳು ಅದರ ಕೈವಶವಾದರೆ, ಮೊದಲ ಬಾರಿ ರಾಜ್ಯಸಭೆಯಲ್ಲೂ ಅದೇ ಮೇಲುಗೈ ಸಾಧಿಸಲಿದೆ. ಆಗ ಸಂವಿಧಾನವನ್ನು ತಿದ್ದುಪಡಿ ಮಾಡಲು ಅದಕ್ಕೆ ಬೇಕಾದ ಅಧಿಕಾರ ಸಿಗುತ್ತದೆ. ಈ ಅಪಾಯವನ್ನು ನಾವು ಅರಿತಿರಬೇಕು. ಇದನ್ನು ತಪ್ಪಿಸಲು ಸಾಧ್ಯವಿರುವುದು ದೇಶದ ಶ್ರೀಸಾಮಾನ್ಯನಿಗೆ ಮಾತ್ರ ಎಂದು ಶಿವಸುಂದರ್ ನುಡಿದರು.
ಎಸ್ಐಒನ ರಾಷ್ಟ್ರೀಯ ಅಧ್ಯಕ್ಷ ನಹಾಸ್ ಮಾಳ ಅವರು ಸೌಹಾರ್ದ ಸಮಾವೇಶವನ್ನು ಉದ್ಘಾಟಿಸಿದರು. ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ ಅಧ್ಯಕ್ಷತೆ ವಹಿಸಿದ್ದರು. ಮಲ್ಪೆ ಯುಬಿಎಂಇ ಚರ್ಚ್ನ ಧರ್ಮಗುರುಗಳಾದ ವಂ.ಡೇವಿಡ್ ಎಫ್. ನಿರ್ಮಾನಿಕ್, ಜಮಾತೆ ಇಸ್ಲಾಮಿ ಹಿಂದ್ ಮುಖಂಡರಾದ ಬಿಲಾಲ್ ಮಲ್ಪೆ ಹಾಗೂ ಅಕ್ಬರ್ ಅಲಿ ಉಪಸ್ಥಿತರಿದ್ದರು.
ಎಸ್ಐಒನ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಡಾನಿಶ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಶುಐಬ್ ಮಲ್ಪೆ ವಂದಿಸಿ, ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.







