ಸಾರಾಯಿ ಮುಕ್ತ ರಾಜ್ಯವಾಗಲಿ
ಮಾನ್ಯರೇ,
ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಸಾರಾಯಿ ಮುಕ್ತ ಮತ್ತು ವ್ಯಸನ ಮುಕ್ತ ರಾಜ್ಯವನ್ನಾಗಿ ಮಾಡುವುದರ ಜೊತೆಗೆ ಸದೃಢ ಸುಂದರವಾದ ಸಮಾಜ ನಿರ್ಮಿಸುತ್ತೇವೆ ಎಂಬ ಭರವಸೆ ಮಾತುಗಳನ್ನು ಹೇಳಿಕೊಂಡು ಅದೆಷ್ಟೋ ಪಕ್ಷಗಳು ಅಧಿಕಾರಕ್ಕೆ ಬಂದು ಹೋದವು. ಆದರೆ ಕರ್ನಾಟಕ ಮಾತ್ರ ಸಾರಾಯಿ ಮುಕ್ತ ರಾಜ್ಯವಾಗಲೇ ಇಲ್ಲ. ಬದಲಿಗೆ ರಾಜ್ಯದಲ್ಲಿ ಸಾರಾಯಿ ಕುಡಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಕುಡಿತದ ದುಶ್ಚಟದಿಂದ ಅದೆಷ್ಟೋ ಬಡ ಕುಟುಂಬಗಳು ತಮ್ಮ ಆಶ್ರಯದಾತರನ್ನೇ ಕಳೆದುಕೊಂಡು ಬೀದಿಗೆ ಬಂದಿವೆ. ಹಳ್ಳಿಯ ಬಡ ಹೆಣ್ಣು ಮಕ್ಕಳು ಕುಡುಕ ಗಂಡನನ್ನು ಕಟ್ಟಿಕೊಂಡು ನಿತ್ಯ ಕಣ್ಣೀರಿನಲ್ಲೇ ಬದುಕುವಂತಾಗಿದೆ. ಗಂಡಂದಿರ ಕುಡಿತ ಸಹಿಸದೆ ಸಾವಿರಾರು ಗೃಹಿಣಿಯರು ಆತ್ಮಹತ್ಯೆ ಮಾಡಿಕೊಂಡ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.
2006ಗಿಂತಲೂ ಮುಂಚೆ ಸಾರಾಯಿ ಪಾಕೆಟ್ 10ರಿಂದ 12 ರೂಪಾಯಿಗೆ ದೊರೆಯುತ್ತಿದ್ದವು. ಆಗ ತಮ್ಮ ದುಡಿತದ ಅರ್ಧ ಭಾಗವನ್ನು ಮನೆ ಸಂಸಾರಕ್ಕೆ ನೀಡಿ ಉಳಿದ ಅರ್ಧದಷ್ಟು ಹಣ ಕುಡಿತಕ್ಕೆ ಖರ್ಚು ಮಾಡುತ್ತಿದ್ದರು. ಆದರೆ 2006ರಲ್ಲಿ ಬಂದ ಸಮ್ಮಿಶ್ರ ಸರಕಾರ ಮಧ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧ ಮಾಡದೆ ಕಡಿಮೆ ಬೆಲೆಯ ಸಾರಾಯಿ ಪಾಕೇಟನ್ನಷ್ಟೇ ನಿಷೇಧ ಮಾಡಿತು. ಹೀಗಾಗಿ ಮದ್ಯವ್ಯಸನಿಗಳು ತಮ್ಮ ದಿನ ದುಡಿತದ ಹಣವನ್ನು ಸಂಸಾರಕ್ಕೆ ಕೊಡದೆ ಎಲ್ಲಾ ಹಣವನ್ನು ಸಾರಾಯಿಗೆ ಸುರಿಯುತಿದ್ದಾರೆ.
ಅಲ್ಲದೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿ ಹೆಚ್ಚುತ್ತಿದೆ. ಈ ಅಕ್ರಮ ಮದ್ಯಕ್ಕೆ ಗ್ರಾಮೀಣ ಭಾಗದ ಯುವಕರೂ ಬಲಿ ಬೀಳುತ್ತಿದ್ದಾರೆ. ಮನೆಯಲ್ಲಿ ಪಾಲಕರು ಹಣ ಕೊಡದೇ ಇದ್ದಲ್ಲಿ ದರೋಡೆ ಕಳ್ಳತನದಂತಹ ದುಷ್ಕೃತ್ಯಗಳಲ್ಲಿ ತೊಡಗಿ ವ್ಯಸನದ ದಾಸರಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮದ್ಯ ಮಾರಾಟ ನಿಷೇಧ ಮಾಡುವಂತೆ ಮಹಿಳೆಯರು, ಕನ್ನಡ ಪರ ಸಂಘಟನೆಗಳು, ಸಂಘ ಸಂಸ್ಥೆಗಳು, ಸಾಕಷ್ಟು ಬಾರಿ ಹೋರಾಟ, ಪ್ರತಿಭಟನೆಗಳನ್ನು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸರಕಾರವು ಇನ್ನಾದರೂ ನಮ್ಮ ರಾಜ್ಯದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎನ್ನುವುದು ಲಕ್ಷಾಂತರ ಬಡ ಕುಟುಂಬಗಳ ಆಶಯವಾಗಿದೆ.