ನೇತ್ರಾವತಿ ಸೇತುವೆಯಿಂದ ನದಿತೀರದ ಎನ್ಎಂಪಿಟಿವರೆಗೆ ರಸ್ತೆ ನಿರ್ಮಾಣ
ಮಂಗಳೂರು, ಡಿ.21: ನೇತ್ರಾವತಿ ಸೇತುವೆಯಿಂದ ನದಿತೀರದಲ್ಲಿ ಮಂಗಳೂರು ಹಳೆ ಬಂದರು, ಸುಲ್ತಾನ್ ಬತ್ತೇರಿ, ತಣ್ಣೀರುಬಾವಿಯಾಗಿ ನವ ಮಂಗಳೂರು ಬಂದರಿಗೆ ಪರ್ಯಾಯ ಹೆದ್ದಾರಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಜೆ.ಆರ್. ಲೋಬೊ ಹೇಳಿದರು.
ಮಲ್ಲಿಕಟ್ಟೆಯಲ್ಲಿರುವ ತನ್ನ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಈ ಯೋಜನೆಗೆ ಸುಮಾರು 1,000 ಕೋ.ರೂ. ಹೂಡಿಕೆಯಾಗಲಿದೆ ಎಂದರು.
ಸುಲ್ತಾನ್ ಬತ್ತೇರಿಯಲ್ಲಿ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ಸೇತುವೆ ನಿರ್ಮಾಣವಾದರೆ ತೂಗುಸೇತುವೆಯ ಅಗತ್ಯವಿರುವುದಿಲ್ಲ. ಹಾಗಾಗಿ ಅಲ್ಲಿ ತೂಗುಸೇತುವೆ ನಿರ್ಮಾಣವನ್ನು ಕೈಬಿಡಲಾಗುವುದು ಎಂದ ಅವರು, ಈ ರಸ್ತೆಯನ್ನು ಬಹುಪಯೋಗಿ ರಸ್ತೆಯನ್ನು ಮಾಡುವ ಉದ್ದೇಶವಿದೆ ಎಂದರು.
ಇಲ್ಲಿ ರಸ್ತೆಯಾದರೆ ಮಂಗಳೂರು ಹಳೆ ಬಂದರಿನಲ್ಲಿ ಮೀನುಗಾರಿಕೆ ಪ್ರಗತಿ ಸಾಧ್ಯವಿದೆ. ಪ್ರವಾಸೋದ್ಯಮವೂ ಬೆಳೆಯಲು ಅವಕಾಶವಾಗುವುದು. ಜೊತೆಗೆ ವಾಹನಗಳ ದಟ್ಟಣಿಯೂ ಕಡಿಮೆಯಾಗಲಿದೆ ಎಂದು ಶಾಸಕ ಜೆ.ಆರ್.ಲೋಬೊ ವಿವರಿಸಿದರು.
ಈ ರಸ್ತೆಯ ಬಗ್ಗೆ ಸರ್ವೇ, ಅಂದಾಜು ತಯಾರಿಯಲು ತಂತ್ರಜ್ಞರನ್ನು ನೇಮಕಮಾಡಿ 2.5 ಕೋ.ರೂ. ಒದಗಿಸಲಾಗಿದೆ. ಇದಲ್ಲದೆ ನೇತ್ರಾವತಿ ಸೇತುವೆಯಿಂದ ನದಿತೀರದಲ್ಲಿ ಕಣ್ಣೂರು ಮಸೀದಿಯವರೆಗೆ ಪರ್ಯಾಯ ರಸ್ತೆ ನಿರ್ಮಿಸಲಾಗುವುದು. ಈ ಎರಡೂ ರಸ್ತೆಗಳೂ ಮಂಗಳೂರಿನ ಚಿತ್ರಣವನ್ನೇ ಬದಲಾಯಿಸಲಿದೆ ಎಂದು ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು.
ಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆಯ ಉಪಾಯುಕ್ತ (ಅಭಿವೃದ್ಧಿ) ಕೆ.ಎಸ್.ಲಿಂಗೇಗೌಡ, ಲೋಕೋಪಯೋಗಿ ಮತ್ತಿತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.







