ಮೊದಲು ಪನ್ಸಾರೆ, ದಾಬೋಲ್ಕರ್ ಹಂತಕರನ್ನು ಬಂಧಿಸಿ: ರಾಜನಾಥ್ ಸಿಂಗ್ಗೆ ರಾಮಲಿಂಗಾರೆಡ್ಡಿ ತಿರುಗೇಟು

ಬೆಂಗಳೂರು, ಡಿ.20: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಗೌರಿ ಹಂತಕರನ್ನು ಬಂಧಿಸುತ್ತೇವೆ ಎಂಬ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿಕೆ ಹಾಸ್ಯಾಸ್ಪದ. ಮೊದಲು ಅವರ ಕಾರ್ಯವ್ಯಾಪ್ತಿಗೆ ಬರೋ ಸಿಬಿಐ ಕೈಗೆತ್ತಿಕೊಂಡಿರುವ ಪನ್ಸಾರೆ, ದಾಬೋಲ್ಕರ್ ಹತ್ಯೆ ಪ್ರಕರಣದ ಆರೋಪಿಗಳ ಬಂಧನವಾಗಲಿ ಎಂದು ರಾಜ್ಯ ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೌರಿ ಹಂತಕರನ್ನು ಬಂಧಿಸುತ್ತೇವೆ ಎಂಬ ಹೇಳಿಕೆಗೆ ಖಾರವಾಗಿ ತಿರುಗೇಟು ನೀಡಿದರು. ಗೌರಿ ಸಾವಿನ ವೇಳೆ ಅತ್ತ ತಲೆ ಹಾಕೋ ಕೆಲಸವನ್ನು ಬಿಜೆಪಿಯವರು ಮಾಡಿಲ್ಲ. ಈಗ ನಮ್ಮ ಸರಕಾರ ಬಂದರೆ ಆರೋಪಿಗಳನ್ನು ಬಂಧಿಸುತ್ತೇವೆ ಅನ್ನೋದು ಸರಿಯಾ ಇದು ನಿಮ್ಮ ಜಾಣ ಕುರುಡುತನ ಅಲ್ಲವೇ ಎಂದು ರೆಡ್ಡಿ ವ್ಯಂಗ್ಯವಾಡಿದರು.
ರಾಜನಾಥ್ ಸಿಂಗ್ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಅನ್ನೋ ಆರೋಪವನ್ನು ಮಾಡಿದ್ದಾರೆ. ಅವರ ಪಕ್ಷದವರು ಕೊಟ್ಟ ಮಾಹಿತಿಯನ್ನಾಧಾರಿಸಿ ರಾಜ್ಯ ಸರಕಾರದ ಮೇಲೆ ಅವರು ಈ ರೀತಿ ಆರೋಪ ಮಾಡಿರಬಹುದು. ಕೇಂದ್ರದ ಗೃಹಸಚಿವರು ನಮ್ಮ ಮೇಲೆ ಬೆರಳು ತೋರಿಸೋ ಮೊದಲು ನಿಮ್ಮದೇ ಆಡಳಿತ ವೈಖರಿ ಬಗ್ಗೆ ನೋಡಿಕೊಳ್ಳಿ ಎಂದು ಸವಾಲೆಸೆದರು.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಕೇಂದ್ರದ ಮಾಹಿತಿ ಪ್ರಕಾರ ನಮ್ಮ ರಾಜ್ಯ ಅಪರಾಧ ಪ್ರಕರಣಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಆದರೆ ಮೊದಲೆರಡು ಸ್ಥಾನಗಳಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿರುವ ಉತ್ತರ ಪ್ರದೇಶ, ಮಧ್ಯ ಪ್ರದೇಶ ಇದೆ. ಹೀಗಿರುವಾಗ ರಾಜನಾಥ್ ಸಿಂಗಲ್ ನಮ್ಮ ಬಗ್ಗೆ ಅವರು ಮಾಡಿರೋ ಆರೋಪ ಎಷ್ಟರಮಟ್ಟಿಗೆ ಸರಿ. ಕೇಂದ್ರ ಗೃಹಸಚಿವರು ತವರು ರಾಜ್ಯವಾದ ಉತ್ತರ ಪ್ರದೇಶ ಅಪರಾಧ ಪ್ರಮಾಣದಲ್ಲಿ ಸಂಖ್ಯೆ ದೇಶಕ್ಕೇ ಪ್ರಥಮ ಎಂಬ ಕುಖ್ಯಾತಿಗೆ ಒಳಗಾಗಿದೆ ಇದನ್ನು ಇದನ್ನ ಕೇಂದ್ರ ಗೃಹ ಸಚಿವರು ಅರಿತುಕೊಳ್ಳಬೇಕು ಎಂದರು.
ಲೋಕಾಯುಕ್ತವನ್ನು ಬದಲಾಯಿಸಿ ಎಸಿಬಿ ಮಾಡಿ ಅದಕ್ಕೆ ಅದನ್ನು ಸತ್ವಹೀನವನ್ನಾಗಿಸಲಾಗಿದೆ ಅಂತ ರಾಜನಾಥ್ ಸಿಂಗ್ ಅವರ ಆರೋಪಿಸಿದ್ದಾರೆ. ಆದರೆ ನಾವು ಅಂತಹ ಯಾವುದೇ ಕೆಲಸವನ್ನು ಲೋಕಾಯುಕ್ತದ ವಿಚಾರದಲ್ಲಿ ಮಾಡಿಲ್ಲ. ಲೋಕಾಯುಕ್ತ ಸತ್ವ ಕಳೆದುಕೊಂಡದಿದ್ದರೆ ಅದು ಬಿಜೆಪಿ ಆಡಳಿತದ ಅವಧಿಯಲ್ಲಿ ಮಾತ್ರ. ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಗುಜರಾತ್ನಲ್ಲಿ ಹತ್ತು ವರ್ಷಗಳ ಕಾಲ ಲೋಕಾಯುಕ್ತವೇ ಇರಲಿಲ್ಲ. ಹೀಗಿರುವಾಗ ಬಿಜೆಪಿಯವರು ನಮ್ಮ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ ಕೇಂದ್ರ ಗೃಹಸಚಿವರು ಈ ರೀತಿ ಹೇಳಿಕೆ ಬೇಜವಾಬ್ದಾರಿಯುತ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.







