ಡಿ. 24: ಪರ್ಕಳದಲ್ಲಿ ಪದ್ಮಶಾಲಿ ಕ್ರೀಡೋತ್ಸವ
ಉಡುಪಿ, ಡಿ.20: ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಆಶ್ರಯದಲ್ಲಿ 26ನೇ ಪದ್ಮಶಾಲಿ ಕ್ರೀಡೋತ್ಸವವು ಡಿ.24ರಂದು ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ಪರ್ಕಳ ಪ್ರೌ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಹಿರಿಯರಾದ ಸಿದ್ಧಕಟ್ಟೆ ಕೊಯಿಲದ ನೋಣಯ್ಯ ಶೆಟ್ಟಿಗಾರ್ ದೀಪ ಬೆಳಗಿಸುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಬಾರಕೂರು ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಿ.ಪುರುಷೋತ್ತಮ ಶೆಟ್ಟಿಗಾರ್ ಧ್ವಜಾರೋಹಣ ಮಾಡಲಿದ್ದಾರೆ. ಪರ್ಕಳ ವೀರಭದ್ರ ಸೌಹಾರ್ದ ಕ್ರೆಡಿಟ್ ಕೋ ಆಪರೇಷನ್ನ ಅಧ್ಯಕ್ಷ ಸುಕೇಶ್ ಶೆಟ್ಟಿಗಾರ್ ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಲಿದ್ದಾರೆ.
ಈ ಕ್ರೀಡೋತ್ಸವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ 16 ಶ್ರೀ ವೀರಭದ್ರ ದೇವಸ್ಥಾನಗಳ ಆಡಳಿತ ಮೊಕ್ತೇಸರರು ಹಾಗೂ 11 ವಲಯ ಸಂಘ ಸಂಸ್ಥೆಗಳ ಅಧ್ಯಕ್ಷರುಗಳ ಉಪಸ್ಥಿತಿಯಲ್ಲಿ ನಡೆಯಲಿದ್ದು, ಸಮಸ್ತ ಸಮಾಜ ಭಾಂದವರು ಇದರಲ್ಲಿ ಪಾಲ್ಗೊಳ್ಳಬೇಕೆಂದು ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾ ಪ್ರಧಾನ ಕಾರ್ಯದರ್ಶಿ ಜಯರಾಮ್ ಶೆಟ್ಟಿಗಾರ್ ಮಣಿಪಾಲ ಹಾಗೂ ಕ್ರೀಡಾ ಸಂಚಾಲಕ ಕೆ. ಸುರೇಂದ್ರ ಶೆಟ್ಟಿ ಮಂಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





