ಉಡುಪಿ: ವಿಕಲಚೇತನರ ಬಸ್ ಪಾಸ್ ನವೀಕರಣ
ಉಡುಪಿ, ಡಿ.19:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಿಕಲಚೇತನ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್ಸು ಪಾಸುಗಳನ್ನು ವಿತರಿಸುತಿದ್ದು, 2017ನೇ ಸಾಲಿನಲ್ಲಿ ವಿತರಿಸಿರುವ ರಿಯಾಯಿತಿ ಬಸ್ ಪಾಸುಗಳ ಅವಧಿ ಡಿ.31ಕ್ಕೆ ಮುಕ್ತಾಯಗೊಳ್ಳುವ ಕಾರಣ, ಅವುಗಳ ನವೀಕರಣ ಮಾಡುವಂತೆ ಸೂಚಿಸಲಾಗಿದೆ.
2018ನೇ ಸಾಲಿಗಾಗಿ ಈ ಬಸ್ಪಾಸುಗಳನ್ನು ಜ.1ರಿಂದ ನವೀಕರಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಹೊಸ ಪಾಸುಗಳನ್ನು ನೀಡಲಾಗುವುದು. ವಿಕಲಚೇತನರ ರಿಯಾಯಿತಿ ಬಸ್ಪಾಸುಗಳನ್ನು ಫಲಾನುಭವಿಗಳು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ 2017ನೇ ಸಾಲಿನಲ್ಲಿ ವಿತರಿಸಿದ ಪಾಸುಗಳನ್ನು ಮುಂದಿನ ಫೆ.28ರವರೆಗೆ ಮಾನ್ಯ ಮಾಡಲಾಗುವುದು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು (ಮೂಡಬಿದ್ರೆ ಸೇರಿದಂತೆ) ಹಾಗೂ ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ ಹಾಗೂ ಕುಂದಾಪುರ ತಾಲೂಕು ಗಳ ವಿಕಲಚೇತನರು, ವಿಕಲಚೇತನರ ರಿಯಾಯಿತಿ ದರದ ನವೀಕರಣದ ಪಾಸನ್ನು ಪಡೆದುಕೊಳ್ಳಲು ವಿಭಾಗಕ್ಕೆ ಬಂದು ಅರ್ಜಿ ಪಡೆದುಕೊಂಡು ಅರ್ಜಿ ಸಲ್ಲಿಸಬೇಕು. ಹೊಸ/ನವೀಕರಣದ ಬಸ್ಪಾಸು ಪಡೆದುಕೊಳ್ಳಲಿಚ್ಛಿಸುವವರು ಅರ್ಜಿಯೊಂದಿಗೆ 660ರೂ.ನಗದು ಹಾಗೂ ಮೂರು ಪಾಸ್ಪೋರ್ಟ್ ಸೈಜಿನ ಫೊಟೋಗಳನ್ನು ಸಲ್ಲಿಸಬೇಕು. ಸರಕಾರಿ ನೌಕರಿಯಲ್ಲಿರುವ ವಿಕಲಚೇನರಿಗೆ ಈ ಸೌಲಭ್ಯ ಲಭ್ಯವಿರುವುದಿಲ್ಲ.
ನವೀಕರಣದ ವೇಳೆ ಹಳೆಯ ಪಾಸುಕಾರ್ಡನ್ನು ಕಡ್ಡಾಯವಾಗಿ ಹಿಂದಿರು ಗಿಸಬೇಕು. ಗುರುತಿನಚೀಟಿನ ಮಾನ್ಯತಾ ಅವಧಿಯನ್ನು ಪರಿಶೀಲಿಸಲು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿತರಿಸುವ ಗುರುತಿನ ಚೀಟಿಯ ಮೂಲ ಪ್ರತಿಯನ್ನು ತರಬೇಕು. ವಿಳಾಸದ ದೃಢೀಕರಣ ದಾಖಲೆ(ಆಧಾರ್ಕಾರ್ಡ್) ತರಬೇಕು. ಪಾಸುಗಳನ್ನು ನವೀಕರಿಸಲು ಫೆ.28 ಕೊನೆಯ ದಿನವಾಗಿರುತ್ತದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾ ಗುವುದಿಲ್ಲ ಎಂದು ಮಂಗಳೂರು ಕರಾರಸಾಸಂನ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.







